ಪರ್ಕಳ : ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಅಪಘಾತ… ಬಾಣಸಿಗ ಮೃತ್ಯು
ಮಣಿಪಾಲ; ಪರ್ಕಳ ರಾಷ್ಟ್ರೀಯ ಹೆದ್ದಾರಿಯ ರಸ್ತೆ ವಿಭಾಜಕದ ಬಳಿ ಬೈಕ್ ಅಪಘಾತ ಸಂಭವಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ.
ಮೃತ ಯುವಕನನ್ನು ಹಿರಿಯಡ್ಕದ ನಿವಾಸಿ ಅಕ್ಷಯ ಭಟ್ (26ವ) ಎಂದು ತಿಳಿದುಬಂದಿದೆ.
ಯುವಕ ಅವಿವಾಹಿತನಾಗಿದ್ದು, ಅಡುಗೆ ವೃತ್ತಿ ಮಾಡಿಕೊಂಡಿದ್ದರು ಎನ್ನಲಾಗಿದ್ದು. ಇಂದ್ರಾಳಿಯ ದೇವಸ್ಥಾನವೊಂದರಲ್ಲಿ ನವರಾತ್ರಿಯ ಸಾರ್ವಜನಿಕ ಅನ್ನಸಂತರ್ಪಣೆ ಅಡುಗೆ ಕೆಲಸ ನಿರ್ವಹಿಸಲು ಮನೆಯಿಂದ ಬರುವ ಸಂದರ್ಭ ಈ ದುರ್ಘಟನೆ ನಡೆದಿದೆ.
ಮಣಿಪಾಲ ಪೋಲಿಸ್ ಠಾಣೆಯ ಪೋಲಿಸರು ಘಟನಾ ಸ್ಥಳಕ್ಕೆ ತೆರಳಿ ಕಾನೂನು ಪ್ರಕ್ರಿಯೆ ನಡೆಸಿ ಶವವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಂಗಾಳ: ರಿಕ್ಷಾ ಪಲ್ಟಿ; ಪ್ರಯಾಣಿಕನಿಗೆ ಗಾಯ
ಕಾಪು: ಆಟೋ ರಿಕ್ಷಾ ಪಲ್ಟಿಯಾಗಿ ಮಲ್ಪೆ ಮೀನುಗಾರಿಕಾ ಬಂದರಿಗೆ ಮೀನುಗಾರಿಕೆಗೆ ತೆರಳುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ರಾ.ಹೆ. 66ರ ಪಾಂಗಾಳ ಸೇತುವೆ ಬಳಿ ರವಿವಾರ ಸಂಜೆ ನಡೆದಿದೆ.
ಕಾಪು ನಿವಾಸಿ ಪುರುಷೋತ್ತಮ (67) ಗಾಯಾಳು ರಿಕ್ಷಾ ಪ್ರಯಾಣಿಕ. ಅವರು ಮಲ್ಪೆಗೆ ಮೀನುಗಾರಿಕೆ ಕೆಲಸಕ್ಕೆ ಹೋಗುವ ಸಲುವಾಗಿ ಆಟೋ ರಿಕ್ಷಾದಲ್ಲಿ ಕುಳಿತು ಹೊರಟಿದ್ದು, ಪಾಂಗಾಳ ಸೇತುವೆಯ ಸಮೀಪ ರಿಕ್ಷಾ ಸ್ಕಿಡ್ ಆಗಿ ಹೆದ್ದಾರಿಯಲ್ಲಿ ಮುಗುಚಿ ಬಿದ್ದಿದೆ. ಈ ವೇಳೆ ಚಾಲಕ ಗಾಯಾಳುವನ್ನು ಅಪಘಾತ ಸ್ಥಳದಲ್ಲಿಯೇ ಬಿಟ್ಟು ರಿಕ್ಷಾವನ್ನು ಎತ್ತಿ ಹೊರಟು ಹೋಗಿದ್ದು, ಗಾಯಾಳು ಪುರುಷೋತ್ತಮ್ ಅವರನ್ನು ಸ್ಥಳೀಯರು 108 ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿದ್ದಾರೆ.