ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!
ಮಂಗಳೂರು: ದಕ್ಷಿಣ ಕನ್ನಡದ ಅಪ್ಪಟ ರಾಜಕಾರಣಿ ವಸಂತ ಬಂಗೇರ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಆದರೆ ಕರಾವಳಿಯ ರಾಜಕೀಯದಲ್ಲಿ ಬಂಗೇರ ತನ್ನದೇ ಆದ ಹಲವಾರು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.
ಮೂರು ಪಕ್ಷಗಳಲ್ಲಿ ಆಯ್ಕೆಯಾದ ಏಕೈಕ ಶಾಸಕ ಬಂಗೇರ. ಆದರೆ 5 ಬಾರಿ ಶಾಸಕರಾದರೂ, ಕರ್ನಾಟಕ ರಾಜ್ಯದ ಮಂತ್ರಿಯಾಗದೆ ಇರುವುದು ಎಲ್ಲರಲ್ಲಿ ಆಶ್ಚರ್ಯವನ್ನು ತಂದಿದೆ.
2013 ರಲ್ಲಿ ಕಾಂಗ್ರೆಸ್ ನಿಂದ ಎರಡನೇ ಬಾರಿಗೆ ಆಯ್ಕೆಯಾದಾಗ, ಅವರು ಮಂತ್ರಿಯಾಗುತ್ತಾರೆ ಎಂಬುದನ್ನು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಅವರ ಹೆಸರು ಮಂತ್ರಿ ಪಟ್ಟಿಯಿಂದ ಹೊರ ಬಿದ್ದಿತ್ತು.
ಇದು ಇಂದಿಗೂ ನಿಗೂಢವಾಗಿ ಉಳಿದಿದೆ. ಮಂತ್ರಿ ಪಟ್ಟಿಯಿಂದ ಹೊರಬೀಳಲು ಕಾರಣವಾದ ಅಂಶಗಳು ಇಂದಿಗೂ ರಹಸ್ಯವಾಗಿ ನಿಂತಿದೆ. ಈ ಬಗ್ಗೆ ಸ್ವತಹ ಬಂಗೇರರವರು ಮುನಿಸಿಕೊಂಡಿದ್ದರು.
ಅವರಿಗೆ ಅಂತಿಮ ಹಂತದಲ್ಲಿ ಪಟ್ಟಿಯಿಂದ ಮಂತ್ರಿ ಸ್ಥಾನವನ್ನು ಪಲ್ಲಟ ಮಾಡಲಾಗಿತ್ತು ಎಂಬುದರ ಬಗ್ಗೆ ಬಹಳಷ್ಟು ಮನಸಿನಲ್ಲಿ ನೊಂದುಕೊಂಡಿದ್ದರು. ಅದನ್ನು ಸಾರ್ವಜನಿಕವಾಗಿ ಅವರು ಬಹಿರಂಗಪಡಿಸುತ್ತಿರಲಿಲ್ಲ.
ಆದರೆ ತನ್ನ ಸಾಮರ್ಥ್ಯದಿಂದ ಮಂತ್ರಿ ಸ್ಥಾನವನ್ನು ಪಡೆಯ ಬೇಕಾಗಿದ್ದ ವಸಂತ ಬಂಗೇರ ರವರಿಗೆ ಕೊನೆಗೂ ಮಂತ್ರಿ ಸ್ಥಾನ ಸಿಗದೇ ಇರುವುದು ಇಂದಿಗೂ ಅವರ ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.
ಆದರೆ ಅದನ್ನು ಯಾವುದನ್ನು ತಲೆಕೆಡಿಸಿಕೊಳ್ಳದ ವಸಂತ ಬಂಗೇರ ರವರು ಜನರ ಸೇವೆ ನನ್ನ ಪರಮ ಗುರಿ ಎಂಬ ರೀತಿಯಲ್ಲಿ ಮುನ್ನೆಡೆದು ಯುವ ಪೀಳಿಗೆಗೆ ಬಹುದೊಡ್ಡ ಆದರ್ಶವನ್ನು ಬಿಟ್ಟು ಹೋಗಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಇದ್ದಷ್ಟು ದಿನ ನೇರ-ನಿಷ್ಠುರವಾಗಿಯೇ ಬದುಕಿದವರು ವಸಂತ ಬಂಗೇರ. ಎಷ್ಟೇ ಹಿರಿಯರೇ ಇರಲಿ ಸತ್ಯವನ್ನು ಮುಖಕ್ಕೆ ಹೊಡೆತಂದೆ ಮಾತನಾಡುತ್ತಿದ್ದ ಬಂಗೇರ ಯಾರ ಮುಲಾಜಿಗೂ ಅಂಜಿದವರಲ್ಲ.