- ರಾಷ್ಟ್ರೀಯ
- 3:02 ಅಪರಾಹ್ನ
- ನವೆಂಬರ್ 17, 2023
LPG ಸಿಲಿಂಡರ್ ಬೆಲೆ 57.5 ಇಳಿಕೆ ; ಇಲ್ಲಿದೆ ಪರಿಷ್ಕೃತ ದರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies) ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿವೆ. 19 ಕೆ.ಜಿ ತೂಕದ ವಾಣಿಜ್ಯಿಕ ಎಲ್ಪಿಜಿ ಸಿಲಿಂಡರ್ಗಳ (Commercial LPG Cylinders) ಬೆಲೆಯನ್ನು (LPG Price) ತೈಲ ಮಾರುಕಟ್ಟೆ ಕಂಪನಿಗಳು 57.5 ರೂ. ಇಳಿಕೆ ಮಾಡಲಿವೆ. ಇದರಿಂದಾಗಿ ವಾಣಿಜ್ಯ ಉದ್ದೇಶಗಳಿಗಾಗಿ ಎಲ್ಪಿಜಿ ಸಿಲಿಂಡರ್ ಬಳುಸವವರಿಗೆ ಅನುಕೂಲವಾಗಲಿದೆ. ಹಾಗೆಯೇ, ಹೋಟೆಲ್ಗಳಲ್ಲಿ ತಿಂಡಿ, ಊಟಗಳ ಬೆಲೆ ಇಳಿಕೆ ಸೇರಿ ಗ್ರಾಹಕರಿಗೂ ಹಲವು ರೀತಿಯಲ್ಲಿ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ. ನವೆಂಬರ್ 16ರಿಂದಲೇ ನೂತನ ದರ ಜಾರಿಗೆ ಬಂದಿದೆ.
ನಾಲ್ಕು ನಗರಗಳಿಗೆ ಮಾತ್ರ ಅನ್ವಯ
ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಮಾತ್ರ ವಾಣಿಜ್ಯಿಕ ಸಿಲಿಂಡರ್ಗಳ ಬೆಲೆ ಇಳಿಕೆಯಾಗಿದೆ. ದೆಹಲಿ, ಮುಂಬೈ, ಕೋಲ್ಕೊತಾ ಹಾಗೂ ಚೆನ್ನೈನಲ್ಲಿ 57.5 ರೂ. ಇಳಿಕೆಯಾಗಿದೆ. ದೀಪಾವಳಿಗೂ ಮೊದಲು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ 101.5 ರೂ. ಏರಿಕೆಯಾಗಿತ್ತು. ಈಗ ದೀಪಾವಳಿ ಹಬ್ಬ ಮುಗಿದ ಮರುದಿನವೇ ಸಿಲಿಂಡರ್ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಇಳಿಕೆ ಮಾಡಿವೆ.
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಇಳಿಕೆ ಬಳಿಕ ನವದೆಹಲಿಯಲ್ಲಿ 19 ಕೆ.ಜಿಯ ಒಂದು ಸಿಲಿಂಡರ್ಗೆ 1,775.5 ರೂ., ಕೋಲ್ಕೊತಾದಲ್ಲಿ 1,885.5 ರೂ., ಮುಂಬೈನಲ್ಲಿ 1,728 ರೂ. ಹಾಗೂ ಚೆನ್ನೈನಲ್ಲಿ 1,942 ರೂ. ಇದೆ. ಅಕ್ಟೋಬರ್ನಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 209 ರೂ. ಏರಿಕೆ ಮಾಡಲಾಗಿತ್ತು. ನವೆಂಬರ್ ಆರಂಭದಲ್ಲೂ 101 ರೂ. ಏರಿಕೆ ಮಾಡಿದ್ದು ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಭಾರಿ ತೊಂದರೆಯಾಗಿತ್ತು. ಈಗ ಬೆಲೆಯನ್ನು ತುಸು ಇಳಿಸಿರುವುದು ನಿಟ್ಟುಸಿರು ಬಿಡುವಂತಾಗಿದೆ.
ಅಡುಗೆ ಅನಿಲ ಸಿಲಿಂಡರ್ ಬೆಲೆ ಯಥಾಸ್ಥಿತಿ
ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ದಸರಾಗೂ ಮುನ್ನವೇ ಕೇಂದ್ರ ಸರ್ಕಾರವು ಎಲ್ಪಿಜಿ ಸಿಲಿಂಡರ್ಗೆ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು 300 ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಆಗುತ್ತಿದ್ದ ಹೊರೆಯು ತುಸು ಕಡಿಮೆಯಾದಂತಾಗಿದೆ. ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 905 ರೂ. ಇದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1,857 ರೂ. ಇದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಇನ್ನಷ್ಟು ಇಳಿಕೆ ಮಾಡಲಿದೆ ಎಂದೇ ಹೇಳಲಾಗುತ್ತಿದೆ.
ಬ್ಯಾಂಕ್ ನೌಕರರ ಮುಷ್ಕರ: ಡಿಸೆಂಬರ್, ಜನವರಿಯ ಈ ದಿನಗಳಲ್ಲಿ ನಿಮ್ಮ ಕೆಲಸ ಆಗೋಲ್ಲ
ಹೊಸದಿಲ್ಲಿ: ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (AIBEA) ಡಿಸೆಂಬರ್ 4ರಿಂದ ರಾಷ್ಟ್ರವ್ಯಾಪಿ ಮುಷ್ಕರಗಳ ಸರಣಿಯನ್ನು (Bank Employees Strike) ಘೋಷಿಸಿದೆ. ಮುಷ್ಕರದ ದಿನಾಂಕಗಳು ಜನವರಿ 20ರವರೆಗೆ ವಿಸ್ತರಿಸಿದೆ. ಈ ಮುಷ್ಕರಗಳು ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳಿಗೂ ವಿಸ್ತರಿಸಿದ್ದು, ರಾಷ್ಟ್ರವ್ಯಾಪಿ ಹಲವಾರು ಬ್ಯಾಂಕ್ಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
ಸಂಘಟನೆಯ ಅಧಿಸೂಚನೆಯ ಪ್ರಕಾರ, ಡಿಸೆಂಬರ್ನಲ್ಲಿ ಆರು ದಿನ ಹಾಗೂ ಜನವರಿಯಲ್ಲಿ ಏಳು ದಿನಗಳ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಆ ಮುಷ್ಕರದ ದಿನಾಂಕಗಳಂದು ವಿವಿಧ ಬ್ಯಾಂಕ್ಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಆಗಲಿದೆ. ನಿಮ್ಮ ಖಾತೆಯಿರುವ ಬ್ಯಾಂಕ್ನ ಸಿಬ್ಬಂದಿ ಯಾವಾಗ ಮುಷ್ಕರ ಮಾಡಲಿದ್ದಾರೆ ತಿಳಿದುಕೊಳ್ಳಿ.
ಡಿಸೆಂಬರ್
ಡಿಸೆಂಬರ್ 4ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಪಂಜಾಬ್ & ಸಿಂಧ್ ಬ್ಯಾಂಕ್ಗಳ ಸಿಬ್ಬಂದಿ ಮುಷ್ಕರ ಹೂಡಲಿದ್ದಾರೆ. ಡಿಸೆಂಬರ್ 5ರಂದು ಬ್ಯಾಂಕ್ ಆಫ್ ಬರೋಡಾ ಮತ್ತು ಬ್ಯಾಂಕ್ ಆಫ್ ಇಂಡಿಯಾ, ಡಿಸೆಂಬರ್ 6ರಂದು ಕೆನರಾ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಡಿಸೆಂಬರ್ 7ರಂದು ಇಂಡಿಯನ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್, ಡಿಸೆಂಬರ್ 8ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ, ಡಿಸೆಂಬರ್ 11ರಂದು ಖಾಸಗಿ ಬ್ಯಾಂಕ್ಗಳ ಸಿಬ್ಬಂದಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ.
ಜನವರಿ
ಜನವರಿ 2ರಂದು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಪುದುಚೇರಿ, ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ಜನವರಿ 3 ಗುಜರಾತ್, ಮಹಾರಾಷ್ಟ್ರ, ಗೋವಾ, ದಾದರ್, ದಮನ್ ಮತ್ತು ದಿಯು ಬ್ಯಾಂಕ್ ಮುಷ್ಕರಕ್ಕೆ ಸಾಕ್ಷಿಯಾಗಲಿದೆ. ಜನವರಿ 4ರಂದು ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದ ಎಲ್ಲಾ ಬ್ಯಾಂಕ್ಗಳಲ್ಲಿ ಮುಷ್ಕರಗಳು ನಡೆಯಲಿವೆ. ಜನವರಿ 5ರಂದು ದೆಹಲಿ, ಪಂಜಾಬ್, ಹರಿಯಾಣ, ಜಮ್ಮು-ಕಾಶ್ಮೀರ, ಲಡಾಖ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಎಲ್ಲಾ ಬ್ಯಾಂಕ್ಗಳನ್ನು ಮುಚ್ಚಲಾಗುತ್ತದೆ. ಜನವರಿ 6ರಂದು ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಅಸ್ಸಾಂ, ತ್ರಿಪುರಾ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಮುಷ್ಕರ ನಡೆಯಲಿದೆ. ಜನವರಿ 19 ಮತ್ತು 20ರಂದು ದೇಶಾದ್ಯಂತ ಎಲ್ಲಾ ಬ್ಯಾಂಕ್ಗಳ ನೌಕರರು ಮುಷ್ಕರ ನಡೆಸಲಿದ್ದಾರೆ.
ಎಲ್ಲಾ ಬ್ಯಾಂಕ್ಗಳಲ್ಲಿ ಸಾಕಷ್ಟು ಸಿಬ್ಬಂದಿ ನೇಮಕಾತಿ ಮಾಡುವುದು, ಬ್ಯಾಂಕಿಂಗ್ ವಲಯದಲ್ಲಿ ಕಾಯಂ ಉದ್ಯೋಗಗಳನ್ನು ಹೊರಗುತ್ತಿಗೆ ನೀಡುವಿಕೆ ನಿಲ್ಲಿಸುವುದು ಮುಷ್ಕರದ ಬೇಡಿಕೆಗಳಾಗಿವೆ. ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಅವರು, ಕೆಲವು ಬ್ಯಾಂಕ್ಗಳಿಂದ ಉದ್ಯೋಗಗಳ ಹೊರಗುತ್ತಿಗೆ ನೀಡುವ ಕ್ರಮ ಗ್ರಾಹಕರ ಗೌಪ್ಯತೆ ಮತ್ತು ಹಣಕಾಸು ನಿಧಿಗೆ ಅಪಾಯವನ್ನುಂಟುಮಾಡುತ್ತದೆ ಮಾತ್ರವಲ್ಲದೆ ಕೆಳ ಹಂತಗಳಲ್ಲಿ ನೇಮಕಾತಿಯಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಒತ್ತಿಹೇಳಿದ್ದಾರೆ.
ಕೆಲವು ಬ್ಯಾಂಕ್ಗಳು ಕೈಗಾರಿಕಾ ವಿವಾದಗಳ (ತಿದ್ದುಪಡಿ) ಕಾಯಿದೆಯನ್ನು ಉಲ್ಲಂಘಿಸುತ್ತಿವೆ. ಕಾರ್ಮಿಕ ಅಧಿಕಾರಿಗಳ ಹಸ್ತಕ್ಷೇಪದ ಹೊರತಾಗಿಯೂ ಕೈಗಾರಿಕಾ ವಿವಾದಗಳ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಮತ್ತು ಉದ್ಯೋಗಿಗಳ ಮೇಲೆ ಅನೈಚ್ಛಿಕ ವರ್ಗಾವಣೆಯನ್ನು ಹೇರಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿದ್ದಾರೆ.