ಜತೆ ಇದ್ದವರೇ ಬೆನ್ನಿಗೆ ಚೂರಿ ಹಾಕಿದರು : ವಿಧಾನಪರಿಷತ್ ನಲ್ಲಿ ಮೌನ ಮುರಿದ ಬಿಕೆ ಹರಿಪ್ರಸಾದ್
ಬೆಳಗಾವಿ: ನನ್ನ 49 ವರ್ಷಗಳ ರಾಜಕೀಯ ಜೀವನದಲ್ಲಿ ನನಗೆ ವಿಪಕ್ಷಗಳಿಂದ ಯಾವುದೇ ತೊಂದರೆಯಾಗಿಲ್ಲ. ಬದಲಿಗೆ ನನ್ನ ಜತೆ ಇದ್ದವರೇ ಜತೆಯಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದರು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅಳಲು ತೋಡಿಕೊಂಡ ಪ್ರಸಂಗ ವಿಧಾನ ಪರಿಷತ್ನಲ್ಲಿ ಮಂಗಳವಾರ ನಡೆಯಿತು.
ವಿಪಕ್ಷ ನಾಯಕರಾಗಿದ್ದಾಗ ಮಾಡಬೇಕಿದ್ದ ವಿದಾಯ ಭಾಷಣಕ್ಕೆ ಮಂಗಳವಾರ ಸಭಾಪತಿ ಬಸವರಾಜ ಹೊರಟ್ಟಿ ಅವರು ನೀಡಿದ ಅನುಮತಿ ಮೇರೆಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಏಳು ಬೀಳು ಸಾಮಾನ್ಯ. ಆದರೆ ನನ್ನ ವಿಚಾರದಲ್ಲಿ ವಿಪಕ್ಷ ಬಿಜೆಪಿ ಅಥವಾ ಜೆಡಿಎಸ್ನಿಂದ ಯಾವುದೇ ತೊಂದರೆಯಾಗಲಿಲ್ಲ. ನನ್ನ ಮೇಲೆ ಯಾವುದೇ ಇಡಿ, ಐಟಿ ದಾಳಿ ನಡೆಯಲಿಲ್ಲ. ಆದರೆ ನನ್ನ ಜತೆಗೆ ಇದ್ದವರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿದರು.
ರಾಜಕೀಯವಾಗಿ ಮಾತ್ರ ನಾನು ಇಲ್ಲಿ ಟೀಕೆಗಳನ್ನು ಮಾಡಿಕೊಂಡು ಬಂದಿದ್ದೇನೆ ಹೊರತು ವೈಯಕ್ತಿಕವಾಗಿ ಯಾರೊಂದಿಗೂ ಶತೃತ್ವ ಹೊಂದಿಲ್ಲ. ನನಗೆ ವಿಪಕ್ಷ ನಾಯಕನಾಗಿ ಎರಡೂವರೆ ವರ್ಷ ಕೆಲಸ ಮಾಡಲು ಅವಕಾಶ ಕೊಟ್ಟ ಎಲ್ಲ ಪಕ್ಷಗಳ ಸದಸ್ಯರಿಗೂ ನಾನು ಚಿರ ಋಣಿಯಾಗಿದ್ದಾನೆ ಎಂದರು.
ಕೂಡಲೇ ಮಧ್ಯ ಪ್ರವೇಶಿಸಿದ ಬಿಜೆಪಿಯ ಭಾರತಿ ಶೆಟ್ಟಿ, ರವಿಕುಮಾರ್ ಮತ್ತು ತೇಜಸ್ವಿನಿ ರಮೇಶ್ ಅವರು, ಬಿ.ಕೆ. ಹರಿಪ್ರಸಾದ್ ಅವರೆ ನಿಮ್ಮಂತ ಪಕ್ಷ ಸಂಘಟಕರಿಗೆ ಕಾಂಗ್ರೆಸ್ನಲ್ಲಿ ಇಂತಹ ಸ್ಥಿತಿ ಬಂದಿರುವುದು ದುರದೃಷ್ಟಕರ ಎಂದು ಕಾಲೆಳೆದರು. ಜತೆಗೆ ಜೆಡಿಎಸ್ನ ಟಿ.ಎ. ಶರವಣ ಕೂಡ, ನೀವು ಮುಂದಿನ ಸಾಲಿನ ನಾಯಕರಾಗಬೇಕಿತ್ತು. ಇನ್ನು ಹಿಂದಿನ ಸಾಲಿನಲ್ಲಿಯೇ ನಿಂತಿದ್ದು ನೋಡಿದರೆ ನಮಗೆ ಬೇಸರವಾಗುತ್ತದೆ ಎಂದು ಕುಟುಕಿದರು.
9 ಸಾವಿರ ಸಾರಿಗೆ ಸಿಬ್ಬಂದಿ ನೇಮಕ: ರಾಮಲಿಂಗಾರೆಡ್ಡಿ
ಬೆಳಗಾವಿ: ನಾನು ಸಾರಿಗೆ ಮಂತ್ರಿ ಇದ್ದಾಗ ಕೊನೆಯಾಗಿ ನೇಮಕಾತಿಯಾತ್ತು. ಕಳೆದ ಏಳು ವರ್ಷಗಳಿಂದ 13,888 ಸಿಬ್ಬಂದಿ ನಿವೃತ್ತಿ ಹೊಂದಿದ್ದಾರೆ. ಈಗ 9 ಸಾವಿರ ಸಾರಿಗೆ ಸಿಬ್ಬಂದಿ ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದರು.
ತಾಲೂಕಿನ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಸಚಿವರು ಮಾತನಾಡಿದರು.
ಶಕ್ತಿ ಯೋಜನೆ (Shakti scheme) ಜಾರಿಯಾದ ಮೇಲೆ ಮೇಲೆ ಜನರು ಜಾಸ್ತಿ ಓಡಾಡುತ್ತಿದ್ದಾರೆ. ಮೊದಲು 85 ಲಕ್ಷ ಜನರು ಓಡಾಡುತ್ತಿದ್ದರು. ಈಗ 1 ಕೋಟಿ ಜನರು ಓಡಾಟ ಮಾಡುತ್ತಿದ್ದಾರೆ. ಶಾಲೆಗೆ ಹೋಗುವಾಗ, ಬರುವಾಗ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಹಿಳೆಯರ ಓಡಾಟ ಕೂಡ ಹೆಚ್ಚಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಕಳೆದ ನಾಲ್ಕು ವರ್ಷದಲ್ಲಿ ಒಂದೇ ಒಂದು ಬಸ್ (Bus) ಖರೀದಿ ಮಾಡಿಲ್ಲ. ಹೊಸ ಬಸ್ ತಗೊಂಡು ಹಳೆಯ ಬಸ್ಸುಗಳನ್ನು ಸ್ಕ್ರ್ಯಾಪ್ ಮಾಡಬೇಕು. ಹೀಗೆ ಆಗಿದ್ದರೆ ಏನು ಸಮಸ್ಯೆ ಆಗುತ್ತಿರಲಿಲ್ಲ ಎಂದರು.
ಬೆಳಗಾವಿ ಸಾರಿಗೆ ವಿಭಾಗಕ್ಕೆ ಬಿಎಂಟಿಸಿ (BMTC) ಹಳೆ ಬಸ್ ಬಿಟ್ಟಿರುವುದಕ್ಕೆ ಇಲ್ಲಿ ಬಸ್ ಇಲ್ಲ ಎಂಬ ಕಾರಣಕ್ಕೆ ತೆಗೆದುಕೊಂಡಿದ್ದಾರೆ. ಮತ್ತೆ ಆ ಬಸ್ಸುಗಳನ್ನು ವಾಪಸ್ ಕಳುಹಿಸಿದ್ದಾರೆ. ಸತತವಾಗಿ ನಾಲ್ಕು ವರ್ಷ ಬಸ್ ಖರೀದಿ ಮಾಡಿಲ್ಲ, ಏಳು ವರ್ಷಗಳಿಂದ ನೇಮಕಾತಿ ಮಾಡಿಲ್ಲ, ಹೀಗಾಗಿ ಸಮಸ್ಯೆ ಆಗುತ್ತಿದೆ. ಹಾಗಾಗಿ 5500 ಹೊಸ ಬಸ್ ಖರೀದಿ ಮಾಡುತ್ತಿದ್ದು, 9 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ ಎಂದರು.
2013ರಿಂದ 2017ರವರೆಗೆ ನಾನು ಸಾರಿಗೆ ಸಚಿವ ಇದ್ದಾಗ ಈ ಭಾಗಕ್ಕೆ ಹೆಚ್ಚು ಬಸ್ ನಿಲ್ದಾಣ ಕೊಟ್ಟಿದ್ದೇನೆ. ಬೆಳಗಾವಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಅತಿಹೆಚ್ಚು ಬಸ್ ನಿಲ್ದಾಣ ನೀಡಿದ್ದೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಎರಡು ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ಹಾಕಲು ಸೂಚನೆ ನೀಡಿದ್ದೇನೆ. ಬೆಳಗಾವಿ ನಗರಕ್ಕೆ 100 ಹೊಸ ಬಸ್ ಖರೀದಿ ಮಾಡುತ್ತೇನೆ. ಮೂರು ತಿಂಗಳಲ್ಲಿ ಅವಧಿಯಲ್ಲಿ ಈ ಹೊಸ ಬಸ್ ಗಳು ಬರುತ್ತವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.