ದೆಹಲಿ ಮದ್ಯನೀತಿ ಹಗರಣ – KCR ಪುತ್ರಿ ಕವಿತಾಗೆ ED ಸಮನ್ಸ್
ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ (Telangana CM) ಕೆ ಚಂದ್ರಶೇಖರ್ ರಾವ್ (K Chandrashekar Rao) ಅವರ ಪುತ್ರಿ ಹಾಗೂ ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ ಕವಿತಾ (K Kavitha) ಅವರಿಗೆ ದೆಹಲಿಯ ಅಬಕಾರಿ ಹಗರಣಕ್ಕೆ (Delhi Liquor Scam) ಸಂಬಂಧಿಸಿದಂತೆ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ (ED) ಗುರುವಾರ ಹಾಜರಾಗುವಂತೆ ಸಮನ್ಸ್ ನೀಡಿದೆ.
ಇದೀಗ ರದ್ದಾಗಿರುವ ದೆಹಲಿಯ ಮದ್ಯನೀತಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವುದಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಅವರನ್ನು ಇಡಿ ಸೋಮವಾರ ವಿಚಾರಣೆ ನಡೆಸಿ, ಮಂಗಳವಾರ ಬಂಧಿಸಿತ್ತು. ಪಿಳ್ಳೈ ಮದ್ಯನೀತಿ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕವಿತಾಗೆ ಕಂಪನಿಯೊಂದರಲ್ಲಿ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ.
ಇಡಿ ಪ್ರಕರಣದ ಚಾರ್ಜ್ಶೀಟ್ನಲ್ಲಿ ಕೆ ಕವಿತಾ ಅವರನ್ನು ಹೆಸರಿಸಿದೆ. ಅವರು ಮದ್ಯದ ಕಂಪನಿಯಾದ ಇಂಡೋಸ್ಪಿರಿಟ್ಸ್ನಲ್ಲಿ ಶೇ.65 ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ 11ರಂದು ಇಡಿ ಕವಿತಾ ಅವರನ್ನು ಪ್ರಶ್ನಿಸಿತ್ತು.
ಮಾರ್ಚ್ 10ರಂದು ಮಹಿಳಾ ಮೀಸಲಾತಿ ಮಸೂದೆಗೆ ಒತ್ತಾಯಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಕವಿತಾ ಕರೆ ನೀಡಿದ್ದಾರೆ ಹಾಗೂ ಪ್ರತಿಪಕ್ಷದ ಪಾಳೆಯದ ಎಲ್ಲಾ ನಾಯಕರು ಭಾಗವಹಿಸಲು ವಿನಂತಿಸಿದ್ದಾರೆ. ಆದರೆ ಈ ನಡುವೆ ಇಡಿ ಕವಿತಾ ಅವರಿಗೆ ಸಮನ್ಸ್ ನೀಡಿದ್ದು, ಮಾರ್ಚ್ 9ರಂದು ಇಡಿ ಕಚೇರಿಗೆ ಅವರು ಹಾಜರಾಗಬೇಕಿದೆ.