ಬೆಂಗಳೂರು (ಡಿ.10): ‘ಕೇವಲ ಕಾಂಗ್ರೆಸ್ ಪಕ್ಷ ತೊರೆದು ಹೋದ ವಲಸಿಗರು ಮಾತ್ರವಲ್ಲ, ವಲಸಿಗರಲ್ಲದವರೂ ಸಹ ಪಕ್ಷಕ್ಕೆ ಬರಲು ಕಾಯುತ್ತಿದ್ದಾರೆ. ಜೆಡಿಎಸ್ನಿಂದ ವಿಧಾನಸಭೆ ಚುನಾವಣೆಯಲ್ಲಿ ಸೋತ ಹದಿನೈದು ಮಂದಿ ಪಕ್ಷ ಸೇರಲು ಅರ್ಜಿ ಸಲ್ಲಿಸಿದ್ದು, ಸಾಕಷ್ಟುಅಚ್ಚರಿ ಬೆಳವಣಿಗೆಗಳು ಕಾದಿವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆಯೂ ಸುಳಿವು ನೀಡಿದ್ದಾರೆ.
ವಿಶ್ವನಾಥ್ ಅವರು ತಮ್ಮ ಆಪ್ತರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿಕೊಂಡಿದ್ದಾರೆ ಎಂಬ ಪ್ರಶ್ನೆಗೆ, ‘ರಾಜಕೀಯ ನಿಂತ ನೀರಲ್ಲ. ನಾನು ಈ ಕುರ್ಚಿ ಬಿಟ್ಟು ಬೇರೆ ಕಡೆಗೆ ಸರಿದರೆ ಬೇರೊಬ್ಬರು ಬಂದು ಕೂರುತ್ತಾರೆ. ನಮ್ಮ ಸಿದ್ಧಾಂತ ನಂಬಿಕೊಂಡವರು ಬರಲಿ, ನಮ್ಮ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ’ ಎಂದು ಹೇಳಿದರು. ತನ್ಮೂಲಕ ಮುಕ್ತ ಆಹ್ವಾನ ನೀಡಿದರು.
ಅಚ್ಚರಿಗಳು ಕಾದಿವೆ: ವಲಸಿಗರು ಮತ್ತೆ ಪಕ್ಷಕ್ಕೆ ವಾಪಸ್ಸಾಗುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ‘ಬರೀ ವಲಸಿಗರ ಬಗ್ಗೆ ಯಾಕೆ ಯೋಚನೆ ಮಾಡುತ್ತೀರಾ? ಯು.ಬಿ.ಬಣಕಾರ್, ವಿ.ಎಸ್.ಪಾಟೀಲ್, ಮಧು ಬಂಗಾರಪ್ಪ, ಶರತ್ ಬಚ್ಚೇಗೌಡ ಇವರೆಲ್ಲ ವಲಸಿಗರಾ?’ ಎಂದು ಪ್ರಶ್ನಿಸಿದರು. ಹಿರೇಕೆರೂರಿನಲ್ಲಿ ಯು.ಬಿ.ಬಣಕಾರ್ ಕಡಿಮೆ ಅಂತರದಲ್ಲಿ ಸೋತಿದ್ದರು. ಇದೀಗ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಶಿವರಾಮ್ ಹೆಬ್ಬಾರ್ ವಿರುದ್ಧ ಸ್ಪರ್ಧಿಸಿದ್ದ ವಿ.ಎಸ್.ಪಾಟೀಲ್ ಪಕ್ಷಕ್ಕೆ ಬಂದಿದ್ದಾರೆ. ಇವರು ಮಾತ್ರವಲ್ಲದೆ ಜೆಡಿಎಸ್ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ 15 ಮಂದಿ ಅಭ್ಯರ್ಥಿಗಳು ಕಾಂಗ್ರೆಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಮಾತ್ರವಲ್ಲ ಇನ್ನೂ ಸಾಕಷ್ಟುಅಚ್ಚರಿಗಳು ಕಾದಿವೆ ಎಂದು ಹೇಳಿದರು.
ಮೋದಿ ನಿತ್ಯ ಇಲ್ಲೇ ಇರಲಿ: ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ತಿಂಗಳಿಗೆ ಎರಡು ಬಾರಿ ರಾಜ್ಯಕ್ಕೆ ಬರಲಿದ್ದಾರೆ ಎಂಬ ಪ್ರಶ್ನೆಗೆ, ‘ಕೇವಲ ಎರಡು ದಿನ ಮಾತ್ರ ಯಾಕೆ? ಅವರು ದಿನ ನಿತ್ಯ ಇಲ್ಲೇ ಇದ್ದು ಪ್ರಚಾರ ಮಾಡಲಿ. ಅವರು ತಾರಾ ಪ್ರಚಾರಕರಾಗಿದ್ದು, ಇಲ್ಲೇ ವಾಸ್ತವ್ಯ ಹೂಡಲಿ. ಅವರು ಪ್ರಧಾನಮಂತ್ರಿಗಳಾಗಿರುವುದರಿಂದ ಅವರ ಸ್ಥಾನಕ್ಕೆ ನೀಡಬೇಕಾದ ಗೌರವ ನೀಡೋಣ. ಕಳೆದ ಬಾರಿ 10% ಸರ್ಕಾರ ಎಂದು ಹೇಳಿದ್ದರು, ಈಗ ಅವರ ಸರ್ಕಾರ 40% ಆಗಿದೆ. ಅವರು ಬಂದು ಏನು ಹೇಳುತ್ತಾರೋ ನೋಡೋಣ’ ಎಂದು ಹೇಳಿದರು. ಗುಬ್ಬಿ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದರೆ ಬಂಡಾಯ ಸ್ಪರ್ಧೆ ಮಾಡುವ ಹೇಳಿಕೆ ಬಗ್ಗೆ ಕೇಳಿದಾಗ, ‘ಪಕ್ಷಕ್ಕೆ ಅನುಕೂಲ ಆಗುವ ರೀತಿ ನಾವು ಟಿಕೆಟ್ ನೀಡುತ್ತೇವೆ. ಯಾರು ಯಾವ ಬಂಡಾಯ ಬೇಕಾದರೂ ಏಳಲಿ. ನಾವು ಪ್ರತಿಯೊಬ್ಬರ ಅರ್ಹತೆ ಮೇಲೆ ನಿರ್ಧರಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.
‘ಪರಂ ನನ್ನ ಮೇಲಿನ ಅನುಕಂಪದಿಂದ ಹಾಗೆ ಹೇಳಿದ್ದಾರೆ’: ಕೆಪಿಸಿಸಿ ಅಧ್ಯಕ್ಷರು ಹೆಣಗಾಡುತ್ತಿದ್ದಾರೆ ಎಂಬ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಡಿ.ಕೆ.ಶಿವಕುಮಾರ್, ‘ದಿನದಲ್ಲಿ ಕೇವಲ 24 ಗಂಟೆ ಮಾತ್ರ ಇದೆ. ಇನ್ನೂ ಹೆಚ್ಚು ಸಮಯವಿದ್ದರೆ ದುಡಿಯಬಹುದಿತ್ತು. ನನ್ನ ಆರೋಗ್ಯದ ಕಾಳಜಿ ಹಾಗೂ ಅನುಕಂಪದಿಂದ ಅವರು ಹಾಗೆ ಹೇಳಿದ್ದಾರೆ. ಬಿಜೆಪಿಯವರದು ಡಬಲ್ ಎಂಜಿನ್ ಸರ್ಕಾರ. ಅವರು ಸಾಂವಿಧಾನಿಕ ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರು, ಪೊಲೀಸ್ ಅಧಿಕಾರಿಗಳು, ರೌಡಿಗಳು ಹೀಗೆ ಅನೇಕರನ್ನು ಬಳಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನೂ ನೋಡಿ ಪರಮೇಶ್ವರ್ ಹಾಗೆ ಹೇಳಿದ್ದಾರೆ’ ಎಂದರು.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?