ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ; ಕಂಗನಾ ರಣಾವತ್ ಹೇಳಿಕೆ ವಿಡಿಯೋ ವೈರಲ್
ಹಿಮಾಚಲ ಪ್ರದೇಶ: ಲೋಕಸಭೆ ಚುನಾವಣೆ ದೇಶದಲ್ಲಿ ದಿನೇ ದಿನೇ ರಂಗೇರಿದೆ. ಅಬ್ಬರದ ಪ್ರಚಾರ, ಪರ ವಿರೋಧ ವಾಗ್ದಾಳಿ ನಡೆಸಿದ್ದಾರೆ. ಎದುರಾಳಿ ನಾಯಕರನ್ನು ಟೀಕಿಸುವ ಭರದಲ್ಲಿ ಕೆಲವೊಮ್ಮೆ ತಮ್ಮದೇ ಪಕ್ಷಕ್ಕೆ ಮುಜುಗರ ತಂದಿರುವ ಘಟನೆಗಳೂ ನಡೆಯುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಹೇಳಿಕೆ ಮೂಲಕ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಅಭ್ಯರ್ಥಿ ಕಂಗನಾ ರಾಣಾವತ್ ಆಭಾಸಕ್ಕೀಡಾಗಿದ್ದಾರೆ. ಪ್ರಚಾರ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಬಿಹಾರದ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಅವರನ್ನು ಟೀಕಿಸುವ ಭರದಲ್ಲಿ ತಮ್ಮದೇ ಪಕ್ಷ ಬಿಜೆಪಿ ಮುಖಂಡ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿತೇಜಸ್ವಿ ಸೂರ್ಯ ಹೆಸರು ಪ್ರಸ್ತಾಪಿಸಿ ಮುಜುಗರಕ್ಕೀಡಾಗಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಖುದ್ದು, ತೇಜಸ್ವಿ ಯಾದವ್ ಅವರೇ ಈ ವಿಡಿಯೋಗೆ ರಿಯಾಕ್ಟ್ ಮಾಡಿದ್ದಾರೆ.
ಕಂಗನಾ ಹೇಳಿದ್ದೇನು?
ಮಂಡಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಆರಂಭಿಸಿದ ಕಂಗನಾ ರಾಣಾವತ್, ತೇಜಸ್ವಿ ಯಾದವ್ ಅವರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಲು ಹೊರಟಿದ್ದರು. ತೇಜಸ್ವಿ ಯದವ್ ಬದಲು ತೇಜಸ್ವಿ ಸೂರ್ಯ ಎಂದು ಹೇಳಿದ ಕಂಗನಾ, ಪ್ರತಿಪಕ್ಷ ನಾಯಕರಿಗೆ ಏನಾಗಿದೆ? ಒಬ್ಬರು ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯುವ ಬಗ್ಗೆ ಮಾತನಾಡುತ್ತಾರೆ. ಅತ್ತ ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಏ.9ರಂದು ನವರಾತ್ರಿಯ ದಿನ ತೇಜಸ್ವಿ ಯಾದವ್ ಮೀನು ತಿನ್ನುವ ಫೋಟೋವನ್ನು ಶೇರ್ ಮಾಡಿಕೊಂಡು ಭಾರೀ ಟೀಕೆಗೆ ಗುರಿಯಾಗಿದ್ದರು. ಇದೇ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಕಂಗನಾ, ರಾಹುಲ್, ಅಖಿಲೇಶ್ ಯಾದವ್ ಮತ್ತು ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು. ಸಂಪೂರ್ಣವಾಗಿ ಹಾಳಾದ ರಾಜಕುಮಾರರನ್ನು ಹೊಂದಿರುವ ಪಕ್ಷಗಳಿವೆ. ಅಲ್ಲಿ ಚಂದ್ರನ ಮೇಲೆ ಆಲೂಗೆಡ್ಡೆ ಬೆಳೆಯುವ ರಾಹುಲ್ ಗಾಂಧಿ, ಗೂಂಡಾಗಿರಿ ಮಾಡುವ ಮತ್ತು ಮೀನು ತಿನ್ನುವ ತೇಜಸ್ವಿ ಸೂರ್ಯ ಮತ್ತು ಅಸಂಬದ್ದ ಹೇಳಿಕೆ ನೀಡುವ ಅಖಿಲೇಶ್ ಯಾದವ್ ಇದ್ದಾರೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಭಾಷೆಯನ್ನು ಅರ್ಥ ಮಾಡಿಕೊಳ್ಳದಿರುವ ಇಂತಹ ನಾಯಕರು ಹೇಗೆ ತಾನೇ ದೇಶವನ್ನು ನಡೆಸಬಲ್ಲರು ಎಂದು ಅವರು ವ್ಯಂಗ್ಯವಾಡಿರುವ ವಿಡಿಯೋ ವೈರಲ್ ಆಗಿದೆ.
Tejasvi Surya - Mujhe Kyu Toda.. 🤣 pic.twitter.com/jK46bwXwNu
— Narundar (@NarundarM) May 4, 2024