ಸ್ಟೇರಿಂಗ್ ಕಟ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ ಕೆಎಸ್ಆರ್ಟಿಸಿ ಬಸ್
ಮಂಡ್ಯ (ಏ.03): ಮಂಡ್ಯ ಜಿಲ್ಲೆಯ ಬಸ್ ಅಪಘಾತದ ಸ್ಥಳವೆಂದೇ ಹೇಳಲಾಗುವ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ನ ಸ್ಟೇರಿಂಗ್ ತುಂಡಾಗಿ ರಸ್ತೆ ಪಕ್ಕದ ಕಬ್ಬಿನ ಗದ್ದೆಗೆ ಬಸ್ ನುಗ್ಗಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಯಾವುದೇ ಪ್ರಯಾಣಿಕರಿಗೆ ಗಂಭೀರ ಗಾಯವಾಗಿಲ್ಲ.
ಮಂಡ್ಯದಲ್ಲಿ ಕನಗನಮರಡಿ ಎಂದರೆ ಬಸ್ ಅಪಘಾತ ಮತ್ತು ಹತ್ತಾರು ಜನರ ಸಾವಿನ ಘಟನೆಗಳೇ ನೆನಪಿಗೆ ಬರುತ್ತವೆ. ಇನ್ನು ಇಂದು ಬೆಳಗ್ಗೆ ಕೂಡ ಸುಮಾರು 30ಕ್ಕೂ ಅಧಿಕ ಪ್ರಯಾಣಿಕರು ಇದ್ದ ಕೆಎಸ್ಆರ್ಟಿಸಿ ಬಸ್ನ ಸ್ಟೇರಿಂಗ್ ತುಂಡಾಗಿದ್ದು, ಪಕ್ಕದಲ್ಲಿಯೇ ಇದ್ದ ಕಬ್ಬಿನ ಗದ್ದೆಗೆ ನುಗ್ಗಿದೆ. ಒಂದು ವೇಳೆ ಬಸ್ ಏನಾದರೂ ಇನ್ನೊಂದು ಬದಿಯಲ್ಲಿನ ದೊಡ್ಡ ಕಾಲುವೆಗೆ ಬಿದ್ದಿದ್ದರೆ ದೊಡ್ಡ ಅಪಘಾತ ಹಾಗೂ ಸಾವು ನೋವು ಉಂಟಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಸ್ಟೇರಿಂಗ್ ತುಂಡಾದ ನಂತರ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಅನ್ನು ಗದ್ದೆಗೆ ನುಗ್ಗಿಸಿ ನಿಲ್ಲಿಸಿದ್ದಾರೆ. ಈ ಮೂಲಕ ಪ್ರಯಾಣಿಕರ ಜೀವ ಉಳಿಸಿದ್ದಾರೆ.
ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು: ಇಂದು ಬೆಳಗ್ಗೆ ಮಂಡ್ಯದಿಂದ ಪಾಂಡವಪುರಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಕನಗನಮರಡಿ ಗೇಟ್ ಬಳಿ ಸ್ಟೇರಿಂಗ್ ಕಟ್ ಆಗಿದೆ. ನಂತರ ಸ್ಟೇರಿಂಗ್ ತಿರುಗಿಸಲೂ ಸಾಧ್ಯವಾಗದಂತೆ ಲಾಕ್ ಆಗಿದೆ. ಈ ಹಿನ್ನೆಲೆಯಲ್ಲಿ ಬಸ್ ಕಬ್ಬಿನ ಗದ್ದೆಗೆ ನುಗ್ಗಿದೆ. ಕೂಡಲೇ ತೀವ್ರ ಆತಂಕಕ್ಕೆ ಒಳಗಾದ ಪ್ರಯಾಣಿಕರು ಏನಾಗುತ್ತದೆ ಎಂದು ಭಯದಿಂದ ಚೀರಾಡುವ ವೇಳೆಗಾಗಲೇ ಬಸ್ ಕಬ್ಬಿನ ಗದ್ದೆಯಲ್ಲಿ ಸಬ್ ನಿಂತಿತ್ತು. ಎಲ್ಲರೂ ಬಸ್ ಚಾಲಕನತ್ತ ಧಾವಿಸಿ ತರಾಟೆಗೆ ತೆಗೆದುಕೊಂಡಿದ್ದು, ಬಸ್ನಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ತಿಳಿಸಿದ್ದಾರೆ. ಇನ್ನು ಘಟನೆಯಿಂದ ಬಸ್ ಕಾಲುವೆಗೆ ಬೀಳದೇ ಗದ್ದೆಗೆ ನುಗ್ಗಿ ಪ್ರಾಣ ಉಳಿದಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಎರಡು ತುಂಡಾದ ಎತ್ತಿನಗಾಡಿ: ಇನ್ನು ಕೆಎಸ್ಆರ್ಟಿಸಿ ಬಸ್ ಸ್ಟೇರಿಂಗ್ ತುಂಡಾದ ನಂತರ ಕಬ್ಬಿನ ಗದ್ದೆಯ ಪಕ್ಕದಲ್ಲಿ ದೊಡ್ಡ ಆಲದ ಮರ ಮತ್ತು ಅದರ ಪಕ್ಕದಲ್ಲಿ ಗದ್ದೆಯ ಬಳಿ ಎತ್ತಿನಗಾಡಿಯನ್ನು ನಿಲ್ಲಿಸಲಾಗಿತ್ತು. ಅದೃಷ್ಟವಶಾತ್ ಬಸ್ ಆಲದ ಮರಕ್ಕೆ ಡಿಕ್ಕಿ ಹೊಡೆದಿದ್ದರೂ ಪ್ರಯಾಣಿಕರಿಗೆ ಪ್ರಾಣಾಪಾಯ ಉಂಟಾಗುತ್ತಿತ್ತು. ಆದರೆ, ಅದರ ಪಕ್ಕದಲ್ಲಿಯೇ ನಿಲ್ಲಿಸಿದ್ದ ಎತ್ತಿನ ಗಾಡಿಯ ಮೇಲೆಯೇ ಬಸ್ ಹರಿದಿದೆ. ಖಾಲಿ ನಿಲ್ಲಿಸಿದ್ದ ಎತ್ತಿನ ಗಾಡಿ ಸಂಪೂರ್ಣ ಎರಡು ತುಂಡಾಗಿದೆ. ಗಾಲಿಯ ಮಧ್ಯದಲ್ಲಿ ಎತ್ತಿನಗಾಡಿ ಸಿಲುಕಿಕೊಂಡಿದ್ದು, ಅದರ ಎರಡೂ ಬದಿಯ ಟೈರ್ಗಳು ಕಳಚಿಬಿದ್ದಿವೆ.
ಬಸ್ ದುರಂತಕ್ಕೆ ಸಾಕ್ಷಿಯಾದ ಕನಗನಮರಡಿ: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ರಸ್ತೆಯಲ್ಲಿ 2018ರ ನವೆಂಬರ್ ನಲ್ಲಿ ಖಾಸಗಿ ಬಸ್ ಕಾಲುವೆಗೆ ಉರುಳಿ 24ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಇನ್ನೂ ಹಸಿಯಾಗಿರುವಾಗಲೇ ಇದೇ ರಸ್ತೆಯಲ್ಲಿ ಪ್ರವಾಸಿ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ನಡೆದಿತ್ತು. ಈಗ ಕೆಎಸ್ಆರ್ಟಿಸಿ ಬಸ್ ದುರಂತವಾಗಿದ್ದು, ಪ್ರಯಾಣಿಕರಿಗೆ ಪ್ರಾಣಾಪಾಯ ಆಗಿಲ್ಲ ಎಂಬ ವಿಷಯ ತಿಳಿದು ಸ್ಥಳೀಯರು ಮತ್ತು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.