ಹಾಸನ: ಕಾಡಾನೆಗಳ (Elephant) ಹಿಂಡಿನ ದಾಳಿಯಿಂದ ರೈತರು ಕಂಗಾಲಾಗಿದ್ದು, ದಯಾಮರಣ ನೀಡುವಂತೆ ಸರ್ಕಾರಕ್ಕೆ ಹೆಬ್ಬನಹಳ್ಳಿ ಗ್ರಾಮದ ಕಾಫಿ ಬೆಳೆಗಾರ ಸೋಮೇಶ್ ಮನವಿ ಮಾಡಿದ್ದಾರೆ.
ಹಾಸನ (Hassan) ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದೆ. ಸಕಲೇಶಪುರ ತಾಲೂಕಿನ ಕೆಸಲಗುಲಿ ಗ್ರಾಮದಲ್ಲಿ ಗಜಪಡೆ ದಾಳಿಯಿಂದ ಅಪಾರ ಪ್ರಮಾಣದ ಕಾಫಿ, ಭತ್ತ ಸೇರಿದಂತೆ ಇತರೆ ಬೆಳೆಗಳು ನಾಶವಾಗಿದೆ. ಈ ಹಿನ್ನೆಲೆಯಲ್ಲಿ ರೈತ ಸೋಮೇಶ್ ಮಾತನಾಡಿ, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕಾಫಿ ಗಿಡವನ್ನು ಬೆಳಯಲು ಸುಮಾರು 20 -30 ವರ್ಷಗಳು ಬೇಕಾಗುತ್ತದೆ. ಆದರೆ ಕಾಡಾನೆ ದಾಳಿಯಿಂದಾಗಿ ನಾವು ಕಷ್ಟಪಟ್ಟು ಬೆಳೆದ ಬೆಳೆಗಳೆಲ್ಲವೂ ನಾಶವಾಗುತ್ತಿದೆ. ಇದನ್ನು ನೋಡಿ ತುಂಬಾ ಬೇಜಾರಾಗುತ್ತಿದೆ. ಒಂದೊಂದು ದಿನವೂ ಕಳೆಯುವುದು ನಮಗೆ ದುಸ್ಸಾಹಸವಾಗಿದೆ. ಇದನ್ನೆಲ್ಲಾ ನೋಡಿದರೆ ಜೀವಂತವಾಗಿ ಯಾಕೆ ಇರಬೇಕು ಎನಿಸುತ್ತದೆ. ಸರ್ಕಾರ ನಮಗೆ ದಯಾಮರಣ ನೀಡಲಿ. ನಾವೆಲ್ಲರೂ ಸಾಯುತ್ತೇವೆ ಎಂದು ಕಣ್ಣೀರಿಟ್ಟಿದ್ದಾರೆ.
ಬೆಳಗ್ಗೆ, ಸಂಜೆ ಯಾವ ರೀತಿ ಬದುಕಬೇಕೆಂಬುದೇ ತೋಚುತ್ತಿಲ್ಲ. ಸರ್ಕಾರವು ಟಾಸ್ಕ್ ಫೋರ್ಸ್ ರಚನೆ ಮಾಡಿದ್ದಾರೆ. ಆದರೆ ಅವರು ಜೀಪ್ನಲ್ಲಿ ತಿರುಗುತ್ತಿದ್ದಾರೆ. ಅವರಿಂದ ರೈತರಿಗೆ ಒಂದು ಪೈಸೆಯೂ ಉಪಕಾರ ಆಗುತ್ತಿಲ್ಲ. ಈಗಲಾದರೂ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಕಲೇಶಪುರ (Sakleshpur) ತಾಲೂಕಿನ ಶಿಡಿಗಳಲೆ ಗ್ರಾಮದಲ್ಲೂ ಕಾಡಾನೆಗಳ ಹಿಂಡು ದಾಳಿ ಮಾಡಿ ಭತ್ತ, ಕಾಫಿ ಗಿಡಗಳನ್ನು ತುಳಿದು ನಾಶ ಮಾಡಿವೆ. ಜಗದೀಶ್ ಮಲ್ಲಣ್ಣ ಎಂಬುವವರಿಗೆ ಸೇರಿದ ಗದ್ದೆಯಲ್ಲಿ ಕೊಯ್ಲಿಗೆ ಬಂದಿದ್ದ ಭತ್ತವನ್ನು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ನಾಶಪಡಿಸಿವೆ. ಇಷ್ಟಾದರೂ ಇಲ್ಲಿಗೆ ಯಾರೂ ಬಂದು ರೈತರ ಕಷ್ಟ ಕೇಳಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.
ಕಾಫಿ ಹಣ್ಣು ಕೊಯ್ಯಲು ಬರುವವರು ಹೆದರಿಕೆಯಿಂದ ವಾಪಸ್ ಹೋಗುತ್ತಿದ್ದಾರೆ. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅರಣ್ಯ ಇಲಾಖೆಯವರಿಗೆ ಕೊಡುವ ಅರ್ಧ ಸಂಬಳ ನಮಗೆ ಕೊಡಿ, ನಾವು ಕಾದು ಕಾಡಾನೆಗಳನ್ನು ದೂರ ಓಡಿಸಿ ಬೆಳೆ ಕಾಪಾಡಿಕೊಳ್ಳುತ್ತೇವೆ ಎಂದರು.
ಪಪ್ಪಾಯ ಹಣ್ಣಿನಲ್ಲಿರುವ ನಿಮಗೆ ತಿಳಿದಿರದ ಕೆಲವು ಆರೋಗ್ಯಕಾರಿ ಸಂಗತಿಗಳು; ತಪ್ಪದೇ ಓದಿ