ಬಿಜೆಪಿ ಭದ್ರಕೋಟೆ ಬೆಂಗಳೂರು ದಕ್ಷಿಣಕ್ಕೆ ಪವನ್ ಕಲ್ಯಾಣ್ ಸ್ಟಾರ್ ಪ್ರಚಾರಕ.?
ಹೌದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಪ್ತಿಯಲ್ಲಿ ಬರುವ ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಹೆಚ್ಎಸ್ಆರ್ ಲೇಔಟ್, ಜಯನಗರ, ಜೆಪಿ ನಗರ, ಬಸವನಗುಡಿ ಸೇರಿದಂತೆ ಕೆಲ ಭಾಗದಲ್ಲಿ ತೆಲುಗು ಭಾಷಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ತೆಲಗು ಚಿತ್ರರಂಗದ ನಟ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ ಅವರನ್ನು ಪ್ರಚಾರಕ್ಕೆ ಕರೆತರಲು ಬಿಜೆಪಿ ಯೋಚಿಸಿದೆ.
ಈ ವಿಚಾರವಾಗಿ ಗುರುವಾರ (ಮಾ.28) ರಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ ಗರುಡಾಚಾರ್ಯ ನಿವಾಸದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಸಭೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಮತ್ತು ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪವನ್ ಕಲ್ಯಾಣ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ರ್ಯಾಲಿ ಮತ್ತು ರೋಡ್ ಶೋ ನಡೆಸಬೇಕು. ಪ್ರಧಾನಿ ಮೋದಿ, ಅಮಿತ್ ಶಾ, ಪವನ್ ಕಲ್ಯಾಣ್ ಮೂವರನ್ನು ಒಂದೆ ವೇದಿಕೆಯಲ್ಲಿ ಕರೆತರಬೇಕು. ಪವನ್ ಕಲ್ಯಾಣ ಒಂದು ದಿನ ಬಿಜೆಪಿ ಪರವಾಗಿ ಬೆಂಗಳೂರು ದಕ್ಷಿಣದಲ್ಲಿ ಪ್ರಚಾರ ಮಾಡಲು ಅನುಮತಿ ನೀಡಬೇಕೆಂದು ರಾಜ್ಯ ಘಟಕಕ್ಕೆ ಬೆಂಗಳುರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಮನವಿ ಸಲ್ಲಿಸಿದೆ.
ಇನ್ನು ಪವನ್ ಕಲ್ಯಾಣ ಆಂದ್ರ ಪ್ರದೇಶ ರಾಜಕೀಯದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಪವನ್ ಕಲ್ಯಾಣ ತಮ್ಮ ಬಿರುಸಿನ ಮಾತುಗಳ ಮೂಲಕ ಜನರನ್ನು ಸೆಳೆಯಬಲ್ಲರು. ಅಲ್ಲದೆ ಈ ಹಿಂದೆ ಪ್ರಧಾನಿ ಮೋದಿಯ ಸಮಾವೇಶದಲ್ಲಿ ಪವನ ಕಲ್ಯಾಣ ಕಾಣಿಸಿಕೊಂಡಿದ್ದರು. ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.
ಬಿಜೆಪಿಯ ಭದ್ರಕೋಟೆ ಬೆಂಗಳೂರು ದಕ್ಷಿಣ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಈ ಲೋಕಸಭಾ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಎಂಟರಲ್ಲಿ ಮೂರು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದರೇ, ಐದು ಬಿಜೆಪಿಯ ಪಾಲಾಗಿವೆ. ಇನ್ನು ಈ ಲೋಕಸಭಾ ಕ್ಷೇತ್ರದಲ್ಲಿ 1996 ರಿಂದ ಈಗವರೆಗು ಬಿಜೆಪಿ ನಾಯಕರೇ ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. 1996 ರಿಂದ 2009ರ ವರೆಗು ದಿವಂಗತ ಅನಂತ ಕುಮಾರ್ ಸಂಸದರಾಗಿದ್ದರು. 2014 ರಿಂದ ಇಲ್ಲಿಯವರೆಗು ತೇಜಸ್ವಿ ಸೂರ್ಯ ಸಂಸದರಾಗಿದ್ದಾರೆ.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಬಿಟಿಎಮ್ ಲೇಔಟ್ ಶಾಸಕ, ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ತಂದೆ ಸಚಿವರಾಗಿದ್ದರಿಂದ ಹೆಚ್ಚು ಪ್ರಭಾವ ಬೀರುವುದರಿಂದ ಬಿಜೆಪಿ ಈ ಪ್ಲಾನ್ ಮಾಡಲು ಮುಂದಾಗಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.