ಮನವಿ ಪತ್ರ ಹಿಡಿದು ಸಿಎಂ ಬೊಮ್ಮಾಯಿ ಭೇಟಿ ಮಾಡಿದ ನಟ ರಿಷಬ್ ಶೆಟ್ಟಿ
ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರನ್ನು ಭೇಟಿ ಮಾಡಿದ್ದಾರೆ ನಟ ರಿಷಬ್ ಶೆಟ್ಟಿ (Rishabh Shetty). ಸಿಎಂ ಭೇಟಿಯ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಭೇಟಿಯ ಹಿಂದೆ ಮಹತ್ವದ ಉದ್ದೇಶವಿತ್ತು ಎನ್ನುವುದನ್ನೂ ಅವರು ಹೇಳಿಕೊಂಡಿದ್ದಾರೆ. ತಾವು ಕೊಟ್ಟಿರುವ ಮನವಿಗೂ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದೂ ಅವರು ವಿಡಿಯೋ ಮೂಲಕ ಹೇಳಿದ್ದಾರೆ.
ಕಾಂತಾರ ಚಿತ್ರದ ನಂತರ ಅವರು ಅನೇಕ ಕಾಡುಗಳಿಗೆ ಭೇಟಿ ನೀಡಿದ್ದಾರಂತೆ. ಕರ್ನಾಟಕದ ನಾನಾ ಭಾಗಗಳಲ್ಲಿ ಸಂಚರಿಸಿದ್ದಾರಂತೆ. ಅದರಲ್ಲೂ ಕಾಡಂಚಲ್ಲಿ ವಾಸಿಸುವವರ ಜೊತೆ ಬೆರೆತಿದ್ದಾರೆ. ಅವರ ನೋವು ನಲಿವುಗಳಿಗೆ ಸಾಕ್ಷಿಯಾಗಿದ್ದಾರೆ. ಅಲ್ಲದೇ, ಕಾಡಿನಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆಯೂ ಮಾತನಾಡಿದ್ದಾರಂತೆ. ಅವರು ಕಷ್ಟಗಳು ಏನು ಎನ್ನುವುದನ್ನು ಪಟ್ಟಿಮಾಡಿ, ಆ ಪಟ್ಟಿಯನ್ನು ಸಿಎಂಗೆ ನೀಡಿದ್ದಾರೆ ರಿಷಬ್.
ಕಾಡಿನ ಪಕ್ಕದಲ್ಲೇ ವಾಸಿಸುವ ಅನೇಕರಿಗೆ ಏನೆಲ್ಲ ಕಷ್ಟ ಪಡುತ್ತಿದ್ದಾರೆ, ಅವರಿಗೆ ಏನೆಲ್ಲ ಪರಿಹಾರ ನೀಡಬಹುದು ಹಾಗೂ ಕಾಡು ಪ್ರಾಣಿಗಳಿಂದ ಯಾವ ರೀತಿಯಲ್ಲಿ ತೊಂದರೆ ಆಗುತ್ತಿದೆ ಮತ್ತು ಅರಣ್ಯ ಸಿಬ್ಬಂದಿ ಎಷ್ಟೆಲ್ಲ ಸಂಕಟಗಳನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಅಕ್ಷರ ರೂಪದಲ್ಲಿ ಮುಖ್ಯಮಂತ್ರಿಗಳಿಗೆ ತೋರಿಸಿದ್ದಾರೆ. ಸಿಎಂ ಕೂಡ ಕೂಡಲೇ ಅವುಗಳಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರಂತೆ.
ಕಾಂತಾರ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಿಷಬ್, ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ದೈವನರ್ತಕರಿಗೆ ಮತ್ತು ಅವರ ಕುಟುಂಬಕ್ಕೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅಲ್ಲದೇ, ಜನಪದ ಕಲೆಗಳು ಮತ್ತು ಜನಪದರ ಭಾವನೆಗಳಿಗೆ ಸ್ಪಂದಿಸಿದ್ದಾರೆ. ಅದರ ಮುಂದುವರೆಕೆಯಾಗಿ ಸಿಎಂ ಭೇಟಿ ಮಾಡಿದ್ದಾರೆ.