ಇನ್ನೋವಾ ಕಾರು-ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು
ಹಾಸನ(ಜು.21): ಇನ್ನೋವಾ ಕಾರಿಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ಇಂದು(ಶುಕ್ರವಾರ) ಸಂಜೆ ನಡೆದಿದೆ.
ಇನ್ನೋವಾ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಮೃತರನ್ನು ಕುಪ್ಪಳ್ಳಿಯ ಚೇತನ್(23), ತಟ್ಟೆಕೆರೆಯ ಪುರುಷೋತ್ತಮ್(28), ಗುಡ್ಡೇನ ಹಳ್ಳಿಯ ಅಶೋಕ್(35) ಹಾಗೂ ಚಿಗಳೂರು ಪಾಳ್ಯದ ದಿನೇಶ್(30) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಆಲೂರು ತಾಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮೃತರಲ್ಲಿ ಅಶೋಕ ವರ್ಕ್ ಶಾಪ್ ನಡೆಸುತ್ತಿದ್ದ. ಎಂಟು ವರ್ಷದ ಹಿಂದೆ ಈತನ ಸಹೋದರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನು ದಿನೇಶ್ ಬೆಂಗಳೂರಿನಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಕೆಎ-01-ಎಂಎಫ್-3445 ನಂಬರಿನ ಇನ್ನೋವಾ ಕಾರು ಸಕಲೇಶಪುರ ಕಡೆಯಿಂದ ಹಾಸನ ಕಡೆಗೆ ಬರುತ್ತಿತ್ತು. ಅದೇ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಸೇರಿದ ಕೆಎ-11-ಬಿ-1751 ನಂಬರಿನ ಟಿಪ್ಪರ್ ಲಾರಿ ಎದುರು ಕಡೆಯಿಂದ ಬರುತ್ತಿತು. ಈ ವೇಳೆ ಇನ್ನೋವಾ ಚಾಲಕ ಓವರ್ಟೇಕ್ ಮಾಡಲು ಹೋಗಿ ಟಿಪ್ಪರ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಗುಜರಿ ಸೇರುವ ವಸ್ತುವಿನಂತಾಗಿದೆ. ಹೀಗಾಗಿ ಕಾರಿನೊಳಗೆ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರ ತೆಗೆಯಲು ಸ್ಥಳೀಯರು ಪರದಾಡಬೇಕಾಯಿತು. ಕೆಲವರು ಹಾರೆ ಮೊದಲಾದ ವಸ್ತುಗಳನ್ನು ತಂದು ಡೋರ್ ಹಾಗೂ ಕಿಟಿಕಿ ಒಡೆದು ಮೃತದೇಹಗಳನ್ನು ಹೊರ ತೆಗೆದರು. ಭೀಕರ ಅಪಘಾತದಿಂದಾಗಿ (terrible accident) ಕೆಲಹೊತ್ತು ಸಂಚಾರಕ್ಕೆ ಅಡೆ ತಡೆ ಉಂಟಾಗಿತ್ತು.