ಶಸ್ತ್ರಚಿಕಿತ್ಸೆಗೆ ಒಳಗಾದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್..!
ಟೀಮ್ ಇಂಡಿಯಾದ (Team India) ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿರುವ ಅವರು ಜರ್ಮನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಮೇಜರ್ ಸರ್ಜರಿ ಮುಗಿಸಿರುವ ಸೂರ್ಯ ನನ್ನ ಬಗ್ಗೆ ಕಾಳಜಿವಹಿಸಿರುವವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ಸೂರ್ಯಕುಮಾರ್, ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಿಮ್ಮಲ್ಲೆರ ಕಾಳಜಿ ಮತ್ತು ವಿಶಸ್ಗೆ ಧನ್ಯವಾದಗಳು. ಶೀಘ್ರದಲ್ಲೇ ನಾನು ಕಂಬ್ಯಾಕ್ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
ಪಿಟಿಐ ಪ್ರಕಾರ, ಸೂರ್ಯಕುಮಾರ್ ಸಂಪೂರ್ಣ ಫಿಟ್ನೆಸ್ ಸಾಧಿಸಲು ಕನಿಷ್ಠ ಒಂದು ತಿಂಗಳು ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರ ವೇಳೆಗೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ. ಹಾಗೆಯೇ ಐಪಿಎಲ್ನ ಆರಂಭಿಕ ಪಂದ್ಯಗಳಿಂದ ಸೂರ್ಯ ಹೊರಗುಳಿಯುವ ಸಾಧ್ಯತೆಯನ್ನೂ ಕೂಡ ತಳ್ಳಿ ಹಾಕುವಂತಿಲ್ಲ.
ಏಕೆಂದರೆ ಮುಂಬರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಸೂರ್ಯಕುಮಾರ್ ಯಾದವ್ ಸಂಪೂರ್ಣ ಫಿಟ್ನೆಸ್ನೊಂದಿಗೆ ಮೈದಾನಕ್ಕೆ ಮರಳಲು ಬಿಸಿಸಿಐ ಸೂಚಿಸಿದೆ. ಹೀಗಾಗಿ ಐಪಿಎಲ್ನ ಆರಂಭಿಕ ಕೆಲ ಪಂದ್ಯಗಳಿಂದ ಅವರು ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಅದರಂತೆ ಟಿ20 ವಿಶ್ವಕಪ್ಗೂ ಮುನ್ನ ಸೂರ್ಯಕುಮಾರ್ ಯಾದವ್ ಮೈದಾನಕ್ಕಿಳಿಯುವುದು ಖಚಿತ. ಹಾಗೆಯೇ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲೂ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ ಟೀಮ್ ಇಂಡಿಯಾದ ಹೊಡಿಬಡಿ ದಾಂಡಿಗ.
ಟೀಮ್ ಇಂಡಿಯಾ ಪಾಲಿಗೆ ಸೂರ್ಯ ಅನಿವಾರ್ಯ:
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಸೂರ್ಯಕುಮಾರ್ ಯಾದವ್ ಅನಿವಾರ್ಯ. ಏಕೆಂದರೆ ಕಳೆದ ಎರಡು ವರ್ಷಗಳಲ್ಲಿ ಅವರು ಚುಟುಕು ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಡಿರುವ 57 ಇನಿಂಗ್ಸ್ಗಳಲ್ಲಿ ಸೂರ್ಯ 4 ಶತಕ ಹಾಗೂ 17 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ 171.55 ರ ಅದ್ಭುತ ಸ್ಟ್ರೈಕ್ ರೇಟ್ನಲ್ಲಿ 2141 ರನ್ಸ್ ಕಲೆಹಾಕಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಬಲ ಹೆಚ್ಚಿಸಲು ಟೀಮ್ ಇಂಡಿಯಾಗೆ ಸೂರ್ಯಕುಮಾರ್ ಯಾದವ್ ಅವರ ಕಂಬ್ಯಾಕ್ ಅನಿವಾರ್ಯ ಎನ್ನಬಹುದು.
ಟಿ20 ವಿಶ್ವಕಪ್ 2024 ಯಾವಾಗ ಶುರು?
2024 ರ ಟಿ20 ವಿಶ್ವಕಪ್ ಜೂನ್ 1 ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯವು ಜೂನ್ 29 ರಂದು ಬಾರ್ಬಡೋಸ್ನಲ್ಲಿ ನಡೆಯಲಿದೆ.