ಮುಂಬೈ : ಟೆಕ್ಕಿ ಯುವತಿಯನ್ನ ಗುಂಡಿಕ್ಕಿ ಹತ್ಯೆಗೈದ ಪ್ರಿಯತಮ

ಮುಂಬೈ: ಪುಣೆಯ (Pune) ಐಟಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕಿಯಾಗಿ (IT Professional) ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿಯನ್ನ ಆಕೆಯ ಪ್ರಿಯತಮನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜ.28ರಂದು ಬೆಳಗ್ಗೆ ಲಕ್ಷ್ಮಿ ನಗರದ ಹಿಂಜೆವಾಡಿ ಪ್ರದೇಶದಲ್ಲಿರುವ ಹೋಟೆಲ್ ಕೊಠಡಿಯಲ್ಲಿ ತಲೆಗೆ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಮೃತ ಯುವತಿಯನ್ನು ವಂದನಾ ದ್ವಿವೇದಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ರಿಷಬ್ ನಿಗಮ್ ಎಂದು ಗುರುತಿಸಲಾಗಿದೆ. ರಿಷಬ್ ಉತ್ತರ ಪ್ರದೇಶದ ಲಕ್ನೋ ನಿವಾಸಿಯಾಗಿದ್ದು, ಕೊಲೆ ಮಾಡಿ ಮುಂಬೈಗೆ ಎಸ್ಕೇಪ್ ಆಗುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಪಿಂಪ್ರಿ ಚಿಂಚ್ವಾಡ್ ಪೊಲೀಸರು (Pimpri Chinchwad Police) ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ವಂದನಾ ಶನಿವಾರ ತನ್ನ ಪ್ರಿಯಕರನೊಂದಿಗೆ ಹೋಟೆಲ್ಗೆ ಬಂದಿದ್ದಳು. ಮೃತ ಯುವತಿ ಹಾಗೂ ಆರೋಪಿ ರಿಷಬ್ ಕಳೆದ 10 ವರ್ಷಗಳಿಂದಲೂ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಇಬ್ಬರ ನಡುವೆ ವೈಯಕ್ತಿಕ ಕಾರಣಗಳಿಗೆ ಜಗಳವಾಗಿತ್ತು. ವಂದನಾ ನಡವಳಿಕೆಯ ಬಗ್ಗೆ ಸಂಶಯ ಪಟ್ಟಿದ್ದ ರಿಷಬ್ ಆಕೆಯನ್ನ ಕೊಲ್ಲಲ್ಲು ಸ್ಕೆಚ್ ಹಾಕಿದ್ದ. ಭಾನುವಾರವೂ ಇಬ್ಬರ ನಡುವೆ ಜಗಳ ನಡೆಯುತ್ತಿದ್ದಾಗಲೇ ರಿಷಬ್, ವಂದನಾ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆಯ ನಂತರ ಹೋಟೆಲ್ನಿಂದ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಭಾನುವಾರ ರಿಷಬ್ ಮುಂಬೈಗೆ ಎಸ್ಕೇಪ್ ಆಗುತ್ತಿದ್ದ ವೇಳೆ ಬಂಧಿಸಿದ್ದಾರೆ.
ಸದ್ಯ ವಂದನಾಳ ಶವ ಪತ್ತೆಯಾದ ಹೋಟೆಲ್ ಕೋಣೆಗೆ ಪೊಲೀಸರು ಸೀಲ್ ಹಾಕಿದ್ದಾರೆ ಮತ್ತು ರಿಷಬ್ ಅವರನ್ನು ಕೊಲ್ಲಲು ಬಳಸಿದ್ದ ಗನ್ ಎಲ್ಲಿಂದ ಬಂತು ಅನ್ನೋ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಕಸ ಮತ್ತೆ ಡಸ್ಟ್ಬಿನ್ಗೆ ಹೋಗಿದೆ – ಪಕ್ಷ ತೊರೆದ ನಿತೀಶ್ ಕುಮಾರ್ಗೆ ಲಾಲೂ ಪುತ್ರಿ ಟಾಂಗ್
ಪಟ್ನಾ: ಮಹಾಘಟಬಂಧನ್ ಮೈತ್ರಿ ತೊರೆದು ಹೋಗಿರುವ ನಿತೀಶ್ ಕುಮಾರ್ (Nitish Kumar) ವಿರುದ್ಧ ಲಾಲೂ ಪ್ರಸಾದ್ (Lalu Prasad Yadav) ಅವರ ಪುತ್ರಿ ಹಾಗೂ ಆರ್ಜೆಡಿ ನಾಯಕಿ ರೋಹಿಣಿ ಆಚಾರ್ಯ (Rohini Acharya) ಆಕ್ರೋಶ ಹೊರಹಾಕಿದ್ದಾರೆ. ನಿತೀಶ್ ಕುಮಾರ್ ಅವರನ್ನು ಕಸಕ್ಕೆ ಹೋಲಿಸಿ ಅವರು ಟ್ವೀಟ್ ಮಾಡಿದ್ದಾರೆ. `ಕಸವು ಮತ್ತೆ ಡಸ್ಟ್ಬಿನ್ಗೆ ಹೋಗಿದೆ. ಗಬ್ಬು ನಾರುವ ಕಸವನ್ನು ಪಡೆದ ಡಸ್ಟ್ಬಿನ್ಗೆ ಅಭಿನಂದನೆಗಳು’ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಬಿಹಾರದಲ್ಲಿ (Bihar) ಮಹಾಘಟಬಂಧನ್ ಮೈತ್ರಿಯೊಂದಿಗೆ ಸಂಬಂಧವನ್ನು ಕಡಿದುಕೊಂಡು ನಿತೀಶ್ ಕುಮಾರ್ ಆರ್ಜೆಡಿ ತ್ಯಜಿಸುತ್ತಿದ್ದಂತೆ ರೋಹಿಣಿ ಅವರು ಈ ಪೋಸ್ಟ್ ಮಾಡಿದ್ದಾರೆ. ಇದೀಗ ರಾಜ್ಯದಲ್ಲಿ ಬಿಜೆಪಿ-ಜೆಡಿ(ಯು) ಸರ್ಕಾರದ ಮುಖ್ಯಮಂತ್ರಿಯಾಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸಲು ಅವರು ಸಜ್ಜಾಗಿದ್ದಾರೆ. ಈ ಮೂಲಕ ಅವರು 9ನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ.
ಲಾಲೂ ಪ್ರಸಾದ್ ಅವರ ಹಳೆಯ ಪೋಸ್ಟ್ನ್ನು ಸಹ ರೋಹಿಣಿಯವರು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ `ನಿತೀಶ್ ಒಂದು ಹಾವು, ಹಾವು ಪೊರೆ ಕಳಚಿದಂತೆ, ಅವರು ಸಹ ಎರಡು ವರ್ಷಕ್ಕೊಮ್ಮೆ ಪೊರೆ ಕಳಚುತ್ತಾರೆ. ಈ ಬಗ್ಗೆ ಯಾರಿಗಾದರೂ ಅನುಮಾನವಿದೆಯೇ? ಎಂದು ಬರೆಯಲಾಗಿದೆ.
ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದಾರೆ. ಇಂದೇ ಸಂಜೆ 5 ಗಂಟೆಗೆ ಬಿಹಾರ ಸಿಎಂ ಆಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಬಿಜೆಪಿಯ ಇಬ್ಬರು ಉಪಮುಖ್ಯಮಂತ್ರಿಗಳೊಂದಿಗೆ ನಿತೀಶ್ ಕುಮಾರ್ 9ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಡಿಸಿಎಂ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ರಾಜಕೀಯ ಪ್ರಕ್ಷುಬ್ಧತೆಯ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ನಿತೀಶ್ ಕುಮಾರ್, ಒಂದೂವರೆ ವರ್ಷಗಳ ಹಿಂದೆ ರಚಿಸಲಾದ `ಮಹಾಘಟಬಂಧನ್’ (ಮಹಾಮೈತ್ರಿಕೂಟ) ಪರಿಸ್ಥಿತಿಯು ಉತ್ತಮವಾಗಿಲ್ಲ ಎಂದು ಹೇಳಿದ್ದರು.