ಬೆಂಕಿ ಅವಘಡ – ಮಕ್ಕಳು, ಮಹಿಳೆಯರು ಸೇರಿ 14 ಮಂದಿ ಸಜೀವದಹನ
ರಾಂಚಿ: ಬಹುಮಹಡಿ ಕಟ್ಟಡದಲ್ಲಿ (Multi-Storey Building) ಸಂಭವಿಸಿದ ಬೆಂಕಿ (Fire) ಅವಘಡದಲ್ಲಿ 14 ಮಂದಿ ಸಾವನ್ನಪ್ಪಿದ ಘಟನೆ ಜಾರ್ಖಂಡ್ನಲ್ಲಿ (Jharkhand) ನಡೆದಿದೆ.
ಜಾರ್ಖಂಡ್ನ ಧನ್ಬಾದ್ನ (Dhanbad) ಜೋರಾಫಟಕ್ನಲ್ಲಿರುವ 13 ಅಂತಸ್ತಿನ ಕಟ್ಟಡವೊಂದರಲ್ಲಿ ಈ ಘಟನೆ ನಡೆದಿದೆ. ಘಟನೆ ವೇಳೆ 10 ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದಾರೆ. ಅವರನ್ನೆಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಬೆಂಕಿ ನಂದಿಸಲು 40 ಅಗ್ನಿಶಾಮಕ ಟೆಂಡರ್ಗಳು ನೆರೆದಿತ್ತು. ಘಟನೆಗೆ ಸಂಬಂಧಿಸಿ ನರೇಂದ್ರ ಮೋದಿ (Narendra Modi) ಹಾಗೂ ಜಾರ್ಖಂಡ್ನ ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemant Soren) ಟ್ವೀಟ್ ಮಾಡಿ ಮೃತರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿದರು.
ಟ್ವೀಟ್ನಲ್ಲಿ ಏನಿದೆ?: ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಧನ್ಬಾದ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಸಾವನ್ನಪ್ಪಿರುವ ವಿಷಯ ಕೇಳಿ ತೀವ್ರ ದುಃಖವಾಗಿದೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು. ಹಾಗೂ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಹಾಗೂ ಗಾಯಳುಗಳಿಗೆ 50,000ರೂ. ಪರಿಹಾರವನ್ನು ಘೋಷಿಸಿದರು.