ಅಯೋಧ್ಯೆಯಲ್ಲಿ ಮಹಾಮಸ್ತಕಾಭಿಷೇಕದ ವಿಧಿವಿಧಾನಗಳು ಜನವರಿ 16 ರಿಂದ ಪ್ರಾರಂಭ ; ಜ. 22 ರಂದು ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ - ಇಲ್ಲಿದೆ ಮಾಹಿತಿ
ರಾಮಜನ್ಮಭೂಮಿ ಅಯೋಧ್ಯೆ (Ayodhya) ತನ್ನ ಭಗವಂತನ ಆಗಮನಕ್ಕೆ ಸಿದ್ಧವಾಗುತ್ತಿದೆದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಲಲ್ಲಾ (Ram Lalla) ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಈ ಸಂದರ್ಭವನ್ನು ವಿಶೇಷ ಮತ್ತು ಐತಿಹಾಸಿಕವಾಗಿಸಲು ಅಯೋಧ್ಯೆಯಲ್ಲಿ ಸಿದ್ಧತೆಗಳು ಶುರುವಾಗಿವೆ.
ರಾಮಮಂದಿರದ ಉದ್ಘಾಟನೆಗೆ ಒಂದು ವಾರ ಮುಂಚಿತವಾಗಿ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಮಹಾಮಸ್ತಕಾಭಿಷೇಕದ ವಿಧಿವಿಧಾನಗಳು ಜನವರಿ 16 ರಂದು ಪ್ರಾರಂಭವಾಗಲಿದ್ದು, ಏಳು ದಿನಗಳ ಕಾಲ ಅಂದರೆ ಜನವರಿ 22 ರವರೆಗೆ ನಡೆಯಲಿದೆ. ಮಂದಿರದ ಟ್ರಸ್ಟ್ ಏಳು ದಿನಗಳ ಆಚರಣೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾರ್ಯಕ್ರಮಗಳು ವಿವರಗಳು ಹೀಗಿವೆ.
- ಜನವರಿ 16 ರಂದು ದೇವಾಲಯದ ಟ್ರಸ್ಟ್ ನೇಮಿಸಿದ ಪ್ರಾಯಶ್ಚಿತ್ತ ಸಮಾರಂಭ ನಡೆಯಲಿದೆ. ಸರಯೂ ನದಿಯ ದಡದಲ್ಲಿ ‘ದಶವಿಧ’ ಸ್ನಾನ ನಡೆಯಲಿದೆ. ವಿಷ್ಣು ಪೂಜೆ ಮತ್ತು ಗೋದಾನವನ್ನು ಒಳಗೊಂಡಿರುತ್ತದೆ.
- ಜನವರಿ 17 ರಂದು ಬಾಲರಾಮನ ರೂಪದಲ್ಲಿರುವ ರಾಮನ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಭಕ್ತರು ಮಂಗಳ ಕಲಶದಲ್ಲಿ ಸರಯು ಜಲ ತುಂಬಿಸಿ ಮೆರವಣಿಯಲ್ಲಿ ಸಾಗಲಿದ್ದಾರೆ.
- ಜನವರಿ 18 ರಂದು ಗಣೇಶ ಅಂಬಿಕಾ ಪೂಜೆ, ವರುಣನ ಪೂಜೆ, ಮಾತೃಕಾ ಪೂಜೆ, ಬ್ರಾಹ್ಮಣ ವರಣ, ವಾಸ್ತು ಪೂಜೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
- ಜನವರಿ 19 ರಂದು ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನ ಡೆಯಲಿದೆ.
- ಜನವರಿ 20 ರಂದು ರಾಮಮಂದಿರದ ಗರ್ಭಗುಡಿಯನ್ನು ಸರಯುವಿನ ಪವಿತ್ರ ನೀರಿನಿಂದ ತೊಳೆಯಲಾಗುತ್ತದೆ. ಇದಾದ ನಂತರ ವಾಸ್ತು ಶಾಂತಿ, ಅನ್ನದಾನ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
- ಜನವರಿ 21 ರಂದು ರಾಮನ ವಿಗ್ರಹಕ್ಕೆ 125 ಕಲಶಗಳೊಂದಿಗೆ ದೈವಿಕ ಸ್ನಾನ ನೆರವೇರಲಿದೆ.
- 22 ಜನವರಿ ರಂದು ವಿಗ್ರಹಕ್ಕೆ ಪೂಜೆ ನೆರವೇರಲಿದೆ ಮತ್ತು ಮಧ್ಯಾಹ್ನ ಮೃಗಶಿರಾ ನಕ್ಷತ್ರದಲ್ಲಿ ಅಭಿಷೇಕ ನಡೆಯಲಿದೆ. ಶ್ರೀರಾಮಲಲ್ಲಾ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಷ್ಠಾಪಿಸಲಿದ್ದಾರೆ.
ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಅನೇಕ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ಸುಮಾರು 4,000 ಸಂತರು ಮತ್ತು 2,200 ಇತರ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಗಣ್ಯ ವ್ಯಕ್ತಿಗಳ ಆಗಮನ ಹಿನ್ನೆಲೆ ಗುಪ್ತಚರ ತಂಡಗಳು ಅಯೋಧ್ಯೆಯಲ್ಲಿ ಬೀಡು ಬಿಟ್ಟಿದ್ದು ಭದ್ರತೆ ಕುರಿತಂತೆ ಸಿದ್ಧತೆ ಆರಂಭಿಸಿವೆ.
ಶಂಕುಸ್ಥಾಪನೆ ಸಮಾರಂಭದ ಸಂದರ್ಭದಲ್ಲಿ ಇಂಟೆಲಿಜೆನ್ಸ್ ಬ್ಯೂರೋ ಕೃತಕ ಬುದ್ಧಿಮತ್ತೆಯ ಮೂಲಕ ಗುಪ್ತಚರ ಕಣ್ಗಾವಲು ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಶ್ರೀರಾಮ ದೇವಸ್ಥಾನದ ಭದ್ರತೆಗಾಗಿ ಸಮಾರಂಭದ ಸಮಯದಲ್ಲಿ ಮತ್ತು ಭವಿಷ್ಯದಲ್ಲಿ, ಕೃತಕ ಬುದ್ಧಿಮತ್ತೆಯ ಮೂಲಕ ಪ್ರತಿಯೊಂದು ಮೂಲೆ ಮೂಲೆಯ ಮೇಲೆ ಕಣ್ಣಿಡಲು ಮತ್ತು ಪೊಲೀಸ್ ಡೇಟಾಬೇಸ್ನಲ್ಲಿರುವ ಅಪರಾಧಿಗಳ ಮೇಲೆ ನಿಗಾ ಇಡಲು ನೀಲನಕ್ಷೆಯನ್ನು ಸಿದ್ಧಪಡಿಸಲಾಗುತ್ತಿದೆ. ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಸಿದ್ಧತೆ ನಡೆದಿದೆ.