ಸಂತೆಕಟ್ಟೆ: ಕುಸಿದು ಬಿದ್ದ ಓವರ್ ಪಾಸ್ ತಡೆಗೋಡೆ
ಉಡುಪಿ: ಸಂತೆಕಟ್ಟೆಯಲ್ಲಿ ನಡೆಯುತ್ತಿರುವ ಓವರ್ ಪಾಸ್ ಕಾಮಗಾರಿ ಪ್ರದೇಶದಲ್ಲಿ ಮಣ್ಣು ಕುಸಿಯುತ್ತಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಸಂತೆಕಟ್ಟೆ ಪ್ರದೇಶದಲ್ಲಿ ಆರಂಭಗೊಂಡಿರುವ ಓವರ್ ಪಾಸ್ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಮಣ್ಣು ಕುಸಿಯಲು ಆರಂಭವಾಗಿದ್ದು ಇದರಿಂದ ಇಲ್ಲಿ ನಿರ್ಮಿಸಲಾದ ತಡೆಗೋಡೆಗಳಿಗೂ ಹಾನಿಯಾಗಿದೆ ಅಷ್ಟು ಮಾತ್ರವಲ್ಲದೆ ಮಣ್ಣು ಕುಸಿತ ಹೆಚ್ಚಾಗುತ್ತಿದ್ದು ಇದರಿಂದ ಪಕ್ಕದಲ್ಲೇ ಇರುವ ಬೃಹತ್ ಕಟ್ಟಡ ಹಾಗೂ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಕ್ರಮ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಪರ್ಯಾಯ ಮಾರ್ಗ ಕೂಡ ಸರಿಯಾದ ಡಾಂಬರೀಕರಣ ಇಲ್ಲದ ಕಾರಣ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪವು ಇಲ್ಲಿ ಕೇಳಿ ಬಂದಿದೆ.
ಧುಮ್ಮಿಕ್ಕುತ್ತಿರುವ ಜೋಗದ ಸೊಬಗು: ರಾಜ, ರಾಣಿ, ರೋರರ್, ರಾಕೆಟ್, ಲೇಡಿ ನೋಡಲು ಪ್ರವಾಸಿಗರ ದಂಡು
ಸಾಗರ (ಜು.10): ಕಳೆದೊಂದು ವಾರದಿಂದ ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆ ಕೊರತೆಯಿಂದ ಜೋಗದ ಗುಂಡಿ ಬರಡಾಗಿ ನಿಂತಿತ್ತು. ಈಗ ವರುಣನ ಕೃಪೆಯಿಂದಾಗಿ ತನ್ನ ವೈಭವ ಮರಳಿ ಪಡೆದಿದೆ. ಪ್ರಮುಖವಾಗಿ ನಾಲ್ಕು ಭಾಗಗಳಲ್ಲಿ ಧುಮ್ಮಿಕ್ಕುವ ಜೋಗ್ಫಾಲ್ಸ್ ತನ್ನ ರುದ್ರರಮನೀಯತೆ ಕಣ್ತುಂಬಿಕೊಳ್ಳಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈ ವರ್ಷ ಮಲೆನಾಡಿನಲ್ಲೂ ಮಳೆ ಕೊರತೆ ಕಾಡಿತ್ತು. ಜೂನ್ನಲ್ಲಿ ಆರಂಭ ಆಗಬೇಕಿದ್ದ ಮಳೆ ಜುಲೈನಲ್ಲಿ ಆರಂಭಗೊಂಡಿದೆ. ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಭಾರೀ ಮಳೆಯಾಗಿದ್ದು, ನದಿಗಳಲ್ಲಿ ನೀರಿನಮಟ್ಟ ಹೆಚ್ಚತೊಡಗಿದೆ. ನೂರಾರು ಅಡಿ ಮೇಲಿಂದ ಧುಮ್ಮಿಕ್ಕುವ ಜೋಗ ಜಲಪಾತ ವೈಭವ ನೋಡಲು ಪ್ರವಾಸಿ ಮುಗಿಬೀಳುತ್ತಿದ್ದಾರೆ.
ದೇಶಾದ್ಯಂತ ಪ್ರವಾಸಿಗರ ಭೇಟಿ: ವಾರದಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಕಳೆದೆರಡು ದಿನಗಳಿಂದ ಬಿಡುವು ನೀಡಿದೆ. ವಾರಾಂತ್ಯ ದಿನದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ ಆಗುತ್ತಿದೆ. ಭಾನುವಾರ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ. ಶನಿವಾರ ಮತ್ತು ಭಾನುವಾರ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜೋಗವನ್ನು ಕಣ್ತುಂಬಿಕೊಳ್ಳಲು ರಾಜ್ಯವಲ್ಲದೇ ಬೇರೆ ರಾಜ್ಯ ಮತ್ತು ದೇಶಗಳಿಂದಲೂ ಬರುತ್ತಿದ್ದಾರೆ.
ಜೋಗ್ಫಾಲ್ಸ್ ವೈಭವ: ಮುಂಗಾರು ಮಳೆ ಅಬ್ಬರ ಸ್ವಲ್ಪ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಮಾತ್ರವಲ್ಲದೇ, ರಾಣಿ (ಲೇಡಿ), ರಾಜ, ರೋರರ್ ಹಾಗೂ ರಾಕೆಟ್ ಹೆಸರಿನಿಂದ ಧುಮ್ಮಿಕ್ಕುವ ಜೋಗ ಜಲಪಾತ ವೀಕ್ಷಿಸಲು ಮಳೆ ಉತ್ತಮ ವಾತಾವರಣ ಕಲ್ಪಿಸಿಕೊಟ್ಟಿದೆ. ಮತ್ತೆ ಇಂಥ ವೈಭೋಗ ನೋಡಲು ಸಿಗುವುದೋ, ಇಲ್ಲವೋ ಎಂಬಂತೆ ಪ್ರವಾಸಿಗರು ಜೋಗದತ್ತ ಪಯಣ ಬೆಳೆಸುತ್ತಿದ್ದಾರೆ. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸದ್ಯ ಮಳೆ ಜೋರಾಗಿದ್ದು, ‘ಶರಾವತಿ’ ಮೈದುಂಬಿ ಹರಿಯುತ್ತಿದ್ದಾಳೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ.
ಮಳೆ ಇದೇ ರೀತಿ ಮುಂದುವರಿದರೆ ಈ ವರ್ಷ ಜುಲೈ ಅಂತ್ಯದಲ್ಲಿ ಜಲಪಾತದ ವೈಭವ ಮತ್ತಷ್ಟುಮರುಕಳಿಸುವ ಸಾಧ್ಯತೆ ಇದೆ. ಮಳೆ ಇಲ್ಲದೇ ಕಳೆಗುಂದಿದ್ದ ಜೋಗ ಈಗ ನಯನ ಮನೋಹರ ದೃಶ್ಯಕ್ಕೆ ಸಾಕ್ಷಿಯಾಗಿದೆ. ಈ ನಯನ ಮನೋಹರ ದೃಶ್ಯ ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಸತತ ಮಳೆಯಿಂದಾಗಿ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಶಿರಸಿ, ಶಿವಮೊಗ್ಗ, ಗದಗ, ಬಾಗಲಕೋಟೆ ರಾಯಚೂರು ಮೊದಲಾದ ಭಾಗಗಳಿಂದ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ವ್ಯಾಪಕ ಮಳೆ ಆಗುತ್ತಿರುವುದರಿಂದ ಜಗತ್ೊ್ರಸಿದ್ಧ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ.
ಮಂಜಿನ ಮಧ್ಯೆ ಆಗಾಗ ಫಾಲ್ಸ್ ದರ್ಶನ: ಮಳೆಗಾಲ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಜೋಗದ ಪ್ರದೇಶ ಪ್ರವಾಸಿಗರಿಂದ ತುಂಬಿತ್ತು. ಮಳೆಯಿಂದ ಮಂಜು ತುಂಬಿಕೊಳ್ಳುತ್ತಿರುವುದರಿಂದ ಜೋಗದ ರಮಣೀಯ ದೃಶ್ಯ ನೋಡಲು ಪ್ರವಾಸಿಗರು ಗಂಟೆಗಟ್ಟಲೆ ಕಾಯಬೇಕಿತ್ತು. ಆದರೂ ಆಗಾಗ ಮಂಜಿನ ನಡುವೆ ಜಲಪಾತ ಗೋಚರವಾದಾಗ ಜನರ ಹರ್ಷೋದ್ಘಾರ ಮುಗಿಲುಮುಟ್ಟುತ್ತಿತ್ತು.
ಜೋಗದ ವೈಭವ ಕಂಡು ಸಂಭ್ರಮಿಸಿದ ಪ್ರವಾಸಿಗರು ಜಲಪಾತದ ಮುಂದೆ ನಿಂತು ಸೆಲ್ಪಿ ಕಿಕ್ಲಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿ ವರ್ಷದಂತೆ ಜೂನ್ ತಿಂಗಳಿನಲ್ಲಿಯೇ ಮಳೆಗಾಲ ಆರಂಭವಾಗಿದ್ದರೆ ಈ ದಿನಗಳಲ್ಲಿ ಜೋಗದ ವೈಭವ ರುದ್ರರಮಣೀಯ ಆಗಿರುತ್ತಿತ್ತು. ಆದರೆ, ಈ ಬಾರಿ ಸುಮಾರು ಒಂದು ತಿಂಗಳು ತಡವಾಗಿ ಮಳೆ ಆರಂಭ ಆಗಿದೆ. ಆದ್ದರಿಂದ ಜಲಪಾತ ಈಗಷ್ಟೇ ಮೈತುಂಬಿಕೊಳ್ಳುತ್ತಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನೇದಿನೇ ಜಾಸ್ತಿಯಾಗುತ್ತಿದೆ.