ಮಗಳ ಕ್ರಿಕೆಟ್ಗಾಗಿ ಜಿಮ್ ಮತ್ತು ಜಮೀನು ಮಾರಾಟ ಮಾಡಿದ್ದ ತ್ರಿಷಾ ರೆಡ್ಡಿ ಅವರ ತಂದೆ, ವಿಶ್ವಕಪ್ ಗೆದ್ದು ಕೊಟ್ಟಳು ಮಗಳು!
ಮೊದಲ ಆವೃತ್ತಿಯ ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾರತದಾದ್ಯಂತ ಟೀಂ ಇಂಡಿಯಾ ಆಟಗಾರರ ಸಾಧನೆಗೆ ಪ್ರಶಂಗೆಗಳ ಸುರಿಮಳೆಯಾಗುತ್ತಿದೆ. ಈ ನಡುವೆ ಕಪ್ ಗೆಲ್ಲುವ ಹಿಂದೆ ಟೀಂ ಇಂಡಿಯಾ ಆಟಗಾರರ ಪರಿಶ್ರಮ, ಕ್ರಿಕೆಟ್ ಮೇಲಿನ ಪ್ರೀತಿ, ಆಟಗಾರರಿಗೆ ಸಿಕ್ಕ ಬೆಂಬಲ ಸೇರಿದಂತೆ ಹಲವು ಅಂಶಗಳ ಬಗ್ಗೆ ವಿಶೇಷ ವರದಿಗಳು ಬರುತ್ತಿವೆ.
ವಿಶ್ವಕಪ್ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 116 ರನ್ ಗಳಿಸಿ ತ್ರಿಷಾ, ಒಂದು ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದರು. ಅಲ್ಲದೇ ಫೈನಲ್ ಪಂದ್ಯದಲ್ಲಿ ತೀವ್ರ ಒತ್ತಡದ ನಡುವೆಯೂ ಉತ್ತಮ ಪ್ರದರ್ಶನ ಮೂಲಕ ಗಮನ ಸೆಳೆದಿದ್ದರು. ಪಿಚ್ಅನ್ನು ಉತ್ತಮವಾಗಿ ಆರ್ಥೈಸಿಕೊಂಡು, ತಂಡದ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು.
ವಿಶೇಷ ಎಂದರೆ ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಇಂಗ್ಲೆಂಡ್ ಕ್ಯಾಪ್ಟನ್ರನ್ನು ಅತ್ಯುತ್ತಮ ಕ್ಯಾಚ್ ಮೂಲಕ ಫೈನಲ್ನಲ್ಲಿ ಔಟ್ ಮಾಡುವ ಮೂಲಕ ಪಂದ್ಯಕ್ಕೆ ತಿರುವು ನೀಡಿದ್ದರು ತ್ರಿಷಾ.
ಇನ್ನು, ತೆಲಂಗಾಣದ ಭದ್ರಾಚಲಂ ಜಿಲ್ಲೆಯ ರಾಮಿರೆಡ್ಡಿ ಪುತ್ರಿಯಾಗಿರುವ ತ್ರಿಷಾಗೆ ತಂದೆ ಚಿಕ್ಕಂದಿನಿಂದಲೂ ಪ್ರೋತ್ಸಾಹ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಕಾರಣರಾಗಿದ್ದಾರೆ. 8ನೇ ವಯಸ್ಸಿಗೆ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ತ್ರಿಷಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಮಗಳ ಕ್ರಿಕೆಟ್ ಮೇಲಿನ ಪ್ರೀತಿ ಕಂಡ ತಂದೆ ರಾಮಿರೆಡ್ಡಿ ಕೂಡ ಆಕೆಯ ಕನಸಿಗೆ ಪ್ರೋತ್ಸಾಹ ನೀಡಿದ್ದರು. ಮಗಳ ಕ್ರಿಕೆಟ್ ವೃತ್ತಿ ಜೀವನಕ್ಕಾಗಿ ಇದ್ದ ಜಮೀನು, ಜಿಮ್ ಸೆಂಟರ್ ಮಾರಾಟ ಮಾಡಿ ಹೈದರಾಬಾದ್ಗೆ ಶಿಫ್ಟ್ ಆಗಿದ್ದರು. ಅಷ್ಟೇ ಅಲ್ಲದೆ ಮಗಳ ಕ್ರಿಕೆಟ್ ಉತ್ತಮವಾಗಲು ತಮ್ಮ ಕೆಲಸವನ್ನು ಬಿಟ್ಟು ಸಂಪೂರ್ಣ ತಮ್ಮ ಸಮಯವನ್ನು ಮುಡಿಪಾಗಿಟ್ಟಿದ್ದರು.
ತಂದೆ ಆಸೆಯಂತೆ ತ್ರಿಷಾ ಕೂಡ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಟೀಂ ಇಂಡಿಯಾ ಕಪ್ ಗೆಲ್ಲುತ್ತಿದ್ದಂತೆ ಮನೆಯಲ್ಲಿ ಕೂತು ಪಂದ್ಯ ವೀಕ್ಷಣೆ ಮಾಡುತ್ತಿದ್ದ ರಾಮಿರೆಡ್ಡಿ ಕೂಡ ಸಖತ್ ಖುಷಿಯಾಗಿದ್ದರು.
ಇತ್ತ ಮಾಧ್ಯಮದೊಂದಿಗೆ ಖುಷಿ ಹಂಚಿಕೊಂಡಿರುವ ತ್ರಿಷಾ, ಗೆಲುವಿನ ಕ್ಷಣಗಳು ಖುಷಿಯನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಗಾಳಿಯಲ್ಲಿ ತೆಲಿದಂತಹ ಅನುಭವ. ಟೂರ್ನಿಯಲ್ಲಿ ನನಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೇ, ಈಗಾಗಲೇ ಹಿರಿಯ ಆಟಗಾರರೊಂದಿಗೆ ಕ್ಯಾಪ್ಟನ್ ಶಫಾಲಿ ವರ್ಮಾ, ರಿಚಾ ಘೋಷ್ ರಂತಹ ಆಟಗಾರರು ತಂಡದಲ್ಲಿದ್ದ ಕಾರಣ ಹೆಚ್ಚಿನ ಆಗಲಿಲ್ಲ. ಟೂರ್ನಿಯಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಆಡಿದ್ದೇವು. ಫೈನಲ್ ಪಂದ್ಯದಲ್ಲಿ ಔಟ್ ಆಗದೆ ಅಂತಿಮ ಎಸೆತದವರೆಗೂ ಆಡಬೇಕಿತ್ತು. ಕಪ್ ಗೆದ್ದಿರುವ ನನ್ನ ಜೀವನ ಅತ್ಯಂತ ಸಂತಸ ಕ್ಷಣವಾಗಿದೆ ಎಂದು ತನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.