ಮಡಿಕೇರಿ:ಮೂಲಭೂತ ಸೌಕರ್ಯವಿಲ್ಲದೇ ಕುಗ್ಗಿದ ಜನ- ಪಯಸ್ವಿನಿ ನದಿಗೆ ಬಿದಿರಿನ ಸೇತುವೆ ಸಂಕಷ್ಟ
ಮಡಿಕೇರಿ: ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇವರಿಗೆ ಮಾತ್ರ ಇಂದಿಗೂ ಮೂಲಭೂತ ಸೌಕರ್ಯಗಳನ್ನು ನೀಡದೇ ಇರುವುದರಿಂದ ಸಂಕಷ್ಟದ ಬದುಕು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ವರ್ಷಗಳಿಂದ ಆ ಕಾಡಿನಲ್ಲೇ ವಾಸ ಇರುವ ಕಾರಣ ಜನರಿಗೆ ರಸ್ತೆ ವಿದ್ಯುತ್ ಇಲ್ಲದೇ ಪರಿತಪ್ಪಿಸುತ್ತಿದ್ದಾರೆ.
ಹೌದು. ಕೊಡಗು (Kodagu) ಜಿಲ್ಲೆಯ ಸಂಪಾಜೆ (Sampaje) ಗ್ರಾ.ಪಂ ವ್ಯಾಪ್ತಿಯ ಬಂಡಡ್ಕ ಗ್ರಾಮದಲ್ಲಿ (Bandadka) ಸುಮಾರು ನೂರಾರು ವರ್ಷಗಳಿಂದ ಐದು ಮನೆಯ ಕುಟುಂಬ ಸದಸ್ಯರು ಜೀವನ ನಡೆಸುತ್ತಿದ್ದಾರೆ. ಇವರಿಗೆ ಈವರೆಗೂ ರಸ್ತೆ ಆಗಲಿ, ವಿದ್ಯುತ್ ಸೌಕರ್ಯವಾಗಲಿ ಸಿಕ್ಕಿಲ್ಲ. ಅದರಲ್ಲೂ ಪ್ರತಿ ಮಳೆಗಾಲದ (Rain) ಸಂದರ್ಭದಲ್ಲಿ ಅನಾರೋಗ್ಯ ಸಮಸ್ಯೆ ಉಂಟಾದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಗದ ಪರಿಸ್ಥಿತಿ ನಿರ್ಮಾಣವಾಗುತ್ತೆ. ಇಲ್ಲಿನ ಮಕ್ಕಳು ಮಳೆಗಾಲ ಅರಂಭವಾಗಿ ಮಳೆ ಕಡಿಮೆ ಅಗುವವರೆಗೂ ಶಾಲಾ-ಕಾಲೇಜು, ಅಂಗನವಾಡಿಗಳಿಗೂ ತೆರಳದೇ ಮನೆಯಲ್ಲೇ ಇರುವ ಪರಿಸ್ಥಿತಿ ಇದೆ. ತುರ್ತು ಪರಿಸ್ಥಿತಿ ಎದುರಾದ್ರೆ ಇಲ್ಲಿನ ಜನ ಈ ಪಯಸ್ವಿನಿ ನದಿಗೆ (Payaswini River) ಅಡ್ಡಲಾಗಿ ಕಟ್ಟಿದ ಹಗ್ಗವನ್ನು ಹಿಡಿದು ಜೀವದ ಹಂಗು ತೊರೆದು ದಾಟುವ ಸ್ಥಿತಿ ಇದೆ.
ಈ ಬಂಡಡ್ಕ ಗ್ರಾಮದ ಜನರು ಅರಣ್ಯ ಪ್ರದೇಶದಲ್ಲಿ ವಾಸ ಇದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಇಂದಿಗೂ ಇವರಿಗೆ ಸರ್ಕಾರದಿಂದ ಯಾವ ಸೌಲಭ್ಯಗಳು ಸಿಕ್ಕಿಲ್ಲ. ಕೇವಲ ಇವರ ಬಳಿ ಹಕ್ಕು ಪತ್ರ ಮಾತ್ರ ಇದೆಯೇ ಹೊರತು ಬೇರೆ ಯಾವ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಮಳೆಗಾಲದ ಸಂದರ್ಭ ನ್ಯಾಯಬೆಲೆ ಅಂಗಡಿಗೆ ಹೋಗಿ ರೇಷನ್ ತರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿ ಮಳೆಗಾಲದ ಸಂದರ್ಭದಲ್ಲಿ ಶಂಖಪಾಲ ಸೇತುವೆ ಮಾಡಿಕೊಳ್ಳಲು 20 ಸಾವಿರ ಹಣವನ್ನ ಗ್ರಾ.ಪಂ. ನೀಡುತ್ತೆ. ಆದರೆ ಜೋರು ಮಳೆ ಬರುವ ಸಂದರ್ಭದಲ್ಲಿ ಬಿದಿರಿನಿಂದ ಮಾಡಿರುವ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಹೀಗಾಗಿ ಮಳೆಗಾಲ ಕಳೆಯುವವರೆಗೂ ಇಲ್ಲಿನ ನಿವಾಸಿಗಳು ಹೊರ ಜಗತ್ತಿಗೆ ಬರೋದೆ ಇಲ್ಲ. ಒಟ್ಟಿನಲ್ಲಿ ಆಧುನಿಕ ಜಗತ್ತು ಬೆಳೆಯುತ್ತಿದ್ದರೂ ಇಲ್ಲಿಯ ಜನಗಳಿಗೆ ಮಾತ್ರ ಅಧುನಿಕತೆಯೊಂದಿಗೆ ಮೂಲಭೂತ ಸೌಕರ್ಯ ನೀಡದೇ ಇರುವುದು ಅಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.