ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್ಬೈ

ತುಮಕೂರು: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (JC Madhu Swamy) ತವರು ಕ್ಷೇತ್ರ ಚಿಕ್ಕನಾಯಕನಹಳ್ಳಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಶಾಸಕ ಕಿರಣ್ ಕುಮಾರ್ ಬಿಜೆಪಿ (BJP) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಅಲ್ಲದೇ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.ʼ
ಕಿರಣ್ ಕುಮಾರ್ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಮಾಧುಸ್ವಾಮಿಯವರನ್ನು ಹೊರತುಪಡಿಸಿ ಇನ್ನಾರಿಗೂ ಟಿಕೆಟ್ ಕೊಡುವ ಸಾಧ್ಯತೆ ಇಲ್ಲ. ಆದ್ದರಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತಿದ್ದ ಮಾಜಿ ಶಾಸಕ ಕಿರಣ್ ಕುಮಾರ್ ಕಾಂಗ್ರೆಸ್ ನತ್ತ (Congress) ಮುಖ ಮಾಡಿದ್ದಾರೆ. ಸೋಮವಾರ (ಫೆಬ್ರವರಿ 20) ಕೆಪಿಸಿಸಿ (KPCC) ಅಧ್ಯಕ್ಷರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸದಸ್ಯತ್ವ ಪಡೆಯಲಿದ್ದಾರೆ
ಟಿಕೆಟ್ ಗೊಂದಲ ದೂರ: ಕಿರಣ್ ಕುಮಾರ್ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಟಿಕೆಟ್ ಗೊಂದಲ ದೂರವಾಗಿದೆ. ಇತ್ತ ಸಚಿವ ಮಾಧುಸ್ವಾಮಿಗೆ ಪ್ರಬಲ ಪೈಪೋಟಿ ನೀಡುತಿದ್ದ ಕಿರಣ್ ಕುಮಾರ್ ಪಕ್ಷ ತೊರೆದಿದ್ದರಿಂದ ಮಾಧುಸ್ವಾಮಿ ಹಾದಿ ಸುಗಮವಾಗಿದೆ. ಅತ್ತ ಕಾಂಗ್ರೆಸ್ನ ಸಮಸ್ಯೆಗೂ ಕಿರಣ್ ಕುಮಾರ್ ಪರಿಹಾರವಾಗಿದ್ದಾರೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದೇ ಪಕ್ಷ ಕ್ಷೀಣಗೊಂಡಿತ್ತು. ಕಿರಣ್ ಕುಮಾರ್ ಆಗಮನದಿಂದ ಕಾಂಗ್ರೆಸ್ಗೆ ಬಲಬಂದತಾಗಿದೆ. 9 ಮಂದಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು, ಕಿರಣ್ ಕುಮಾರ್ಗೆ ಟಿಕೆಟ್ ಫಿಕ್ಸ್ ಆಗಿರೋದ್ರಿಂದ ಕಾಂಗ್ರೆಸ್ ಗೊಂದಲವೂ ಬಗೆಹರಿದಿದೆ. ಓರ್ವ ಮಾಜಿ ಶಾಸಕರ ರಾಜೀನಾಮೆಯಿಂದ ಎರಡೂ ಪಕ್ಷದ ಗೊಂದಲಕ್ಕೆ ತೆರೆ ಬಿದ್ದಿದೆ.