ಮುಸ್ಲಿಂ ಮಹಿಳೆಯರೊಂದಿಗೂ ರಕ್ಷಾ ಬಂಧನವನ್ನು ಆಚರಿಸಿ: ಬಿಜೆಪಿ ನಾಯಕರಿಗೆ ಮೋದಿ ಕರೆ
ನವದೆಹಲಿ: ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ತಮ್ಮ ಸರ್ಕಾರದ ನಿರ್ಧಾರ ಮುಸ್ಲಿಂ ಮಹಿಳೆಯರಿಗೆ (Muslim Women) ಸುರಕ್ಷತಾ ಭಾವನೆಯನ್ನು ಹೆಚ್ಚಿಸಿದೆ. ಮುಂಬರುವ ರಕ್ಷಾ ಬಂಧನ (Raksha Bandhan) ಹಬ್ಬವನ್ನು ಮುಸ್ಲಿಂ ಮಹಿಳೆಯರೊಂದಿಗೂ ರಕ್ಷಾ-ಬಂಧನ ಆಚರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಿಜೆಪಿ ನಾಯಕರಿಗೆ ಕರೆ ನೀಡಿದ್ದಾರೆ.
2024ರ ಲೋಕಸಭಾ ಚುನಾವಣೆ ಹಿನ್ನೆಲೆ ಸೋಮವಾರ ರಾತ್ರಿ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ನ ಬಿಜೆಪಿ ನೇತೃತ್ವದ ಎನ್ಡಿಎ ಸಂಸದರ ಸಭೆಯನ್ನು ನಡೆಸಿದ್ದು, ಈ ವೇಳೆ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಸಮಾಜದ ಪ್ರತಿಯೊಂದು ವರ್ಗದವರೊಂದಿಗೆ ಸಂಪರ್ಕ ಸಾಧಿಸುವುದು ಅತ್ಯಗತ್ಯ. ಮುಸ್ಲಿಂ ಪುರುಷರು ತಮ್ಮ ಪತ್ನಿಯರಿಗೆ ತ್ವರಿತವಾಗಿ ನೀಡುವ ವಿಚ್ಛೇದನದ ಪದ್ಧತಿಯನ್ನು ಈ ಸರ್ಕಾರ ಅಪರಾಧ ಎಂದು ಪರಿಗಣಿಸಿದೆ. ಈ ನಿರ್ಧಾರ ಮುಸ್ಲಿಂ ಮಹಿಳೆಯರಲ್ಲಿ ಹೆಚ್ಚಿನ ಧೈರ್ಯ ತುಂಬಿದೆ. ಈ ಬಾರಿಯ ರಕ್ಷಾ ಬಂಧನದ ಸಮಯದಲ್ಲಿ ಈ ಅಲ್ಪಸಂಖ್ಯಾತ ಮಹಿಳೆಯರನ್ನು ತಲುಪುವ ಕೆಲಸ ಆಗಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಕೆಲ ಸಂಸದರಿಗೆ ಸೂಚನೆ ನೀಡಿದ್ದಾರೆ
2019 ರಲ್ಲಿ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಮುಸ್ಲಿಮರ ತ್ರಿವಳಿ ತಲಾಖ್ ಅಭ್ಯಾಸವನ್ನು ಕಾನೂನು ಬಾಹಿರ ಹಾಗೂ ಪತಿಗೆ ಜೈಲು ಶಿಕ್ಷೆ ವಿಧಿಸುವ ಅಪರಾಧ ಎಂದು ಘೋಷಿಸಿದೆ.
ರಕ್ಷಾ ಬಂಧನ ಹಬ್ಬ ಸಹೋದರ – ಸಹೋದರಿಯರ ನಡುವಿನ ಬಾಂಧವ್ಯದ ಆಚರಣೆಯಾಗಿದೆ. ಈ ಬಾರಿ ಹಬ್ಬ ಆಗಸ್ಟ್ 30 ರಂದು ಬರಲಿದೆ.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಗೆ ಟೆಂಡರ್: ಪ್ರಮೋದ್ ಮುತಾಲಿಕ್ ಕಿಡಿ
ಬೆಂಗಳೂರು: ಅಯೋಧ್ಯೆ (Ayodhya) ರಾಮಮಂದಿರ (Ram Mandir) ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಸ್ಲಿಮರಿಗೆ ಟೆಂಡರ್ ನೀಡಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಗೆ ಆದ್ಯತೆ ನೀಡಲಾಗಿದೆ. ಅಯೋಧ್ಯೆ ರಾಮಮಂದಿರ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಮುಸ್ಲಿಮರಿಗೆ ಟೆಂಡರ್ ನೀಡಲಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಅನೇಕ ವರ್ಷಗಳ ಬಳಿಕ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ. ಇದಕ್ಕೆ ತೊಡಕಾಗಿದ್ದು ಮುಸ್ಲಿಮರು. ಕೋರ್ಟ್ ಆದೇಶದ ಬಳಿಕವೂ ನಾವು ಅಲ್ಲೇ ಮಸೀದಿ ನಿರ್ಮಾಣ ಮಾಡ್ತೀವಿ ಅಂತ ಹೇಳ್ತಾರೆ. ಈ ರೀತಿ ಇರಬೇಕಾದ್ರೆ ಮುಸ್ಲಿಮರಿಗೆ ಈಗ ಕಟ್ಟಡ ನಿರ್ಮಾಣದ ಟೆಂಡರ್ ನೀಡಲಾಗಿದೆ. ಕೇಂದ್ರ ಸರ್ಕಾರ ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಗೆ ಟೆಂಡರ್ ನೀಡಿರುವುದು ಖಂಡನೀಯ ಎಂದರು.
ರಾಜಸ್ತಾನ ಮೂಲದ ಕಂಪನಿಯ ಇಕ್ಬಾಲ್ ಮಿಸ್ತ್ರಿ ಎಂಬಾತನಿಂದ ಕೆಲಸ ನಡೆಯುತ್ತಿದೆ. ಗರ್ಭಗುಡಿ ನಿರ್ಮಾಣದ ಟೆಂಡರ್ ಈತನಿಗೆ ನೀಡಲಾಗಿದೆ. ಇದರಿಂದ 100 ಕೋಟಿ ಹಿಂದೂಗಳಿಗೆ ಅವಮಾನ ಆಗಿದೆ. ಟ್ರಸ್ಟಿಗಳಲ್ಲಿ ಒಬ್ಬರಾದ ಪೇಜಾವರ ಶ್ರೀಗಳಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಅಲ್ಲಿರುವಂತಹ ಮುಸ್ಲಿಂ ಕೆಲಸಗಾರರನ್ನು ಹೊರಹಾಕಬೇಕು. ಅಲ್ಲಾ ಒಬ್ಬನೆ ದೇವರು ಅನ್ನುವವನಿಗೆ ರಾಮನ ಗುಡಿ ನಿರ್ಮಾಣಕ್ಕೆ ಅವಕಾಶ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದರು.
ಗೋಮಾಂಸ ಭಕ್ಷಕರು, ದೇವರನ್ನ ನಂಬದವರಿಗೆ ಹೇಗೆ ಗುತ್ತಿಗೆ ಕೊಟ್ಟಿದ್ದೀರಿ. ಅವರನ್ನ ಕೂಡಲೇ ವಾಪಸ್ ಕಳಿಸಬೇಕು. ಅವರು ವಾಪಸ್ ಆದ ಬಳಿಕ ನಾವು ಅಲ್ಲಿಗೆ ಹೋಗಿ ಶುದ್ದಿ ಮಾಡ್ತೇವೆ. ಈ ಬಗ್ಗೆ ಶ್ರೀಗಳಿಗೆ ಮನವಿ ಮಾಡಲಾಗಿದೆ. ಕೂಡಲೇ ಅಲ್ಲಿರುವ ಗುತ್ತಿಗೆದಾರ ಮುಸ್ಲಿಮರನ್ನ ಹೊರ ಹಾಕಬೇಕು. ಇದು ಇಡೀ ವಿಶ್ವಕರ್ಮ ಸಮಾಜಕ್ಕೆ ಅಪಮಾನ ಮಾಡಿದ ಹಾಗೆ ಎಂದು ತಿಳಿಸಿದರು.
ಒಂದು ವೇಳೆ ಟೆಂಡರ್ ರದ್ದಾಗದಿದ್ರೆ ಆದೋಲನ ಶುರುವಾಗುತ್ತೆ. ಈಗಾಗಲೇ ಈ ಬಗ್ಗೆ 12 ರಾಜ್ಯಗಳ ಜೊತೆ ಚರ್ಚಿಸಿದ್ದೇವೆ. 12 ರಾಜ್ಯದವರು ನಮಗೆ ಬೆಂಬಲ ಸೂಚಿಸಿದ್ದಾರೆ. ಟೆಂಡರ್ ರದ್ದು ಮಾಡದಿದ್ರೆ ರಾಮಮಂದಿರ ಉದ್ಘಾಟನೆ ಆಗಲು ಬಿಡಲ್ಲ ಎಚ್ಚರಿಸಿದರು.