ಕಲ್ಲಂಗಡಿ ಹಣ್ಣಿಗೆ 30 ರೂ.: ಬಿಸಿಲು ಹೆಚ್ಚಾದಂತೆ ಬೆಲೆ ಏರಿಕೆ
ಬೆಂಗಳೂರು (ಮಾ.06): ನಗರದಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದ್ದು, ಕಲ್ಲಂಗಡಿ ಹಣ್ಣುಗಳ ಮಾರಾಟವೂ ಹೆಚ್ಚುತ್ತಿದೆ. ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಹವನ್ನು ತಂಪಾಗಿಡುವ ಕಲ್ಲಂಗಡಿ ಹಣ್ಣಿನ ಮಾರಾಟದ ಪ್ರಮಾಣವೂ ಹೆಚ್ಚಾಗಿದ್ದು, ಬೆಲೆಯೂ ಕೂಡ ಗಗನಕ್ಕೇರುತ್ತಿದೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ದಕ್ಷಿಣ ಭಾಗಗಳಿಂದ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ, ಯಶವಂತಪುರ, ಮಡಿವಾಳ ಮತ್ತು ಹಾಪ್ಕಾಮ್ಸ್ನಂತಹ ಸಗಟು ಹಣ್ಣಿನ ಮಾರುಕಟ್ಟೆಗಳಿಗೆ ಪ್ರತಿನಿತ್ಯ ಟ್ರಕ್ಗಳಲ್ಲಿ ಕಲ್ಲಂಗಡಿ ಮತ್ತು ಸೀತಾಫಲ ಲೋಡ್ಗಳು ಆಗಮಿಸುತ್ತಿವೆ. ಕಳೆದ ವಾರ ಕೆಜಿ ಕಲ್ಲಂಗಡಿ 15-20 ರೂ.ಗೆ ಮಾರಾಟವಾಗುತ್ತಿದ್ದು, ಈಗ 20-30 ರೂ.ಗೆ ಏರಿಕೆಯಾಗಿದೆ ಎಂದು ಕೆ.ಆರ್. ಮಾರುಕಟ್ಟೆ ಸಗಟು ವ್ಯಾಪಾರಿ ರಾಮಾಂಜನೇಯ ಮಾಹಿತಿ ನೀಡಿದ್ದಾರೆ.
ಹಾಪ್ಕಾಮ್ಸ್ನಲ್ಊ ಮಾರಾಟ ಹೆಚ್ಚಳ: ಹಾಪ್ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ ಮಾತನಾಡಿ, ‘ಕಳೆದ ವಾರಕ್ಕೆ ಹೋಲಿಸಿದರೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಹಾಪ್ಕಾಮ್ಸ್ ಮಳಿಗೆಗಳಿಂದ ಬೇಸಿಗೆ ಆರಂಭದ ದಿನದಿಂದ ಪ್ರತಿನಿತ್ಯ ಕನಿಷ್ಠ 3-4 ಟನ್ ಕಲ್ಲಂಗಡಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಕಳೆದ ವಾರ ಪ್ರತಿ ಕೆ.ಜಿ. ಕಲ್ಲಂಗಡಿಗೆ 14-19 ರೂ ಮಾರಾಟ ಆಗುತ್ತಿತ್ತು. ಈ ವಾರ ಪ್ರತಿ ಕೆ.ಜಿ . ಕಲ್ಲಂಗಡಿ ಹಣ್ಣಿನ ಬೆಲೆ 24 ರೂ. ಮುಟ್ಟಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ಸುಮಾರು ಹತ್ತಾರು ಸಗಟು ಕಲ್ಲಂಗಡಿ ವ್ಯಾಪಾರಿಗಳಿದ್ದಾರೆ.
ಸಗಟು ವ್ಯಾಪಾರಿಗಳ ವ್ಯಾಪಾರ ವಹಿವಾಟು ಹೆಚ್ಚಳ: ಪ್ರತಿ ಕಲ್ಲಂಗಡಿ ಹಣ್ಣು 4 ಕೆಜಿಯಿಂದ 12 ಕೆಜಿವರೆಗೆ ತೂಗುತ್ತದೆ. ಸದ್ಯ ಕೆ.ಆರ್.ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಿಗಳು ಪ್ರತಿದಿನ 150-250 ಟನ್ ಕಲ್ಲಂಗಡಿ ಮಾರಾಟ ಮಾಡುತ್ತಿದ್ದು, ಬೇಸಿಗೆ ಹೆಚ್ಚಾದಂತೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಲಿದೆ. ಅದರ ಜೊತೆಗೆ ಬೆಲೆ ಏರಿಕೆಯೂ ಕೂಡ ಕಂಡುಬರುತ್ತಿದೆ. ಇನ್ನು ರೈತರಿಂದ ಕಲ್ಲಂಗಡಿ ಪೂರೈಕೆ ಕಡಿಮೆಯಾದರೆ ಮತ್ತಷ್ಟು ಬೆಲೆ ಹೆಚ್ಚಾಗಬಹುದು ಎಂದು ಕೆ.ಆರ್.ಮಾರುಕಟ್ಟೆಯ ಸಗಟು ಹಣ್ಣು ಮಾರಾಟಗಾರ ಮಂಜುನಾಥ್ ಹೇಳಿದ್ದಾರೆ.
ರೈತರಿಗೆ ಕಲ್ಲಂಗಡಿ ಹಣ್ಣಿನ ಹಣ ಸೇರ್ಪಡೆ: ಇನ್ನು ಗಾತ್ರದಲ್ಲಿ ದೊಡ್ಡದಾದ ತಿಳಿ ಹಸಿರು ಕಲ್ಲಂಗಡಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಬೀದಿ ಬದಿ ವ್ಯಾಪಾರಿಗಳು 10 ಕೆಜಿಗಿಂತ ಹೆಚ್ಚು ತೂಕದ ಕಲ್ಲಂಗಡಿಗಳನ್ನು ಬಯಸುತ್ತಾರೆ. ಈಗ ರೈತರಿಗೆ ಕೆಜಿ ಕಲ್ಲಂಗಡಿಗೆ 11-16 ರೂ. ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ದರ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ನಗರದಲ್ಲಿ ಉಷ್ಣಾಂಶದ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಹಣ್ಣಿನ ವ್ಯಾಪಾರ ವಹಿವಾಟು ಕೂಡ ಹೆಚ್ಚಾಗುತ್ತಿದೆ.
ಕತ್ತರಿಸಿದ ಕಲ್ಲಂಗಡಿ ಮಾರಾಟದಿಂದ ಹೆಚ್ಚಿನ ಲಾಭ: ಬೀದಿಬದಿ ವ್ಯಾಪಾರಿಗಳು ಕತ್ತರಿಸಿದ ಕಲ್ಲಂಗಡಿ ಹಣ್ಮನ್ನು 10 ರೂ.ಗೆ ಮಾರಾಟ ಮಾಡುತ್ತಿದ್ದಾರೆ.ಇನ್ನು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲು ಚುನಾವಣಾ ಸಂಬಂಧಿತ ಕಾರ್ಯಕ್ರಮ, ಸಭೆ, ಸಮಾರಂಭಗಳು ಹೆಚ್ಚಾಗುತ್ತಿವೆ, ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಸಭೆಗಳಿಗೆ ಕತ್ತರಿಸಿದ ಕಲ್ಲಂಗಡಿ ಹಣ್ಣುಗಳ ತುಂಡುಗಳಿಗೆ ಬೇಡಿಕೆಯೂ ಕೂಡ ಹೆಚ್ಚಾಗಿ ಬರುತ್ತಿದೆ. ಸಾಮಾನ್ಯವಾಗಿ, ನಾವು ದಿನಕ್ಕೆ 100-120 ಕಲ್ಲಂಗಡಿಗಳನ್ನು ಕತ್ತರಿಸುತ್ತೇವೆ. ಆದರೆ ಚುನಾವಣಾ ಘಟನೆಗಳಿಂದಾಗಿ 25-30% ರಷ್ಟು ಬೇಡಿಕೆ ಹೆಚ್ಚಾಗಿದೆ. ಸಂಪೂರ್ಣ ಹಣ್ಣನ್ನು ಮಾರಾಟ ಮಾಡುವುದಕ್ಕಿಂತ ಕತ್ತರಿಸಿದ ಕಲ್ಲಂಗಡಿ ತುಂಡುಗಳನ್ನು ಮಾರಾಟ ಮಾಡುವುದು ಹೆಚ್ಚು ಲಾಭದಾಯಕ ವ್ಯವಹಾರವಾಗಿದೆ ಎಂದು ರಸ್ತೆಬದಿ ಕಲ್ಲಂಗಡಿ ಮಾರಾಟಗಾರ ಅಬ್ದುಲ್ ವಾಜಿದ್ ಹೇಳಿದರು.