ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ ಬಂಧನ
ಕೋಲಾರ: ಲಂಚ ಪಡೆಯುವ ವೇಳೆ ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಪ್ರಕರಣ ಕೋಲಾರದಲ್ಲಿ ನಡೆದಿದೆ.
ಅಧಿಕಾರಿ ರಾಜೇಂದ್ರನ್, ಸುಬಾನಾಯಕ್ ಎಂಬವರಿಗೆ ಬೆಂಗಳೂರಿನ ಮೆಟ್ರೋದಲ್ಲಿ (Bangalore Metro) ಕೆಲಸಕ್ಕೆ ನಿಯೋಜಿಸಲು ಲಂಚದ ಬೇಡಿಕೆ ಇಟ್ಟಿದ್ದ. ಸುಬಾನಾಯಕ್ 6000 ರೂ. ಲಂಚ ನೀಡುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ ಅಧಿಕಾರಿಯನ್ನು ಬಂಧಿಸಿದ್ದಾರೆ.
ಕೋಲಾರ (Kolar) ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಆರೋಪಿ ರಾಜೇಂದ್ರನ್ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.
ಮೂರು ದಿನದಲ್ಲಿ 15 ಜನರ ಮೇಲೆ ಲೋಕಾಯುಕ್ತ ದಾಳಿ:48 ಕೋಟಿ ರೂ. ವಶ:
ರಾಜ್ಯದಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ಒಟ್ಟು 48.74 ಕೋಟಿ ರು. ಗಿಂತ ಹೆಚ್ಚಿನ ಆಸ್ತಿ ಮೌಲ್ಯ ಪತ್ತೆಯಾಗಿದ್ದು, ತನಿಖೆ ಪ್ರಕ್ರಿಯೆ ಮುಂದುವರಿಸಲಾಗಿದೆ. ಲೋಕಾಯುಕ್ತ ಪೊಲೀಸರು ಬುಧವಾರ ರಾಜ್ಯದ ವಿವಿಧೆಡೆ 15 ಸರ್ಕಾರಿ ನೌಕರರಿಗೆ ಸೇರಿದ 57 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು.
ಬೆಂಗ್ಳೂರು ಕರಗಕ್ಕೆ ಬಂದು ಅಕ್ಕನ ಮಗಳ ನೆಕ್ಲೆಸ್ ಕದ್ದ ಸೋದರ ಮಾವ..!
ಬೆಂಗಳೂರು(ಜೂ.04): ಹಬ್ಬಕ್ಕೆ ಅಕ್ಕನ ಮನೆಗೆ ಬಂದು ಅಕ್ಕನ ಮಗಳ ಚಿನ್ನದ ನಕ್ಲೇಸ್ ಎಗರಿಸಿದ್ದ ಚಾಲಾಕಿ ಮಾವನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಗೋಪಾಲನಗರ ನಗರ ನಿವಾಸಿ ರಂಗನಾಥ (58) ಬಂಧಿತ. ಈತನಿಂದ 24 ಗ್ರಾಂ ತೂಕದ ಚಿನ್ನದ ನಕ್ಲೇಸ್ ಜಪ್ತಿ ಮಾಡಲಾಗಿದೆ. ಸೀಗೆಹಳ್ಳಿ ನಿವಾಸಿ ಮಂಜುಳಾ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಏ.9ರಂದು ಕೆಂಗೇರಿ ಕರಗದ ಪ್ರಯುಕ್ತ ಮಂಜುಳಾ ಅವರು ಮಗಳೊಂದಿಗೆ ಕೆಂಗೇರಿಯ ಕಾಳಿಕಾಂಬ ರಸ್ತೆಯ 7ನೇ ಕ್ರಾಸ್ನಲ್ಲಿರುವ ತವರು ಮನೆಗೆ ಬಂದಿದ್ದರು. ಕರಗ ಮುಗಿಸಿಕೊಂಡು ರಾತ್ರಿ 9 ಗಂಟೆ ಸುಮಾರಿಗೆ ಚಿನ್ನದ ನಕ್ಲೇಸ್ ಬಿಚ್ಚಿ ತಾಯಿಯ ಮನೆಯ ರೂಮ್ನ ಕಬೋರ್ಡ್ನಲ್ಲಿ ಇರಿಸಿದ್ದರು. ಮಾರನೇ ದಿನ ಬೆಳಗ್ಗೆ ಎದ್ದು ಗಂಡನ ಮನೆಗೆ ತೆರಳುವಾಗ ಕಬೋರ್ಡ್ ತೆರೆದು ನೋಡಿದಾಗ ನಕ್ಲೇಸ್ ಕಾಣಸಿಲ್ಲ. ಈ ವೇಳೆ ಮನೆಯೆಲ್ಲ ಹುಡುಕಾಡಿದರೂ ಪ್ರಯೋಜನವಾಗಿಲ್ಲ. ಬಳಿಕ ಸೋದರ ಮಾವ ರಂಗನಾಥನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಈ ದೂರು ಆಧರಿಸಿ ರಂಗನಾಥನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ನಕ್ಲೇಸ್ ಕದ್ದಿದ್ದು ತಾನೇ ಎದ್ದು ತಪ್ಪೊಪ್ಪಿಕೊಂಡಿದ್ದಾನೆ.
ಅಂದು ಅಕ್ಕನ ಮನೆಯ ಕರಗದ ಹಬ್ಬಕ್ಕೆ ರಂಗನಾಥನೂ ಬಂದಿದ್ದ. ಕರಗ ಮುಗಿಸಿಕೊಂಡು ರಾತ್ರಿ ಅಕ್ಕನ ಮನೆಯಲ್ಲೇ ತಂಗಿದ್ದ. ಈ ವೇಳೆ ನಾಲ್ಕೈದು ಬಾರಿ ರೂಮ್ ಒಳಗೆ ಹೋಗಿ ಬಂದಿದ್ದ. ಇದನ್ನು ಅಕ್ಕನ ಮಗಳು ಮಂಜುಳಾ ಗಮನಿಸಿದ್ದರು. ಹೀಗೆ ರೂಮ್ ಒಳಗೆ ಹೋದಾಗ ರಂಗನಾಥ ಕಬೋರ್ಡ್ ತೆರೆದು ನಕ್ಲೇಸ್ ಕದ್ದಿದ್ದ. ಬಳಿಕ ಸಂಬಂಧವಿಲ್ಲ ಎಂಬಂತೆ ನಟಿಸಿದ್ದ. ಕುಡಿತದ ಚಟಕ್ಕೆ ಬಿದ್ದಿರುವ ರಂಗನಾಥ ಖರ್ಚಿಗೆ ಹಣ ಹೊಂದಿಸಲು ನಕ್ಲೇಸ್ ಕದ್ದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.