ಎಸಿ ಶಾರ್ಟ್ ಸಕ್ಯೂಟ್ ನಿಂದ ಸ್ಫೋಟ; ತಾಯಿ, ಇಬ್ಬರು ಮಕ್ಕಳು ಮನೆಯಲ್ಲೇ ಸಜೀವ ದಹನ
ರಾಯಚೂರು (ಮಾ.6): ಮನೆಯಲ್ಲಿನ ಎಸಿ ಸ್ಫೋಟಗೊಂಡು ಮೂವರು ಸಜೀವ ದಹನ ಆಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಕ್ತಿನಗರದ ಆರ್ ಟಿಪಿಎಸ್ ಕಾಲೋನಿಯಲ್ಲಿ ಈ ಹೃದಯ ವಿದ್ರಾವಕ ಘಟನೆ ಜರುಗಿದೆ. ಘಟನೆಯಲ್ಲಿ ಮಂಡ್ಯ ಮೂಲದ ಗೃಹಿಣಿ ರಂಜಿತಾ(31), ಮಕ್ಕಳಾದ ತಾರುಣ್ಯ (6) ಮತ್ತು ಮೃದಲಾ (13) ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ.
ಮೃತ ರಂಜಿತಾ ಪತಿ ಸಿದ್ದಲಿಂಗಯ್ಯ ಸ್ವಾಮಿ ಆರ್ ಟಿಪಿಎಸ್ ನಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿನ್ನೆ ಸಂಜೆ ವೇಳೆ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದು ಮನೆಯ ಬೆಡ್ ರೂಮ್ ನ ಬಾಗಿಲು ಹಾಕಿಕೊಂಡು ನಿದ್ರೆಗೆ ಜಾರಿದ್ರು. ಈ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿ ಎಸಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಮನೆಯಲ್ಲಿ ಬೆಂಕಿಯ ಹೊಗೆಯ ಆವರಿಸಿದ್ದು ನೋಡಿದ ಸ್ಥಳೀಯರು ಶಕ್ತಿನಗರದ ಪೊಲೀಸರಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮನೆಯಲ್ಲಿ ಉರಿಯುತ್ತಿದ್ದ ಬೆಂಕಿ ನಂದಿಸಿದ್ರು. ಅಷ್ಟರಲ್ಲಿ ಮನೆಯಲ್ಲಿ ಇದ್ದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್ ಪಿ ಎಂ.ಜಿ.ಸತ್ಯನಾರಾಯಣ, ಸಿಪಿಐ ಪ್ರದೀಪ್ ತಳಕೇರಿ ಮತ್ತು ಪಿಎಸ್ಐ ಬಸವರಾಜ್ ಭೇಟಿ ನೀಡಿ ಪರಿಶೀಲಿಸಿ ಮೃತದೇಹಗಳನ್ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.