ಸುಮಲತಾ ಬಿಜೆಪಿಗೆ ಬಂದರೆ ತಕ್ಕದಾದ ಸ್ಥಾನಮಾನ: ಸಚಿವ ನಾರಾಯಣಗೌಡ
ಮೇಲುಕೋಟೆ (ಫೆ.4) : ಸಂಸದೆ ಸುಮಲತಾ ಬಿಜೆಪಿಗೆ ಬರುವುದಾದರೆ ಆತ್ಮೀಯವಾಗಿ ಸ್ವಾಗತಿಸಲಾಗುವುದು. ಪಕ್ಷದಿಂದ ಅವರಿಗೆ ತಕ್ಕದಾದ ಸ್ಥಾನ ದೊರೆಯಲಿದೆ ಎಂದು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.
ಬಳಿಘಟ್ಟಗ್ರಾಮದಲ್ಲಿ ಶುಕ್ರವಾರ ನಡೆದ ಲಕ್ಷ್ಮೀದೇವಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದೆ. ದೇಶ ರಕ್ಷಣೆಗೆ ಬದ್ಧವಾಗಿದೆ. ಯಾರೇ ಬಂದರೂ ಅವರಿಗೆ ತಕ್ಕದಾದ ಸ್ಥಾನ ದೊರೆಯಲಿದೆ ಎಂದರು.
ಸಂಸದೆ ಸುಮಲತಾ ಬಿಜೆಪಿ ಸೇರುವುದರಿಂದ ಅವರಿಗೆ ಮತ್ತು ಅವರ ಬೆಂಬಲಿಗರಿಗೆ ಹೆಚ್ಚು ಲಾಭವಿದೆ. ಸಂಸದರ ಹಲವು ಬೆಂಬಲಿಗರು ಈಗಾಗಲೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಯುವ ನಾಯಕರ ಸೇರ್ಪಡೆಯಿಂದ ಮಂಡ್ಯಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ ಎಂದು ತಿಳಿಸಿದರು.
ನಾನು ಕಾಂಗ್ರೆಸ್ ಸೇರುತ್ತೇನೆ ಎನ್ನುವ ವದಂತಿಯನ್ನು ಸೋಲಿನ ಭೀತಿಯಲ್ಲಿರುವ ಎದುರಾಳಿಗಳು ಹಬ್ಬಿಸಿದ್ದಾರೆ. ಬಿಜೆಪಿ ನನಗೆ ಎಲ್ಲ ರೀತಿಯ ಸ್ಥಾನಮಾನ ನೀಡಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷಕ್ಕೆ ದ್ರೋಹಬಗೆಯುವ ವಿಚಾರವನ್ನು ಕನಸಿನಲ್ಲೂ ಎಣಿಸುವುದಿಲ್ಲ ಎಂದರು.
ಕುಹಕಿಗಳು ಇಲ್ಲದ ಗೊಂದಲ ಮೂಡಿಸುತ್ತಿದೆ. ಪಕ್ಷದ ಕಾರ್ಯಕರ್ತರು ಸುಳ್ಳಿನ ವಿಚಾರವನ್ನು ನಂಬಬಾರದು. ಮಾಜಿ ಸಿಎಂ ಸಿದ್ಧರಾಮಯ್ಯ ಕುರಿತು ಸಾಂಧರ್ಭಿಕವಾಗಿ ಆಡಿತ ಮಾತುಗಳಿಗೆ ವಿಶೇಷವಾಗಿ ವಾಖ್ಯಾನಿಸುವುದು ಸರಿಯಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆದಿದೆ. ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಮಂಡ್ಯಜಿಲ್ಲೆಗೆ ಭೇಟಿನೀಡುವ ಕಾರ್ಯಕ್ರಮವಿದೆ. ಮುಂದೆಯೂ ನಮ್ಮದೇ ಸರ್ಕಾರ ರಚನೆಯಾಗಲಿದೆ ಎಂಬ ದೃಢವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮೇಲುಕೋಟೆ ಕ್ಷೇತ್ರದ ಬಿಜೆಪಿ ಮುಖಂಡ ಡಾ.ಇಂದ್ರೇಶ್, ಸೋಮಶೇಖರ್, ಸ್ಥಳೀಯ ಮುಖಂಡರಾದ ಜಯಬೋರೇಗೌಡ, ರಾಮೇಗೌಡ, ನಾಗಣ್ಣಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.