ರಾಹುಲ್ ಗಾಂಧಿ ಕ್ಷೇತ್ರ ವಯನಾಡ್ ಉಪಚುನಾವಣೆಗೆ ಆಯೋಗ ಸಿದ್ಧತೆ
ಕಲ್ಲಿಕೋಟೆ: ಲೋಕಸಭೆಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನರ್ಹಗೊಂಡ ಬಳಿಕ ಅವರು ಸಂಸದರಾಗಿದ್ದ ವಯನಾಡ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಸುವ ಪ್ರಕ್ರಿಯೆಗೆ ಚುನಾವಣಾ ಆಯೋಗ ಚಾಲನೆ ನೀಡಿದೆ. ಮತಯಂತ್ರ ಪರಿಶೀಲನೆ, ಅಣಕು ಮತದಾನ, ಮತದಾರರ ಪಟ್ಟಿ ಪರಿಶೀಲನೆ ಸೇರಿದಂತೆ ವಿವಿಧ ಪ್ರಕ್ರಿಯೆ ಕುರಿತು ರಾಜಕೀಯ ಪಕ್ಷಗಳಿಗೆ ಚುನಾವಣಾಧಿಕಾರಿಗಳು ಪತ್ರ ರವಾನಿಸಿದ್ದಾರೆ. ಆದರೆ ಚುನಾವಣಾ ದಿನಾಂಕ, ನಾಮಪತ್ರ ಸಲ್ಲಿಕೆ (Nomination File) ದಿನಾಂಕ ಇನ್ನೂ ನಿಗದಿಯಾಗಿಲ್ಲ. ‘ಮೋದಿ ಉಪನಾಮ ಹೊಂದಿದವರು ಕಳ್ಳರು’ ಎಂದು ಟೀಕಿಸಿ ಮಾನನಷ್ಟ ಪ್ರಕರಣದಡಿ ರಾಹುಲ್ ಗಾಂಧಿ ಜೈಲು ಶಿಕ್ಷೆಗೊಳಗಾಗಿದ್ದು ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
2019ರಲ್ಲಿ ಕರ್ನಾಟಕದ (Karnataka) ಕೋಲಾರದಲ್ಲಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ (Rahul Gandhi) ಮೋದಿ ಸರ್ನೇಮ್ ಹೊಂದಿರುವ ಎಲ್ಲರೂ ಕಳ್ಳರೇ ಏಕೆ ಇದ್ದಾರೆ ಎಂದು ಪ್ರಶ್ನಿಸಿದ್ದರು, ಇದರ ವಿರುದ್ಧ ಗುಜರಾತ್ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್ನ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಅವರ ಸಂಸದ ಸ್ಥಾನವೂ ಅನರ್ಹಗೊಂಡಿತ್ತು. ಇದಾದ ಬಳಿಕ ಅವರು ತಮ್ಮ ಸರ್ಕಾರಿ ಬಂಗಲೆಯನ್ನು ಕೂಡ ತೊರೆದಿದ್ದರು. ಸುಮಾರು ಎರಡು ದಶಕಗಳಿಂದ ರಾಹುಲ್ ಗಾಂಧಿ ಇದೇ ಬಂಗಲೆಯಲ್ಲಿ ವಾಸಿಸುತ್ತಿದ್ದರು. ತನ್ನ ಕಚೇರಿಯನ್ನು ಬದಲಾಯಿಸಿದ ನಂತರ, ಅವರು ತಮ್ಮ ತಾಯಿ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ಅವರ 10, ಜನಪಥ್ ನಿವಾಸದಲ್ಲಿ ವಾಸಿಸಲು ಪ್ರಾರಂಭಿಸಿದರು ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 23 ರಂದು ಸೂರತ್ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ (Criminal defamation suit)ರಾಹುಲ್ ಗಾಂಧಿ ಅವರನ್ನು ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿ, ಅವರನ್ನು ಅನರ್ಹಗೊಳಿಸಲು ಕಾರಣವಾಯಿತು. ಬಳಿಕ ಅವರು ಸೂರತ್ನ ಸೆಷನ್ಸ್ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದರು. ಅದು ಶಿಕ್ಷೆಯನ್ನು ರದ್ದುಗೊಳಿಸುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿತು. ಈ ಮಧ್ಯೆ, ಅವರನ್ನು ಅನರ್ಹಗೊಳಿಸಿದ ಒಂದು ದಿನದ ನಂತರ, ಲೋಕಸಭೆ ಸೆಕ್ರೆಟರಿಯೇಟ್ ಏಪ್ರಿಲ್ 22 ರೊಳಗೆ ಜಾಗವನ್ನು ಖಾಲಿ ಮಾಡುವಂತೆ ರಾಹುಲ್ ಗಾಂಧಿಗೆ ನೋಟಿಸ್ ಕಳುಹಿಸಿತ್ತು.