ಮುಸ್ಲಿಮರು ತಮ್ಮ ಪವಿತ್ರ ಹಬ್ಬ ಬಕ್ರೀದ್ ಆಚರಣೆ ಸಂದರ್ಭದಲ್ಲಿ ಕುರ್ಬಾನಿ ಹೆಸರಲ್ಲಿ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಕೆಲವು ಕಡೆ ಇದಕ್ಕೆ ಕುರಿ- ಆಡುಗಳನ್ನು ಬಳಸಿದರೆ, ಇನ್ನೂ ಕೆಲವು ಕಡೆ ಕೋಣ, ದನಗಳನ್ನು ವಧೆಗೆ ಬಳಸುತ್ತಾರೆ. ಆದರೆ ಗೋವುಗಳನ್ನು ಕುರ್ಬಾನಿ ಹೆಸರಲ್ಲಿ ಕಡಿಯುವುದಕ್ಕೆ ಹಿಂದೂ ಸಂಘಟನೆಗಳ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮಂಗಳೂರು : ಬಕ್ರೀದ್ ಹಬ್ಬಕ್ಕೆ ಗೋಹತ್ಯೆ ಮಾಡಲು ಅವಕಾಶ ನೀಡಲ್ಲ: ಬಜರಂಗದಳ ಎಚ್ಚರಿಕೆ
ಕರಾವಳಿಯಲ್ಲಿ ಪ್ರಬಲವಾಗಿರುವ ಬಜರಂಗದಳ ನಾಯಕರು, ಈ ಬಾರಿ ಗೋವುಗಳ ಹತ್ಯೆಗೆ ಅವಕಾಶ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅಕ್ರಮ ಗೋಸಾಗಣೆ, ಹತ್ಯೆ ನಡೆಸಿದ್ದಲ್ಲಿ ಯಾವುದೇ ಬೆಲೆ ತೆತ್ತಾದರೂ ನಿಲ್ಲಿಸುತ್ತೇವೆ ಎಂದು ಬಜರಂಗಳದ ದ.ಕ ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ ಹೇಳಿದ್ದಾರೆ.
ಪ್ರಾಣಿಗಳನ್ನು ಬಲಿ ಕೊಡಲೇಬೇಕು ಎಂದಿದ್ದರೆ, ಆಡು, ಕುರಿಗಳನ್ನು ಬಳಸಿ. ಹಿಂದೂಗಳ ಪೂಜನೀಯ ಸ್ಥಾನದಲ್ಲಿರುವ ಗೋವುಗಳನ್ನು ಬಲಿ ಕೊಡಬೇಡಿ ಎಂದು ಬಜರಂಗದಳ ನಾಯಕರು ಹೇಳಿದ್ದಾರೆ. ಆದರೆ ಆಹಾರ ನಮ್ಮ ಹಕ್ಕು ಎನ್ನುವುದು ಮುಸ್ಲಿಮರ ಪ್ರತಿಪಾದನೆ. ಇದಲ್ಲದೆ ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಈಗಾಗಲೇ ಕಾಂಗ್ರೆಸ್ ನಾಯಕರು ಹಿಂದೂ ಸಂಘಟನೆಗಳು ಅತಿರೇಕಕ್ಕೆ ಹೋದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ತೀವಿ ಎಂದಿದ್ದಾರೆ. ಇದೇ ವೇಳೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯೂ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಡಿ. ಗೋವುಗಳನ್ನು ಕಡಿಯುವುದಕ್ಕೆ ಅವಕಾಶ ಕೊಡಬೇಡಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಒಂದೆಡೆ ಗೋಹತ್ಯೆ ನಿಷೇಧ ಕಾಯ್ದೆ (Anti Ccow Slaughter Act) ಹಿಂಪಡೆಯುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಇದರ ಮಧ್ಯೆ ಗೋಹತ್ಯೆಗೆ ಅವಕಾಶವನ್ನೇ ನೀಡುವುದಿಲ್ಲ ಎಂದು ಹಿಂದೂ ಸಂಘಟನೆಗಳು ಹೇಳುತ್ತಿವೆ. ಇದೀಗ ಬಕ್ರೀದ್ ಹಬ್ಬ ಬಂದಿದ್ದು, ಕರಾವಳಿಯಲ್ಲಿ ಗೋಹತ್ಯೆ ಹೆಸರಲ್ಲಿ ಮತ್ತೆ ಕೋಮು, ಕಲಹ ಏರ್ಪಡುತ್ತಾ ಅನ್ನುವ ಶಂಕೆ ಎದುರಾಗಿದೆ.