ಕಡಬ :ಕಾಡಾನೆ ಕಾರ್ಯಾಚರಣೆ ವೇಳೆ ವಾಗ್ವಾದ - ಅರಣ್ಯ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲುತೂರಾಟ!
ದಕ್ಷಿಣ ಕನ್ನಡ(ಫೆ.24): ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮೀನಾಡಿಯಲ್ಲಿ ಕಾಡಾನೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಡಾನೆ ಪತ್ತೆ ಕಾರ್ಯಾಚರಣೆ ಮಧ್ಯೆಯೇ ಅರಣ್ಯ ಇಲಾಖೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆದ ಘಟನೆ ನಡೆದಿದೆ. ಕಾಡಾನೆ ಪತ್ತೆ ಕಾರ್ಯಾಚರಣೆಯಲ್ಲಿದ್ದ ಅರಣ್ಯಾಧಿಕಾರಿಗಳು, ಪೋಲೀಸರ ಮೇಲೆ ಗ್ರಾಮಸ್ಥರು ಹಲ್ಲೆಗೆ ಯತ್ನ ನಡೆಸಿದ್ದಾರೆ. ಅರಣ್ಯ ಮತ್ತು ಪೊಲೀಸ್ ಇಲಾಖೆಯ ವಾಹನಗಳಿಗೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದಾರೆ. ಒಂದು ಆನೆಯನ್ನಷ್ಟೇ ಹಿಡಿದಿದ್ದೀರೀ ಎಂದು ಆರೋಪಿಸಿ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ.
ಕಾರ್ಯಾಚರಣೆ ನಿಲ್ಲಿಸಿಲ್ಲ, ನಾಳೆ ಬರುತ್ತೇವೆ ಅಂತ ಅರಣ್ಯ ಮತ್ತು ಪೊಲೀಸರು ಹೇಳಿದರೂ ಕೇಳದೇ ಕಲ್ಲು ತೂರಾಟ ನಡೆಸಲಾಗಿದೆ.ಕಲ್ಲು ತೂರಾಟದಿಂದ ಎರಡು ಪೊಲೀಸ್ ಜೀಪ್, ಅರಣ್ಯ ಇಲಾಖೆಯ ಒಂದು ಜೀಪ್, ರೇಂಜರ್ ಒಬ್ಬರ ಬ್ರೀಝಾ ಗಾಡಿಗಳು ಜಖಂಗೊಂಡಿವೆ. ಡಿವೈಎಸ್ಪಿ ಸೇರಿ ಅರಣ್ಯ ಇಲಾಖೆಗೆ ಸೇರಿದ ವಾಹನಗಳ ಗಾಜು ಪುಡಿ ಪುಡಿಯಾಗಿವೆ. 3 ದಿನಗಳ ಕಾರ್ಯಾಚರಣೆಯಲ್ಲಿ ಒಂಟಿ ಸಲಗ ಸೆರೆಯಾಗಿದೆ. ಕಾಡಾನೆ ಸೆರೆಹಿಡಿಯಲು ಅರಣ್ಯ ಇಲಾಖೆ ಆಪರೇಷನ್ ಎಲಿಫೆಂಟ್ ಆರಂಭಿಸಿತ್ತು. 5 ಸಾಕಾನೆಗಳಿಂದ, ನುರಿತ ತಜ್ಞ ವೈದ್ಯರು, ಅರಣ್ಯ ಅಧಿಕಾರಿಗಳು, ಶಾರ್ಪ್ ಶೂಟರ್ ಗಳಿಂದ ಕಾರ್ಯಾಚರಣೆ ಆರಂಭವಾಗಿತ್ತು.
ಕಡಬದ ಕೊಂಬಾರು ಎಂಬಲ್ಲಿನ ಮಂಡೆಕರ ಪ್ರದೇಶದ ದಟ್ಟಾರಣ್ಯದಲ್ಲಿ ಒಂದು ಕಾಡಾನೆ ಸೆರೆಯಾಗಿತ್ತು. ಸಫೆ.20 ರ ಬೆಳಿಗ್ಗೆ ಹಾಲು ಸೊಸೈಟಿಗೆ ಹೋಗುತಿದ್ದ ರಂಜಿತಾ (21) ಮತ್ತು ರಮೇಶ್ ರೈ (52 ) ಕಾಡಾನೆ ದಾಳಿಗೆ ಬಲಿಯಾಗಿದ್ದರು. ಆದರೆ ಅರಣ್ಯ ಪ್ರದೇಶದಲ್ಲಿ ಇನ್ನಷ್ಟು ಕಾಡಾನೆಗಳು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಉಳಿದ ಕಾಡಾನೆ ಸೆರೆಗೆ ಆಗ್ರಹಿಸಿ ಅರಣ್ಯ ಇಲಾಖೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.