ಖಾಸಗಿ ಬಸ್ ಪಲ್ಟಿ; ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ!
ಚಿತ್ರದುರ್ಗ: ಖಾಸಗಿ ಬಸ್ಸೊಂದು (Private Bus) ಪಲ್ಟಿಯಾಗಿ ಮೂವರು ಪ್ರಯಾಣಿಕರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ ಪಟ್ಟಣದ ಕಣಿವೆ ಬಳಿ ನಡೆದಿದೆ.
ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಗಾಯಾಳುಗಳನ್ನು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ ಐ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಖಾಸಗಿ ಬಸ್ ಇದಾಗಿದ್ದು, 50 ಜನ ಪ್ರಯಾಣಿಸುತ್ತಿದ್ದ ಮಾಹಿತಿ ದೊರೆತಿದೆ. ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ ಐ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಟೈಯರ್ ಗೋಡೌನ್ನಲ್ಲಿ ಅಗ್ನಿ ಅವಘಡ:
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಅಗ್ನಿ ಅವಘಡ (Fire Accident, Bengaluru) ಸಂಭವಿಸಿದೆ. ಚಾಮರಾಜಪೇಟೆಯ ಟಿಆರ್ ಮೀಲ್ ಬಳಿ ಟೈಯರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿ ಗಗನದೆತ್ತರಕ್ಕೆ ಉರಿದಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡವು. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗಲಿರುವ ಶಂಕೆ ವ್ಯಕ್ತವಾಗಿದೆ.
ಮುಂಜಾನೆ 4:30 ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. 5:30 ಸಮಯಕ್ಕೆ ಪೊಲೀಸರು ಮನೆಯಿಂದ ಎಲ್ಲರೂ ಹೊರಗಡೆ ಬರುವಂತೆ ಅನೌನ್ಸ್ ಮಾಡಿದರು. ಅನೌನ್ಸ್ ಮಾಡಿ ಪೊಲೀಸರು ಕರೆಯೋತನಕ ನಮಗೆ ತಿಳಿದಿರಲಿಲ್ಲ. ಅಕ್ಕಪಕ್ಕದ ಸುಮಾರು 20ಕ್ಕೂ ಹೆಚ್ಚು ಮನೆಗಳು ಖಾಲಿ ಮಾಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಂಕಿ ತಗಲಿರೋ ಕಟ್ಟಡದಲ್ಲಿ ಸುಮಾರು 8 ಟಯರ್ ಅಂಗಡಿಗಳು ಇದ್ದು, ಅಷ್ಟು ಕೂಡ ಹೊತ್ತಿ ಉರಿಯುತ್ತಿವೆ. ನಾವೆಲ್ಲಾ ಆತಂಕದಿಂದ ಮನೆಯಲ್ಲಿ ಕರೆಂಟ್, ಗ್ಯಾಸ್ ಗಳನ್ನೆಲ್ಲವೂ ಆಪ್ ಮಾಡಿ ಹೊರಗಡೆ ಬಂದು ನೋಡಿದಾಗ ಬೆಂಕಿಯ ಕೆನ್ನಾಲಿಗೆ ನೋಡಿ ಆತಂಕವಾಯ್ತು ಎಂದರು.
ಘಟನಾ ಸ್ಥಳದಲ್ಲಿ ಸಿಬ್ಬಂದಿ ಅಗ್ನಿಶಾಮಕ ವಾಹನಗಳನ್ನ ಹೆಚ್ಚಿಸಿಕೊಂಡಿದ್ದು, ಸುಮಾರು ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಬೆಂಕಿ ನಂದಿಸೋ ಕೆಲಸ ನಡೆದಿದೆ. ಗೋಡೌನ್ ನಾಲ್ಕು ಮೂಲೆಗಳಿಂದ ಬೆಂಕಿ ನಂದಿಸಲಾಗಿದೆ. ಸುಮಾರು ಎರಡು ಗಂಟೆಗಳ ಪ್ರಯತ್ನದ ಬಳಿಕ ಬೆಂಕಿ ಸ್ವಲ್ಪ ಹತೋಟಿಗೆ ಬಂದಿದೆ.