- ಸಿನೆಮಾ
- 2:20 ಅಪರಾಹ್ನ
- ನವೆಂಬರ್ 11, 2023
ಹಿರಿಯ ನಟ ಚಂದ್ರ ಮೋಹನ್ ಹೃದಯಘಾತದಿಂದ ನಿಧನ!

ಹಿರಿಯ ನಟ ಚಂದ್ರ ಮೋಹನ್ (Chandra Mohan) ಇಂದು (ನವೆಂಬರ್11) ಕೊನೆಯುಸಿರೆಳೆದಿದ್ದಾರೆ. ಅವರು ಹೃದಯಾಘಾತದಿಂದ ಹೈದರಾಬಾದ್ (Hyderabad) ಅಪೋಲೋ ಆಸ್ಪತ್ರೆಯಲ್ಲಿ ಬೆಳಿಗ್ಗೆ 9.45 ಕ್ಕೆ ನಿಧನರಾದರು. ಅವರಿಗೆ 82 ವರ್ಷ. ಅವರು ಪತ್ನಿ ಜಲಂಧರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಚಂದ್ರಮೋಹನ್ ಅವರ ಅಂತ್ಯಕ್ರಿಯೆ ಸೋಮವಾರ ಹೈದರಾಬಾದ್ನಲ್ಲಿ ನಡೆಯಲಿದೆ. ಚಂದ್ರ ಮೋಹನ್ ಸಿನಿಮಾ (Cinema) ಜೀವನದಲ್ಲಿ ಮಾಡದ ಪಾತ್ರವಿಲ್ಲ. ಒಮ್ಮೆ ಹೀರೋ, ಆಮೇಲೆ ಕಾಮಿಡಿ ಹೀರೋ, ಅಪ್ಪ, ಅಣ್ಣ, ಚಿಕ್ಕಪ್ಪ ಎಲ್ಲ ಪಾತ್ರಗಳನ್ನೂ ಮಾಡಿದ್ದಾರೆ. ರಂಗುಲ ರತ್ನಂ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಚಂದ್ರಮೋಹನ್ ಅವರು ತಮ್ಮ ಮೊದಲ ಚಿತ್ರದಲ್ಲೇ ಅತ್ಯುತ್ತಮ ನಟನಾಗಿ ನಂದಿ ಪ್ರಶಸ್ತಿ ಪಡೆದರು. ಬಿ.ಎನ್. ರೆಡ್ಡಿ ನಿರ್ದೇಶನದ ಈ ಚಿತ್ರ ಚಂದ್ರಮೋಹನ್ ಅವರಿಗೆ ನಟನಾಗಿ ಒಳ್ಳೆಯ ಹೆಸರು ತಂದುಕೊಟ್ಟಿತು.
ಚಂದ್ರಮೋಹನ್ ಜೊತೆ ನಟಿಸಿದ ನಂತರ ಶ್ರೀದೇವಿ, ಜಯಪ್ರದಾ, ಜಯಸುಧಾ, ರಾಧಿಕಾ, ರಾಧಾ, ವಿಜಯಶಾಂತಿ ಮುಂತಾದ ಹಲವು ನಾಯಕಿಯರು ಸ್ಟಾರ್ ಆದರು. ತೆಲುಗು ಸಿನಿಮಾಗಳಲ್ಲಿ ತಮ್ಮ ವಿಶಿಷ್ಟ ನಟನೆಯಿಂದ ಪ್ರಭಾವಿತರಾದ ಚಂದ್ರ ಮೋಹನ್ ಅವರ ನಿಜವಾದ ಹೆಸರು ಮಲ್ಲಂಪಲ್ಲಿ ಚಂದ್ರಶೇಖರ ರಾವ್. ಒಬ್ಬ ನಟನಾಗಿ ಚಂದ್ರ ಮೋಹನ್ ಒಂದು ಸ್ಟೀರಿಯೊಟೈಪ್ಗೆ ಸೀಮಿತವಾಗಿಲ್ಲ. ನಾಯಕನಾಗಿ, ಖಳನಾಯಕನಾಗಿ, ಹಾಸ್ಯನಟನಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ತಮ್ಮದೇ ಶೈಲಿಯಲ್ಲಿ ಮಿಂಚಿದ್ದರು.
ಚಂದ್ರಮೋಹನ್ ಅವರು ಮೇ 23, 1945 ರಂದು ಕೃಷ್ಣಾ ಜಿಲ್ಲೆಯಲ್ಲಿ ಜನಿಸಿದರು. ಬಾಪಟ್ಲ ಕೃಷಿ ಕಾಲೇಜಿನಲ್ಲಿ ಪದವಿ ಪಡೆದರು. ಇವರು ಖ್ಯಾತ ನಿರ್ದೇಶಕ ಕೆ ವಿಶ್ವನಾಥ್ ಅವರ ಸೋದರ ಸಂಬಂಧಿಯಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನ ‘ಸಿರಿಸಿರಿ ಮುವ್ವ’ ಸೂಪರ್ ಡೂಪರ್ ಹಿಟ್ ಆಗಿತ್ತು. ಆರಂಭದ ದಿನಗಳಲ್ಲಿ ಸೀರಿಯಸ್ ಹೀರೋ ಆಗಿ ನಟಿಸಿದ್ದ ಚಂದ್ರಮೋಹನ್ ನಂತರ ದಿಕ್ಕು ಬದಲಿಸಿದರು. ಅವರಲ್ಲಿರುವ ಹಾಸ್ಯ ‘ಬಂಗಾರು ಪಿಚುಕ’ದಂತಹ ಸಿನಿಮಾಗಳಿಂದ ಹೈಲೈಟ್ ಆಯಿತು.
ಸಿನಿಮಾದಲ್ಲಿ ಅವರದು ಹೀರೋ ಪಾತ್ರವೇ, ಬೇರೆ ಪಾತ್ರವೇ ಎನ್ನುವ ಬಗ್ಗೆ ಚಂದ್ರಮೋಹನ್ ತಲೆಕೆಡಿಸಿಕೊಳ್ಳಲಿಲ್ಲ. ಪಾತ್ರಕ್ಕೆ ತಕ್ಕ ನ್ಯಾಯ ಮಾಡುವ ಸಿದ್ಧಾಂತವನ್ನು ಅವರು ಕಟ್ಟುನಿಟ್ಟಾಗಿ ಪಾಲಿಸಿದರು.
ಸಿನಿಮಾಗಳ ಮೂಲಕ ಕಾಮಿಡಿ ಹೀರೋ ಆಗಿ ತಮ್ಮ ಪ್ರತಿಭೆಯನ್ನು ತೋರಿಸಿದ್ದರು. ಚಂದ್ರಮೋಹನ್ ಅವರು ‘ಅಲ್ಲುಡು ಗಾರು’ ಚಿತ್ರದ ಮೂಲಕ ಫುಲ್ ಟೈಮ್ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬಿಜಿಯಾದರು.