ನಾನು ರುದ್ರಾಕ್ಷಿ ಧರಿಸಿದ್ದೇನೆ, ಮದ್ಯಪಾನ ಮಾಡಲ್ಲ : ನಟಿ ಸಾನ್ಯಾ ಅಯ್ಯರ್
ಪುತ್ತೂರಿನ (Puttur) ಕಂಬಳದಲ್ಲಿ (Kambala) ನಡೆದ ಘಟನೆಗೆ ಸಂಬಂಧಪಟ್ಟಂತೆ ಕಿರುತೆರೆ ನಟಿ ಸಾನ್ಯಾ ಅಯ್ಯರ್ (Sanya Iyer) ಮೇಲೆ ದಿನಕ್ಕೊಂದು ಆರೋಪ ಕೇಳಿ ಬಂದಿದ್ದವು. ಅದಕ್ಕೆ ಸಂಬಂಧಪಟ್ಟಂತೆ ಸ್ವತಃ ಸಾನ್ಯಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತುರ್ತು ಪತ್ರಿಕಾಗೋಷ್ಠಿ ಕರೆದಿದ್ದ ಅವರು ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿದ್ದಾರೆ. ಕಂಬಳದ ವೇದಿಕೆಯಲ್ಲೇ ಅವರ ಮೇಲೆ ಹಲ್ಲೆ ಆಯಿತು ಎನ್ನುವುದರ ಜೊತೆಗೆ ಸಾನ್ಯಾ ಮದ್ಯಪಾನ ಮಾಡಿಕೊಂಡು ಬಂದಿದ್ದರು ಎಂದೂ ಹೇಳಲಾಗಿತ್ತು. ಈ ಕುರಿತು ಅವರು ಮಾತನಾಡಿದ್ದಾರೆ.
‘ಕಂಬಳದಲ್ಲಿ ನಾನು ಕುಡಿದುಕೊಂಡು ಬಂದಿದ್ದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಸುಳ್ಳು. ನಾನು ಜೀರೋ ಶುಗರ್ ಡಯೆಟ್ ಮಾಡುತ್ತಿದ್ದೇನೆ. ಮುಂಬೈನಲ್ಲಿ ಶೂಟಿಂಗ್ ಇರುವ ಕಾರಣಕ್ಕಾಗಿ ಇದೆಲ್ಲವನ್ನೂ ಮಾಡುತ್ತಿದ್ದೇನೆ. ಅಂಥದ್ದರಲ್ಲಿ ಮದ್ಯಪಾನ ಹೇಗೆ ಮಾಡಲಿ? ಜೊತೆಗೆ ನಾನು ರುದ್ರಾಕ್ಷಿಯನ್ನು ಧರಿಸಿದ್ದೇನೆ. ಇದನ್ನು ಧರಿಸಿದಾಗ ಮದ್ಯಪಾನ, ಧೂಮಪಾನ ಮಾಡಲ್ಲ. ಸುಮ್ಮನೆ ನನ್ನ ಮೇಲೆ ಆಪಾದನೆ ಹೊರಿಸಲಾಗುತ್ತಿದೆ’ ಎಂದರು ಸಾನ್ಯ.
ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ. ಅವತ್ತು ಕಂಬಳವನ್ನು ಸರಿಯಾಗಿ ನೋಡಲು ಆಗದೇ ಇರುವ ಕಾರಣಕ್ಕಾಗಿ ಮತ್ತೆ ಸ್ನೇಹಿತೆಯರ ಜೊತೆ ಹೋದೆ. ಆಗ ಒಬ್ಬ ಹುಡುಗ ನನ್ನ ಫ್ರೆಂಡ್ಸ್ ಕೈ ಹಿಡಿದು ಎಳೆದ. ಭಯ ಆಯಿತು. ಆನಂತರ ಇದನ್ನು ಆಯೋಜಕರ ಗಮನಕ್ಕೆ ತಂದೆವು. ಆ ಹುಡುಗ ನಂತರ ಎಲ್ಲಿಗೆ ಹೋದ? ಏನಾದ ಎನ್ನುವ ವಿಚಾರ ಗೊತ್ತಿಲ್ಲ. ಆದರೆ, ಸುದ್ದಿ ಆದಂತೆ ಅವನ ಕಪಾಳಕ್ಕೆ ನಾನು ಹೊಡೆಯಲಿಲ್ಲ, ನನಗೂ ಅವನು ಹೊಡೆಯಲಿಲ್ಲ ಎಂದು ಸಾನ್ಯ ಮಾತನಾಡಿದ್ದಾರೆ.
ತಮ್ಮ ಕಪಾಳಕ್ಕೆ ಆ ಹುಡುಗ ಹೊಡೆದಿದ್ದಾನೆ ಎನ್ನುವ ಸುದ್ದಿ ಹೇಗೆ ಹಬ್ಬಿತೋ ಗೊತ್ತಿಲ್ಲ ಎನ್ನುವ ಸಾನ್ಯಾ, ಅಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲವೆಂದು ಹೇಳಿದ್ದಾರೆ. ಆದರೆ, ಕಳೆದ ಎರಡು ದಿನಗಳಿಂದ ಈ ಘಟನೆಯ ಕುರಿತು ಬೇರೆಯೇ ಸುದ್ದಿ ಹಬ್ಬಿತ್ತು. ಮದ್ಯ ಸೇವಿಸಿದ್ದ ಯುವಕನೊಬ್ಬ ಸಾನ್ಯಾ ಜೊತೆ ಸೆಲ್ಫಿ ತಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ಮಾಡಿದ. ಅವನ ಮೇಲೆ ಸಾನ್ಯಾ ಕೈ ಮಾಡಿದರು. ಅವನೂ ಹೊಡೆದ. ನಂತರ ಅಲ್ಲಿದ್ದವರು ಆ ಹುಡುಗನನ್ನು ಥಳಿಸಿದರು ಎನ್ನುವುದು ವರದಿಯಾಗಿತ್ತು. ಇದೀಗ ಅಂಥದ್ದು ಏನೂ ಆಗಿಲ್ಲ ಎಂದಿದ್ದಾರೆ ಸಾನ್ಯ.