ಉಡುಪಿಯ ನಾಲ್ವರ ಕೊಲೆ ಆರೋಪಿ ಪ್ರವೀಣ್ ಚೌಗುಲೆಗೆ 14 ದಿನ ನ್ಯಾಯಾಂಗ ಬಂಧನ!

ಉಡುಪಿ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ವಿಚಾರಣೆ ಬಹುತೇಕ ಮುಕ್ತಾಯಗೊಂಡಂತಿದೆ. ಆರೋಪಿ ಪ್ರವೀಣ್ ಚೌಗುಲೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಡುಪಿಯ ಸಂತೆಕಟ್ಟೆ ನೇಜಾರು (Nejaru Family) ನೂರ್ ಮೊಹಮ್ಮದ್ ಕುಟುಂಬದ ನಾಲ್ವರ ಬರ್ಬರ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸರ ತನಿಖೆ ನಡೆಯುತ್ತಿದೆ. ಈ ನಡುವೆ ಆರೋಪಿ ಪ್ರವೀಣ್ ಚೌಗುಲೆ ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದು, ಇಂದು ಕೋರ್ಟಿಗೆ ಆರೋಪಿಯನ್ನು ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ದೀಪಾ ಮುಂದೆ ಮಲ್ಪೆ ಪೊಲೀಸರು ಹಾಜರುಗೊಳಿಸಿದರು. ಆರೋಪಿಗೆ ಡಿಸೆಂಬರ್ 5 ರ ವರೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಪ್ರವೀಣ್ ಚೌಗುಲೆಯನ್ನು (Praveen Chowgule) ಹಿರಿಯಡ್ಕ ಸಬ್ ಜೈಲ್ ಗೆ ರವಾನೆ ಮಾಡಲಾಗಿದೆ.
ಕುಟುಂಬ ಬಲಿಪಡೆದು ದೀಪಾವಳಿ ಆಚರಿಸಿದ ಆರೋಪಿ ಪ್ರವೀಣ್
ಉಡುಪಿ: ಒಂದೇ ಕುಟುಂಬದ (Family) ನಾಲ್ವರ ಬರ್ಬರ ಹತ್ಯೆ ಪ್ರಕರಣ ವಿಚಾರಣೆ ನಡೆಯುತ್ತಿದೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೆಲ ಆತಂಕಕಾರಿ ವಿಚಾರಗಳು ಬೆಳಕಿಗೆ ಬರುತ್ತಿದೆ. ದೀಪಾವಳಿ (Deepavali) ಹಬ್ಬದ ಮುಂಜಾನೆ ಈ ಕೃತ್ಯ ನಡೆದಿದ್ದು, ಘಟನೆಯ ಬಳಿಕ ಆರೋಪಿ ಪ್ರವೀಣ್ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ದೀಪಾವಳಿ ಆಚರಿಸಿದ್ದಾನೆ.
ಉಡುಪಿ (Udupi) ಜಿಲ್ಲೆ ಹಿಂದೆಂದೂ ಕಂಡರಿಯದ ಬರ್ಬರ ಕೃತ್ಯಕ್ಕೆ ಕಳೆದ ಭಾನುವಾರ ಸಾಕ್ಷಿಯಾಗಿತ್ತು. ಘಟನೆ ನಡೆದು ಮೂರನೇ ದಿನಕ್ಕೆ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದರು. ನ್ಯಾಯಾಲಯದ ಮೂಲಕ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಸಾಕಷ್ಟು ಮಾಹಿತಿಗಳು ಸಿಗುತ್ತಿದೆ. ಭಾನುವಾರ ಬೆಳಗ್ಗೆ 9:30 ರಿಂದ 10 ಗಂಟೆಯ ನಡುವೆ ದುಷ್ಕೃತ್ಯ ಎಸಗಿದ ಆರೋಪಿ, ಎರಡು ಬೈಕ್, ಆಟೋರಿಕ್ಷಾ, ಬಸ್ ಮೂಲಕ ಉಡುಪಿ ಜಿಲ್ಲೆಯಿಂದ ಕಾಲ್ಕಿತ್ತಿದ್ದಾನೆ.
ಕುಟುಂಬ ಬಲಿ ಪಡೆದ ಬಳಿಕ ಮಹಾರಾಷ್ಟ್ರ (Maharashtra) ಮೂಲದ ಪ್ರವೀಣ್ ಅರುಣ್ ಚೌಗಲೆ ಮುಖಕ್ಕೆ ಮಾಸ್ಕ್ ಹಾಕಿ, ಬಟ್ಟೆ ಬದಲಿಸಿಕೊಂಡು ಮನೆ ಸೇರಿದ್ದಾನೆ. ಮನೆಯಿಂದ ಒಬ್ಬನೇ ಹೊರಗೆ ಬಂದು ಕೈಗೆ ಆಗಿದ್ದ ಗಾಯಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾನೆ. ನಾಲ್ವರಿಗೆ ಚಾಕು ಇರಿತ ಮಾಡುವ ಸಂದರ್ಭದಲ್ಲಿ ಆರೋಪಿಯ ಕೈ ಬೆರಳುಗಳು ಗಾಯಗೊಂಡಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಪ್ರವೀಣ್ ಚೌಗಲೆ ಕುಟುಂಬದವರನ್ನು ಕರೆದುಕೊಂಡು ಹೊರಗೆ ಹೋಗಿದ್ದಾನೆ. ಮರುದಿನ ಅಂದರೆ ಸೋಮವಾರ ತನ್ನ ಕಾರಿನಲ್ಲಿ ಮಂಗಳೂರಿನಿಂದ ಹೊರಟು ಬೆಳಗಾವಿಗೆ ತಲುಪಿದ್ದಾನೆ. ಮೂರು ದಿನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಆರೋಪಿ ಬೆಳಗಾವಿ ತಲುಪಿದ ನಂತರ ಫೋನನ್ನು ಆನ್ ಮಾಡಿದ್ದಾನೆ. ಆ ಹೊತ್ತಿಗಾಗಲೇ ಪೊಲೀಸರಿಗೆ ಆರೋಪಿಯ ಬಗ್ಗೆ ಸುಳಿವು ಸಿಕ್ಕಿತ್ತು. ಬೆಳಗಾವಿ ಕುಡುಚಿ ಪೊಲೀಸರ ಸಹಾಯ ಪಡೆದು ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ವಶಕ್ಕೆ ಪಡೆದಿದ್ದರು.
ಘಟನೆ ನಡೆದ ದಿನ ಮತ್ತು ಮುಂದಿನ ಎರಡು ದಿನ ಆತನ ಚಲನವಲನಗಳ ಬಗ್ಗೆ ಆರೋಪಿ ಮಾಹಿತಿ ನೀಡಿದ್ದಾನೆ. ನಾಲ್ವರ ಹತ್ಯೆಗೈದರೂ ಏನೂ ಸಂಶಯ ಬಾರದ ರೀತಿಯಲ್ಲಿ ಆರೋಪಿ ಪ್ರವೀಣ್ ಕುಟುಂಬ, ಸಂಬಂಧಿಕರು, ಆಪ್ತರ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದಾನೆ. ಜೊತೆಗಿದ್ದ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ನಡೆದುಕೊಂಡಿದ್ದಾನೆ. ಉಡುಪಿಯಲ್ಲಿ ಮೃಗೀಯ ವರ್ತನೆ ತೋರಿದಾತ ಏನೂ ನಡೆಯದಂತೆ ನಡೆದುಕೊಂಡಿರುವುದಾಗಿ ತಾನೇ ಒಪ್ಪಿಕೊಂಡಿದ್ದಾನೆ.