ಉಕ್ರೇನ್ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ; 17 ಮಂದಿ ಮೃತ್ಯು!
ಉಕ್ರೇನ್(Ukraine)ನನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬೇಕು ಎಂದು ರಷ್ಯಾ ಹೊಂಚು ಹಾಕಿ ಕುಳಿತಿದೆ, ಕಳೆದ ವರ್ಷ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಆರಂಭವಾಗಿತ್ತು. ಸಾಕಷ್ಟು ಪ್ರದೇಶಗಳನ್ನು ರಷ್ಯಾ ವಶಪಡಿಸಿಕೊಂಡಿತ್ತು. ಆದರೆ ಸಂಪೂರ್ಣವಾಗಿ ವಶಪಡಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಆದರೆ ಆಗಾಗ ದಾಳಿ ನಡೆಸುತ್ತಲೇ ಇದೆ. ಪೂರ್ವ ಉಕ್ರೇನ್ನ ಕೋಸ್ಟಿಯಾಂಟಿನಿವ್ಕಾ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆದಿದೆ, ಘಟನೆಯಲ್ಲಿ 17 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಈ ಮಾಹಿತಿಯನ್ನು ನೀಡಿದ್ದಾರೆ.
ದಾಳಿಯನ್ನು ಹೇಗೆ ನಡೆಸಲಾಯಿತು ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ ಆದರೆ ಕೊಸ್ಟಿಯಾಂಟಿನಿವ್ಕಾ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಉಕ್ರೇನ್ನ ಕೋಸ್ಟಿಯಾಂಟಿನಿವ್ಕಾ ನಗರವು ಯುದ್ಧಭೂಮಿಗೆ ಬಹಳ ಹತ್ತಿರದಲ್ಲಿದೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದಾಳಿಯನ್ನು ಖಂಡಿಸಿದ್ದಾರೆ. ಈ ದಾಳಿಯಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಪ್ರಾಣ ಕಳೆದುಕೊಂಡವರಲ್ಲಿ ಮಕ್ಕಳೂ ಸೇರಿದ್ದಾರೆ. ರಷ್ಯಾದ ದಾಳಿಯಿಂದಾಗಿ ನಗರದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ರಷ್ಯಾದ ದಾಳಿಯಲ್ಲಿ ನಗರದ ಮಾರುಕಟ್ಟೆ, ಅಂಗಡಿಗಳು ಮತ್ತು ಔಷಧಿ ಅಂಗಡಿಗೆ ಹಾನಿಯಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ತಿಳಿಸಿದ್ದಾರೆ. ಅಮೆರಿಕದ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಕೀವ್ಗೆ ತಲುಪಿರುವ ಸಮಯದಲ್ಲಿ ರಷ್ಯಾ ಈ ದಾಳಿ ಮಾಡಿದೆ.
ಹಲವು ತಿಂಗಳುಗಳಲ್ಲಿ ನಡೆಸಲಾದ ಅತ್ಯಂತ ಅಪಾಯಕಾರಿ ದಾಳಿ ಇದಾಗಿದೆ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಸ್ಮಿಹಾಲ್ ಹೇಳಿದ್ದಾರೆ. ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ರಷ್ಯಾದ ಸೈನಿಕರನ್ನು ಭಯೋತ್ಪಾದಕರಿಗೆ ಹೋಲಿಸಿ ತಕ್ಕ ಉತ್ತರ ನೀಡಲಾಗುವುದು ಎಂದು ಹೇಳಿದರು.
ಎಸ್-300 ಕ್ಷಿಪಣಿ ಮೂಲಕ ರಷ್ಯಾ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ನಗರದ ಹೃದಯ ಭಾಗದಲ್ಲಿ ಈ ದಾಳಿ ನಡೆದಿದೆ. ದಾಳಿ ನಡೆದ ಮಾರುಕಟ್ಟೆಯು ಶಾಪಿಂಗ್ ಸೆಂಟರ್ಗೆ ಸಮೀಪದಲ್ಲಿದೆ. ಕೋಸ್ಟಿಯಾಂಟಿನಿವ್ಕಾ ಪಟ್ಟಣದ ಹತ್ತಿರದಲ್ಲಿದೆ.
ಊಟದ ತಟ್ಟೆ ಗಾತ್ರದ ಉಪಕರಣ ಹೆರಿಗೆ ವೇಳೆ ಮಹಿಳೆಯ ಹೊಟ್ಟೆ ಸೇರಿತ್ತು! 18 ತಿಂಗಳ ಬಳಿಕ ಹೊರ ತೆಗೆದರು
ನ್ಯೂಜಿಲೆಂಡ್, ಸೆಪ್ಟೆಂಬರ್ 6: ಆಪರೇಷನ್ ಮಾಡುವಾಗ ವೈದ್ಯರು ಹೊಟ್ಟೆಯಲ್ಲಿ (Stomach) ಹತ್ತಿ, ಕತ್ತರಿ ಮರೆತು ಹೋಗುತ್ತಾರೆ ಎಂದು ನಾವು ಮರೆಯಲಾರದಷ್ಟು ಬಾರಿ ಕೇಳಿದ್ದೇವೆ. ಇಲ್ಲೊಂದು ತಾಜಾ ಪ್ರಕರಣದಲ್ಲಿ ಮರೆವಿನಲ್ಲಿ ಈ ವೈದ್ಯ ಮಹಾಶಯರು ಘಜಿನಿಯನ್ನು ಮೀರಿಸುತ್ತಾರೆ. ಆಪರೇಷನ್ ಬಳಿಕ ಮಹಿಳೆಯ ಹೊಟ್ಟೆಯಲ್ಲಿದ್ದ ಪ್ಲೇಟ್ (dinner plate size) ಅನ್ನು ಮರೆತಿಟ್ಟಿದ್ದಾರೆ. ಏನು ಯಾಕೆ ಎಂದು ಯೋಚಿಸುತಿದ್ದೀರಾ? ಹೌದು.. ಹೆರಿಗೆಗೆಂದು ತೆರಳಿದ್ದ ಮಹಿಳೆಯೊಬ್ಬರಿಗೆ ಸಿಸೇರಿಯನ್ ಮಾಡಿ (cesarean surgery) ಮಗುವನ್ನು ಹೊರತೆಗೆದಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ಮುಗಿಯುವ ಹೊತ್ತಿಗೆ ಹೊಟ್ಟೆಯಲ್ಲಿ ತಟ್ಟೆ ಇಟ್ಟು ಹೊಲಿಗೆ ಹಾಕಿಬಿಟ್ಟಿದ್ದಾರೆ . ಈ ವಿಚಿತ್ರ ಘಟನೆ ನ್ಯೂಜಿಲೆಂಡ್ (New Zealand) ನಲ್ಲಿ ಬೆಳಕಿಗೆ ಬಂದಿದೆ.
ನ್ಯೂಜಿಲೆಂಡ್ ಆರೋಗ್ಯ ಮತ್ತು ಅಂಗವಿಕಲ ಆಯುಕ್ತರು ಸೋಮವಾರ (ಸೆಪ್ಟೆಂಬರ್ 4) ಬಿಡುಗಡೆ ಮಾಡಿದ ವರದಿಯ ಪ್ರಕಾರ 2020 ರಲ್ಲಿ, 20 ವರ್ಷದ ಮಹಿಳೆ ಹೆರಿಗೆ ಮಾಡಿಸಿಕೊಳ್ಳಲು ಆಕ್ಲೆಂಡ್ ಸಿಟಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿನ ವೈದ್ಯರು ಸಿಸೇರಿಯನ್ ಮಾಡಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ ಎಂದು ಸಾರಿದ್ದರು. ಆದರೆ, ಶಸ್ತ್ರಚಿಕಿತ್ಸೆ ಕಾರ್ಯಾಚರಣೆಯ ಸಮಯದಲ್ಲಿ, 17 ಸೆಂ (6 ಇಂಚು) ಅಲೆಕ್ಸಿಸ್ ರಿಟ್ರಾಕ್ಟರ್ (ಶಂಕುವಿನಾಕಾರದ ಸಾಧನ) ಅನ್ನು ಸೇರಿಸಿ, ಹೊಟ್ಟೆಗೆ ಹೊಲಿಗೆ ಹಾಕಿ ಕೈತೊಳೆದುಕೊಂಡಿದೆ ವೈದ್ಯ ತಂಡ. ಬಳಿಕ ಮಹಿಳೆಯನ್ನು ಡಿಸ್ಚಾರ್ಜ್ ಮಾಡಿ ಕಳುಹಿಸಲಾಗಿದೆ. ಆದರೆ ಆ ನಂತರ ಮಹಿಳೆ ಆಗಾಗ್ಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಮಹಿಳೆ ದೀರ್ಘಕಾಲದ ಹೊಟ್ಟೆ ನೋವಿನಿಂದ ಬಳಲಿದ್ದು, ಕೊನೆಗೂ ವೈದ್ಯರ ಬಳಿಗೆ ವಾಪಸಾಗಿದ್ದಾರೆ.
ವೈದ್ಯರು ಮಹಿಳೆಗೆ ಕ್ಷ ಕಿರಣ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಿದರು. ಹಲವು ಬಗೆಯ ಔಷಧಗಳನ್ನೂ ನೀಡಲಾಯಿತು. ಆದರೆ ಯಾವುದೂ ಫಲ ನೀಡಲಿಲ್ಲ. ಕೊನೆಗೂ ಸಿಟಿ ಸ್ಕ್ಯಾನ್ ಮಾಡಿದಾಗ ಸತ್ಯಾಂಶ ಹೊರಬಿದ್ದಿದೆ. ಮಹಿಳೆ 18 ತಿಂಗಳಿನಿಂದ ಹೊಟ್ಟೆಯಲ್ಲಿ AWR ಎಂಬ ಹಿಂತೆಗೆದುಕೊಳ್ಳುವ ಸೂಜಿ ಸಾಧನವನ್ನು ಹೊಟ್ಟೆಯಲ್ಲಿ ಹೊತ್ತಿದ್ದಳು ಎಂದು ತಿಳಿದು, ಎಲ್ಲರೂ ಆಘಾತಕ್ಕೊಳಗಾಗಿದ್ದರು. ಸಂತ್ರಸ್ತೆಯ ಹೊಟ್ಟೆಯಲ್ಲಿ ತಟ್ಟೆಯ ಗಾತ್ರದ ಸಾಧನವಿದೆ ಎಂದು ವೈದ್ಯರು ಕೊನೆಗೂ ತಿಳಿಸಿದ್ದಾರೆ. ಇತ್ತ ಮಹಿಳೆ 18 ತಿಂಗಳ ಹಿಂದೆ ತನಗೆ ಸಿಸೇರಿಯನ್ ಆಗಿದ್ದು, ನಂತರ ಯಾವುದೇ ಆಪರೇಷನ್ ಮಾಡಿಲ್ಲ ಎಂದು ವೈದ್ಯರಿಗೆ ತಿಳಿಸಿದ್ದಾಳೆ. ಆದರೆ ಆಗಾಗ ಹೊಟ್ಟೆನೋವು ಯಾಕೆ ಬರುತ್ತೆ ಅನ್ನೋದು ಗೊತ್ತಾಗುತ್ತಿಲ್ಲ ಎಂಗು ತಮ್ಮ ಪಡಿಲಾಟಲು ಹೇಳಿಕೊಂಡಿದ್ದಾರೆ. ಆಗ ವೈದ್ಯರಿಗೆ ಸಾದ್ಯಂತವಾಗಿ ಎಲ್ಲವನ್ನೂ ಊಹಿಸಲು ಸಾಧ್ಯವಾಯಿತು.
ಕೂಡಲೇ ಮತ್ತೆ ಶಸ್ತ್ರಚಿಕಿತ್ಸೆ ಕಾರ್ಯಾಚರಣೆ ನಡೆಸಿ ಮಹಿಳೆಯ ಹೊಟ್ಟೆಯಿಂದ ಸಾಧನವನ್ನು ಹೊರತೆಗೆಯಲಾಯಿತು. ಸಿಸೇರಿಯನ್ ಸಮಯದಲ್ಲಿ ವೈದ್ಯರು ಬಳಸುವ ಸಾಧನಗಳಲ್ಲಿ ಒಂದಾದ ಅಲೆಕ್ಸಿಸ್ ರಿಟ್ರಾಕ್ಟರ್ ಆ ಮಹಿಳೆಯ ಹೊಟ್ಟೆಯಲ್ಲಿ ಭದ್ರವಾಗಿ ಕುಳಿತಿತ್ತು. ಆದು ನೋಡಲು ಊಟದ ತಟ್ಟೆಯ ಗಾತ್ರವಿರುತ್ತದೆ. ಈ ಘಟನೆ ನಡೆದಿದ್ದು 2021ರಲ್ಲಿ. ಈ ವರದಿಯನ್ನು ನ್ಯೂಜಿಲೆಂಡ್ ಆರೋಗ್ಯ ಆಯುಕ್ತ ಮೊರಾಗ್ ಮೆಕ್ ವೆಲ್ ಮೊನ್ನೆ ಸೋಮವಾರ ಬಿಡುಗಡೆ ಮಾಡಿದ್ದಾರೆ.
ಆಕ್ಲೆಂಡ್ ಜಿಲ್ಲಾ ಆರೋಗ್ಯ ಮಂಡಳಿಯು ರೋಗಿಗಳ ಹಕ್ಕುಗಳ ಕೋಡ್ ಅನ್ನು ಉಲ್ಲಂಘಿಸಿದೆ ಎಂದು ಪೆ ನಾಟು ಓರಾ ಆಕ್ಲೆಂಡ್ ಬಹಿರಂಗಪಡಿಸಿದೆ. ಸಿಸೇರಿಯನ್ ಸಮಯದಲ್ಲಿ ಮಹಿಳೆಯನ್ನು ಆರೈಕೆ ಮಾಡಿರುವುದು ಕಂಡುಬಂದಿದೆ. ಮೆಕ್ವೆಲ್ ಆಕ್ಲೆಂಡ್ ಜಿಲ್ಲಾ ಆರೋಗ್ಯ ಮಂಡಳಿಯ ವರದಿಯು ಸಂತ್ರಸ್ತ ಮಹಿಳೆಗೆ ಬೇಷರತ್ ಕ್ಷಮೆಯಾಚಿಸುವಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಆದೇಶಿಸಿದೆ. ಈ ಮಟ್ಟಿಗೆ ಪ್ರಕರಣವನ್ನು ಪ್ರೊಸಿಡಿಂಗ್ಸ್ ನಿರ್ದೇಶಕರು ಉಲ್ಲೇಖಿಸಿದ್ದಾರೆ. ವೈದ್ಯರು ಆಪರೇಷನ್ ಮಾಡುವಾಗ ಹತ್ತಿ, ಕತ್ತರಿ ಮರೆಯುತ್ತಾರೆ ಎಂದು ಕೇಳಿದ್ದೇವೆ. ಆದರೆ ತಟ್ಟೆ ಮರೆಯುವಷ್ಟು ನಿಷ್ಕಾಳಜಿ ವಹಿಸಿದ್ದನ್ನು ಕಂಡು ಹೌಹಾರಿದ್ದಾರೆ.