ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು: 16 ಶಿಕ್ಷಕರು ಸೇವೆಯಿಂದ ಅಮಾನತು
ಕಲಬುರಗಿ (ಏ.06): ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲಿಗೆ ಸಹಕರಿಸಿರುವ ಗುರುತರ ಆರೋಪದ ಮೇಲೆ ಕಲಬುರಗಿಯಲ್ಲಿರುವ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಾಧಿಕಾರಿಗಳು ಆಗಿರುವ ಆನಂದ ಪ್ರಕಾಶ ಮೀನಾ ಅವರು ಅಫಲಜ್ಪುರ ತಾಲೂಕಿನ ಗೊಬ್ಬೂರ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಅಧೀಕ್ಷಕರು, ಕಸ್ಟೋಡಿಯನ್, ಜಾಗೃತ ದಳ, ಕೋಣೆ ಮೇಲ್ವಿಚಾರಕರು ಸೇರಿದಂತೆ 16 ಜನ ಶಿಕ್ಷಕರನ್ನು ಸೇವೆಯಿಂದ ಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಫಜಲ್ಪುರ ತಾಲೂಕಿನ ಗೊಬ್ಬೂರ (ಬಿ) ಸರ್ಕಾರಿ ಪ್ರೌಢ ಶಾಲೆಯಲ್ಲಿ ಏ.3ರಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಅವಕಾಶ ಮಾಡಿಕೊಟ್ಟು ಪರೀಕ್ಷೆಯ ಪಾವಿತ್ರ್ಯತೆಯನ್ನೇ ವಿಫಲಗೊಳಿಸಿ, ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ಕರ್ನಾಟಕ ಸೇವಾ ನಿಯಮಾವಳಿ (ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) 1957ರ ನಿಯಮ 10 (1) (ಡಿ) ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಸದರಿ ಪರೀಕ್ಷಾ ಕೇಂದ್ರದಲ್ಲಿ ವಿವಿಧ ಹಂತಗಳಲ್ಲಿ ಕರ್ತ ವ್ಯದ ಮೇಲಿದ್ದಂತಹ ಈ ಕೆಳಗಿನ 16 ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಿದ್ದಾಗಿ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಆನಂದ ಮೀನಾ ಸ್ಪಷ್ಟಪಡಿಸಿದ್ದಾರೆ.
ಈ ಕೆಳಗಿನ 16 ಶಿಕ್ಷಕರು ಸೇವೆಯಿಂದ ಅಮಾನತುಗೊಂಡವರು: ಗೊಬ್ಬೂರ ಶಾಲೆಯ ಮುಖ್ಯಗುರು ಗೊಲ್ಲಾಳಪ್ಪ, ಶಿಕ್ಷಕ/ ಕಸ್ಟೋಡಿಯನ್ ಭೀಮಾಶಂಕರ ಹಾಗೂ ಅರುಣ ಕುಮಾರ್, ಬಿದನೂರ ಶಾಲಾ ಶಿಕ್ಷಕ ರವೀಂದ್ರ, ಬಂದರವಾಡ ಸರ್ಕಾರಿ ಶಾಲಾ ಶಿಕ್ಷಕರಾದ ದೇವೀಂದ್ರಪ್ಪ ಯರಗಲ್, ಸವಿತಾಬಾಯಿ ಜಮಾದಾರ್, ಕೋಗನೂರು ಮೋರಾರ್ಜಿ ವಸತಿ ಶಾಲೆಯ ಶಿಕ್ಷಕರಾದ ಅನಿತಾ, ನಾಗಮ್ಮ, ರೇವಣಸಿದ್ದಪ್ಪ, ಚೌಡಾಪೂರ ಕಿತ್ತೂರರಾಣಿ ಚೆನ್ನಮ್ಮ ಶಾಲೆ ಶಿಕ್ಷಕಿ ಪರ್ವಿನ್ ಸುಲ್ತಾನಾ, ಹವನೂರು ಶಾಲಾ ಶಿಕ್ಷಕ ಬಾಬೂ ಪವಾರ್, ಹಸರಗುಂಡಗಿ ಶಾಲೆಯ ಕವಿತಾ ಡಿ, ಗಾಯತ್ರಿ ಬಿರಾದಾರ್, ಬಿದನೂರ್ ಮಾಧ್ಯಮಿಕ ಶಾಲೆಯ ಜಯಶ್ರೀ ಶೇರಿ, ವಿದ್ಯಾವತಿ, ಮೀನಾಕ್ಷಿ ದುಧನಿಕರ್. ಇವರೆಲ್ಲರನ್ನು ಸೇವೆಯಿಂದ ಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೇಂದ್ರದ ಕಿಟಕಿಗಳಲ್ಲೆಲ್ಲಾ ಮೈಕ್ರೋ ಝಿರಾಕ್ಸ್, ಗೈಡ್, ಪುಸ್ತಕಗಳ ರಾಶಿ: ಗೊಬ್ಬೂರ (ಬಿ) ಪರೀಕ್ಷಾ ಕೇಂದ್ರದಲ್ಲಿನ ಬಂದೋಬಸ್ತ್ ಇತ್ಯಾದಿ ವ್ಯವಸ್ಥೆ ಪರಿಶೀಲನೆಗೆ ಜಿಲ್ಲಾ ಎಸ್ಪಿ ಇಶಾ ಪಂತ್ ತೆರಳಿದ್ದ ಸಂದರ್ಭದಲ್ಲಿ ನಿಷೇಧಾಜ್ಞೆ ಇದ್ದರೂ ಸಾಕಷ್ಟುಜನ ಪರೀಕ್ಷಾ ಕೇಂದ್ರದ ಸುತ್ತಮುತ್ತ ಎಂದಿನಂತೆ ಓಡಾಡಿಕೊಂಡಿದ್ದದ್ದನ್ನು ಗಮನಿಸಿ ತಕ್ಷಣವೇ ಪರೀಕ್ಷಾ ಕೇಂದ್ರದ ಉಸ್ತುವಾರಿ ಹೊಣೆ ಹೊತ್ತವರಿಗೆ ಕರೆದು ಎಚ್ಚರಿಕೆ ಸಹ ನೀಡಿದ್ದಲ್ಲದೆ ನಿಷೇಧಾಜ್ಞೆ ಉಲ್ಲಂಘಿಸಿದ ಹಲವರನ್ನು ವಶಕ್ಕೂ ಪಡೆದಿದ್ದರು. ಇದಾದ ನಂರ ಪರೀಕ್ಷಾ ಕೇಂದ್ರದ ಸುತ್ತಮುತ್ತ ಝಿರಾಕ್ಸ್ ಬುಕ್ಗಳು, ಮೈಕ್ರೋ ಝಿರಾಕ್ಸ್ ಚಿಟ್ಟಿಗಳು ರಾಶಿರಾಶಿ ಕಂಡು ಬಂದಾಗ ಕೇಂದ್ರದೊಳಗೆ ಸಾಮೂಹಿಕ ನಕಲು ನಡೆದಿರೋದು ಗೊತ್ತಾಗಿ ಸಂಪೂರ್ಣ ಪರೀಶೀಲನೆ ನಡಡೆಸಿ ಲಭ್ಯ ಸಾಕ್ಷ್ಯಗಳ ಸಮೇತ ಜಿಲ್ಲಾ ಮಟ್ಟದ ಸಾಲಾ ಆಯುಕ್ತರಿಗೆ ವರದಿ ಮಾಡಿ ಗಮನ ಸೆಳೆದಿದ್ದರು.
ಸದರಿ ವರದಿ ಆಧರಿಸಿ ಆಯುಕ್ತರು ಅಫಜಲ್ಪುರ ಬಿಇಓ ಇವರಂದ ವಿಸ್ತೃತ ವರದಿ ಕೇಳಿದಾಗ ಬಿಇಓ ಅವರೂ ಸಹ ಸಾಮೂಹಿಕ ನಕಲು ನಡೆದಿರೋದಕ್ಕೆ ಹಲವು ಸಾಕ್ಷ್ಯಗಳಿರೋದನ್ನ ಪತ್ತೆಹಚ್ಚಿ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಜಿಲ್ಲಾ ಎಸ್ಪಿ ಇಶಾ ಪಂತ್ ಹಾಗೂ ಅಫಜಲ್ಪುರ ಬಿಇಓ ಮಾರುತಿ ಹುಜುರಾತಿ ವರ ವರದಿಗಳನ್ನು ಆಧರಿಸಿ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರಾದ ಆನಂದ ಪ್ರಕಾಶ ಮೀನಾ ಪರೀಕ್ಷಾ ಕೇಂದ್ರದ ಕರ್ತವ್ಯದ ಮೇಲಿದ್ದಂತಹ ಪರೀಕ್ಷಾ ಅಧೀಕ್ಷಕರು, ಕಸ್ಟೋಡಿಯನ್, ಜಾಗೃತ ದಳ, ಮೇಲ್ವಿಚಚಾರಕರು ಸೇರಿದಂತೆ 16 ಜನ ಶಿಕ್ಷಕರನ್ನು ಅನಾಮತು ಮಾಡಿ ಖಡಕ್ ಕ್ರಮ ಜರುಗಿಸಿದ್ದಾರೆ.