ಮಡಿಕೇರಿ ದಸರಾಕ್ಕೆ ದಸರಾ ಇತಿಹಾಸದಲ್ಲಿ ಅತಿ ಹೆಚ್ಚು 1.50 ಕೋಟಿ ರೂಪಾಯಿ ಅನುದಾನ: ಡಾ. ಮಂತರ್ ಗೌಡ
ಮಡಿಕೇರಿ: ಮಡಿಕೇರಿ ದಸರಾಕ್ಕೆ ರಾಜ್ಯ ಸರ್ಕಾರ ಪ್ರಥಮ ಬಾರಿಗೆ ಬರೋಬ್ಬರಿ ಒಂದುವರೆ ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಖಾತೆಗೆ ಶೀಘ್ರದಲ್ಲೇ ಅನುದಾನದ ಹಣ ಬಿಡುಗಡೆ. ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ದಸರಾ ಉತ್ಸವಕ್ಕೆ ಅತ್ಯಧಿಕ ಅನುದಾನ.
ಶಾಸಕ ಮಂತರ್ ಗೌಡ ಮತ್ತು ಎ. ಎಸ್. ಪೊನ್ನಣ್ಣ ಅವರ ಒತ್ತಡದ ಫಲವಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ ಸರಕಾರ. ಅನುದಾನ ಹೆಚ್ಚಳದ ಬಗ್ಗೆ ಮಡಿಕೇರಿ ದಸರಾ ಸಮಿತಿಯಿಂದ ಶಾಸಕ ಡಾ. ಮಂತರ್ ಗೌಡ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಡಿಕೇರಿ ದಸರಾ ಇತಿಹಾಸದಲ್ಲಿ ಇಷ್ಟು ದೊಡ್ಡ ಅನುದಾನ ಪ್ರಥಮ ಬಾರಿಗೆ ಮಡಿಕೇರಿ ದಸರಾಕ್ಕೆ ಒದಗಿ ಬಂದಿದೆ. ಕಳೆದ ಬಾರಿ 95 ಲಕ್ಷ ಅನುದಾನ ಒದಗಿ ಬಂದಿತ್ತು. ಈ ಬಾರಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅತಿ ಹೆಚ್ಚು ಅನುದಾನ ತರುವ ಭರವಸೆಯನ್ನು ದಸರಾ ಸಮಿತಿ ಹಾಗೂ ಸಾರ್ವಜನಿಕರಿಗೆ ನೀಡಿದ್ದರು. ಈ ಆಧಾರದ ಮೇಲೆ ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಒತ್ತಡ ತಂದು ಈ ಬಾರಿ ಗರಿಷ್ಠ ಅನುದಾನವನ್ನು ಅವರು ಮಡಿಕೇರಿ ದಸರಾಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.
ರಾಜ ಪೋಷಾಕಿನಲ್ಲಿ ಮಿಂಚಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್:
ರಾಜಾಧೀರಾಜಾ ರಾಜ ಮಾರ್ತಾಂಡ ರಾಜ ಕುಲತಿಲಕ ಯದುವೀರ್ ಪರಾಕ್, ಬಹು ಪರಾಕ್. ಹೀಗೆ ವಂಧಿ ಮಾಗಧರು ಬಹುಪರಾಕ್ ಕೂಗುತ್ತಿದ್ದರೆ, ಇತ್ತ ರಾಜಗಾಂಭೀರ್ಯ ನಡಿಗೆಯಲ್ಲಿ ಯದುವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮಿಸಿದರು. ಇದು ಇವತ್ತು ಮೈಸೂರಿನಲ್ಲಿ ನಡೆದ ದಸರಾ ಖಾಸಗಿ ದರ್ಬಾರ್ನ ಝಲಕ್. ಇವತ್ತಿನಿಂದ ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಆರಂಭವಾಗಿದೆ. ಹಿಂದೆ ರಾಜ ಮಹಾರಾಜರು ನಡೆಸುತ್ತಿದ್ದ ದರ್ಬಾರು ಮಾದರಿಯಲ್ಲೇ ಇಂದಿಗೂ ದಸರೆಯ ಸಂದರ್ಭದಲ್ಲಿ ಸಂಪ್ರದಾಯ ಬದ್ಧವಾಗಿ ಖಾಸಗಿ ದರ್ಬಾರ್ ನಡೆಸಲಾಗುತ್ತದೆ. ಅದರಂತೆ ಈ ಬಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಿದರು.
ರಾಜಾ ಪೋಷಾಕು ಧರಿಸಿದ ಯದುವೀರ್ ದರ್ಬಾರ್ ಹಾಲ್ ಪ್ರವೇಶಿಸುತ್ತಿದ್ದಂತೆ, ವಂಧಿ ಮಾಗಧರು ಬಹು ಪರಾಕ್ ಕೂಗಿದರು. ಸಿಂಹಾಸನದ ಬಳಿ ತೆರಳಿದ ಯದುವೀರ್, ಸಿಂಹಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು. ಬಳಿಕ ಸಿಂಹಾಸನದ ಪಕ್ಕದಲ್ಲೇ ಕುಳಿತು ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದರು.
ಇದಾದ ನಂತರ ಅವರು ಸಿಂಹಾಸನಾರೂಢರಾದರು.ಇದೇ ವೇಳೆ ಪತ್ನಿ ತ್ರಿಷಿಕಾಕುಮಾರಿ ಯದುವೀರ ಪಾದಪೂಜೆ ಮಾಡಿದರು. ಪತ್ನಿ ಬಳಿಕ ದಿವಾನರು ಸಿಂಹಾಸನದ ಮುಂದೆ ನಿಂತು ನಡುಬಾಗಿ ವಂದಿಸಿದರು. ನಂತರ ಅರಮನೆಯ ದೇವಸ್ಥಾನಗಳು, ಚಾಮುಂಡಿಬೆಟ್ಟ, ಉತ್ತನಹಳ್ಳಿ ಬೆಟ್ಟ ಸೇರಿದಂತೆ ಹಲವು ದೇವಸ್ಥಾನಗಳಿಂದ ತಂದಿದ್ದ ಪ್ರಸಾದವನ್ನು ಒಡೆಯರ್ಗೆ ನೀಡಲಾಯ್ತು. ಎಲ್ಲ ಪ್ರಸಾದವನ್ನು ಶ್ರದ್ದಾ ಭಕ್ತಿಯಿಂದ ಯದುವೀರ್ ಸ್ವೀಕರಿಸಿದ್ರು.
ನಂತರ ಮೈಸೂರು ರಾಜ್ಯ ಗೀತೆಯನ್ನು ನುಡಿಸಲಾಯ್ತು. ಈ ವೇಳೆ ರತ್ನ ಖಚಿತ ಸಿಂಹಾಸನದ ಮೇಲೆ ನಿಂತ ಯದುವೀರ್, ಸೆಲ್ಯೂಟ್ ಮಾಡಿ ರಾಜ್ಯ ಗೀತೆಗೆ ಗೌರವ ಸಲ್ಲಿಸಿದರು. ರಾಜ್ಯ ಗೀತೆ ಮುಗಿದ ನಂತರ ಸಿಂಹಾಸನದಿಂದ ಇಳಿದು ಖಾಸಗಿ ದರ್ಬಾರನ್ನು ಮುಕ್ತಾಯಗೊಳಿಸಿದರು.
ಇನ್ನು ಯದುವೀರ್ ಅವರು ಖಾಸಗಿ ದರ್ಬಾರ್ ನಡೆಸುವ ಮುನ್ನ ಅರಮನೆಯಲ್ಲಿ ಬೆಳಗಿನ ಜಾವದಿಂದಲೇ ಪೂಜಾ ವಿಧಿ ವಿಧಾನಗಳು ಜರುಗಿದವು. ಮಂಗಳ ಸ್ನಾನ ನೆರವೇರಿಸಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಯದುವೀರ್ ಕಂಕಣ ಕಟ್ಟಿಕೊಂಡರು. ಈ ವೇಳೆ ಅರಮನೆಯ ಕೊಡಿ ಸೋಮೇಶ್ವರ ದೇವಾಲಯದಿಂದ ಪಟ್ಟದ ಆನೆ, ಹಸು, ಕುದುರೆ, ಜೊತೆ ಆಗಮಿಸಿದ ಮುತ್ತೈದೆಯರು ಕಳಸ ತೆಗೆದುಕೊಂಡು ಸಾಗಿದರು.
ಸುಮಾರು 1 ಗಂಟೆಗಳ ಕಾಲ ಮೈಸೂರು ಅರಮನೆಯಲ್ಲಿ ಗತಕಾಲದ ವೈಭವ ಮರುಕಳಿಸಿತ್ತು. ಆದ್ರೆ, ಖಾಸಗಿ ಕಾರ್ಯಕ್ರಮವಾದ್ದರಿಂದ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧ ಮಾಡಲಾಗಿತ್ತು. ಒಟ್ಟಾರೆ ಮೈಸೂರು ಅರಮನೆಯಲ್ಲಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದ್ದು, ಈ ಮೂಲಕ ದಸರಾ ದರ್ಬಾರ್ ಆರಂಭವಾಗಿದೆ.