ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕೈ ಪೂರ್ವ ತಯಾರಿ
ಬೆಂಗಳೂರು: ಲೋಕಸಭೆ ಚುನಾವಣೆಗೆ ಹಂತಹಂತವಾಗಿ ತಯಾರಿ ನಡೆಸಿರುವ ರಾಜ್ಯ ಕಾಂಗ್ರೆಸ್ ಭಾನುವಾರ ಪ್ರಚಾರ ಸಮಿತಿ ಸಭೆ ಕರೆದಿದೆ.
ವಿಧಾನಸಭೆ ಚುನಾವಣೆಗೆ ಮುನ್ನ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ರಚನೆಗೊಂಡಿದ್ದ ಪ್ರಚಾರ ಸಮಿತಿ ಪಕ್ಷದ ಗೆಲುವಿಗೆ ಶ್ರಮ ಹಾಕಿತ್ತು. ಈ ತಂಡವನ್ನು ಪುನಃ ಸಕ್ರಿಯಗೊಳಿಸಲು ಕೆಪಿಸಿಸಿ ಉದ್ದೇಶಿಸಿದೆ.
ಇದೇ ಉದ್ದೇಶದಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯ ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ.
ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ ಬಿ ಪಾಟೀಲ್ ಮತ್ತು ಪಕ್ಷದ ಹಿರಿಯ ನಾಯಕರುಗಳು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ಸೂಚನೆಗಳನ್ನು ತಮ್ಮತಂಡಕ್ಕೆ ರವಾನಿಸಲಿದ್ದಾರೆ.
ಗುತ್ತಿಗೆದಾರರ ಸಮಾಧಾನ ಪಡಿಸಲು ಎರಡು ಸೂತ್ರ; 80:20 ಅನುಪಾತದಲ್ಲಿ ಪಾವತಿ
ಬೆಂಗಳೂರು: ಬಾಕಿ ಪಾವತಿಗೆ ತಡೆ ಹಾಕಿದ್ದ ಹೊಸ ಸರ್ಕಾರದ ವಿರುದ್ಧ ಸೆಟೆದುನಿಂತ ಗುತ್ತಿಗೆದಾರರನ್ನು ಸಮಾಧಾನಪಡಿಸುವ ಕಾರ್ಯ ಆರಂಭವಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮಾಡಲು ಎರಡು ಕಾರಣಗಳಿಗೆ ಸರ್ಕಾರ ಹಿಂದೇಟು ಹಾಕಿತ್ತು. ಸರ್ಕಾರ ರಚನೆಯಾಗಿ ನೂರು ದಿನ ಕಳೆದರೂ ಹಳೇ ಬಿಲ್ ಪಾವತಿ ಮಾಡಲು ಹಠಮಾಡಿತ್ತು. ಗುತ್ತಿಗೆದಾರರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಬಳಿಕ ಸರ್ಕಾರ ಮಾತುಕತೆಗೆ ಆಹ್ವಾನಿಸಿತ್ತು.
ಶೇ.40 ಪರ್ಸೆಂಟ್ ಕಮೀಷನ್ ಆರೋಪ ವಿಚಾರವಾಗಿ ಹಿಂದಿನ ಸರ್ಕಾರದ ಕೊನೆ ಘಟ್ಟದಲ್ಲಿ ಚಲಾವಣೆಯಲ್ಲಿದ್ದ ಗುತ್ತಿಗೆದಾರರು ಹೊಸ ಸರ್ಕಾರದ ಮೊದಲ ನೂರು ದಿನದಲ್ಲೂ ಸದ್ದು ಮಾಡಿದ್ದರು. ಬಾಕಿ ಹಣ ಬಿಡುಗಡೆಗೆ ಕಮೀಷನ್ ಕೇಳಲಾಗುತ್ತಿದೆ ಎಂದು ಆರೋಪ ಮಾಡಿ ಕೊನೆಗೆ ಒತ್ತಡಕ್ಕೆ ಸಿಲುಕಿ ಮಾತು ಹಿಂಪಡೆದುಕೊಂಡಿದ್ದರು.
ಗುತ್ತಿಗೆದಾರರಿಗೆ ಬಾಕಿ ಬಿಲ್ ಬಿಡುಗಡೆ ವಿಷಯದಲ್ಲಿ ಆಡಳಿತ ಪಕ್ಷದ ಶಾಸಕರೇ ದನಿ ಎತ್ತಿ ಬಾಕಿ ಪಾವತಿ ಮಾಡಿ, ಗುತ್ತಿಗೆದಾರರು ದಿನ ಬೆಳಗಾದರೆ ನಮ್ಮ ಮನೆ ಬಾಗಿಲಿಗೆ ಬಂದು ಬಾಕಿ ಬಿಡುಗಡೆ ಮಾಡಿಸುವಂತೆ ಒತ್ತಡ ತರುತ್ತಿದ್ದಾರೆ ಎಂದು ಪಕ್ಷದ ವೇದಿಕೆಯಲ್ಲಿ ತಮ್ಮ ಮೇಲಿರುವ ಒತ್ತಡದ ಬಗ್ಗೆ ಪ್ರಸ್ತಾಪಿಸಿದ್ದರು.
ಗ್ಯಾರಂಟಿ ಯೋಜನೆಗಳು ಒಂದೊಂದಾಗಿ ಜಾರಿಯಾಗುತ್ತಿದ್ದಂತೆ ಸರ್ಕಾರ ದೊಡ್ಡ ಮಟ್ಟದಲ್ಲಿ ಹಣ ಹೊಂದಿಸುವ ಸವಾಲು ಎದುರಿಸಿತು. ಗೃಹಜ್ಯೋತಿ ಯೋಜನೆ ಲಾನುಭವಿಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡಿದ ಬಾಬ್ತು ಎಸ್ಕಾಂಗಳಿಗೆ, ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕಾಗಿ ಸಾರಿಗೆ ನಿಗಮಗಳಿಗೆ, ಅನ್ನ ಭಾಗ್ಯ ಯೋಜನೆ ಲಾನುಭವಿಗಳ ಖಾತೆಗೆ ಹಣ ಹಾಕಲು ಮತ್ತು ಇದೀಗ ಗೃಹಲಕ್ಷ್ಮೀ ಯೋಜನೆ ಲಾನುಭವಿಗಳಿಗೆ ಮೊದಲ ಕಂತಿನ ಹಣ ಹಾಕಲು ಸರ್ಕಾರ ಆದಾಯವನ್ನು ಭದ್ರ ಮಾಡಿಕೊಂಡಿತ್ತು. ಇದೀಗ ಒಂದು ಹಂತ ದಾಟುತ್ತಿದ್ದಂತೆ ಗುತ್ತಿಗೆದಾರರತ್ತ ಗಮನ ಹರಿಸಿದೆ.
ಗುತ್ತಿಗೆದಾರರ ಹಣ ಬಿಡುಗಡೆಗೆ ಎರಡು ಪರಿಹಾರ ಸೂತ್ರ ಕಂಡುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಎಒಸಿ ಬಿಡುಗಡೆಯಾದ ಪ್ರಕರಣಗಳಲ್ಲಿ ಶೇ.75ರಷ್ಟು ಹಣ ಬಿಡುಗಡೆ ಮಾಡುವುದು, ಉಳಿದ ಶೇ.25ರಷ್ಟನ್ನು ನಂತರ ಬಿಡುಗಡೆ ಮಾಡುವುದು, ಲಭ್ಯ ಅನುದಾನದಲ್ಲಿ ಶೇ.80ರಷ್ಟನ್ನು ಜ್ಯೇಷ್ಠತೆ ಆಧಾರದಲ್ಲಿ, ಶೇ.20ರಷ್ಟನ್ನು ಸಚಿವರ ವಿವೇಚನ ಕೋಟಾದಡಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆದಾರರ ವಿರುದ್ಧ ತನಿಖೆ ನಡೆಯುತ್ತಿದ್ದು, ಕಾಮಗಾರಿ ಕುರಿತು ಭಾಗಶಃ ಮಾಹಿತಿ ಕಲೆ ಹಾಕಲಾಗಿದೆ. ನೂರಾರು ಪ್ರಕರಣಗಳಲ್ಲಿ ಕಾಮಗಾರಿ ನಡೆಯದೇ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿತ್ತು. ಅಂತಹ ದೂರುಗಳಿರುವ ಕಡೆ ಮತ್ತು ಆಡಳಿತ ಪಕ್ಷದ ಶಾಸಕರಿರುವ ಕಡೆ ಗುತ್ತಿಗೆದಾರರ ಬಾಕಿ ಪಾವತಿ ಮಾಡಲು ಆದ್ಯತೆ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಗುತ್ತಿಗೆದಾರರು ಹಾಗೂ ಶಾಸಕರ ನಡುವೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೊಂದಾಣಿಕೆಗಳಿರುತ್ತವೆ. ಒಂದು ವೇಳೆ ಗುತ್ತಿಗೆದಾರರು ತಿರುಗಿಬಿದ್ದರೆ ಸಮಸ್ಯೆಯಾಗುತ್ತದೆ, ಅಲ್ಲದೇ ಗುತ್ತಿಗೆದಾರರು ಸಂಘಟಿತರಾಗಿ ಹೋರಾಟಕ್ಕಿಳಿದರೆ ಗೊಂದಲ ಸೃಷ್ಟಿಯಾಗಲಿದೆ ಎಂಬ ಅಭಿಪ್ರಾಯ ಸರ್ಕಾರದಲ್ಲಿ ಚರ್ಚೆಯೂ ಆಗಿತ್ತು. ಇದಿಗ ಸರ್ಕಾರ ಹಣ ಪಾವತಿಗೆ ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಗುರುವಾರದಿಂದ ಹಣ ಬಿಡುಗಡೆ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ, ಸರ್ಕಾರದ ನಿರ್ಧಾರಕ್ಕೆ ಸ್ವಾಗತ. ಎಷ್ಟು ಹಣ ಪಾವತಿ ಮಾಡಿದ್ದಾರೆಂಬುದು ಶೀಘ್ರವೇ ಬಹಿರಂಗವಾಗಲಿದೆ. ಶೇ.75ರಷ್ಟು ಹಣ ನೀಡುತ್ತಿದ್ದಾರೆಂದು ಗೊತ್ತಾಗಿದೆ ಎಂದಿದ್ದಾರೆ. ಜಲಸಂಪನ್ಮೂಲ ಇಲಾಖೆ- 2935.74 ಕೋಟಿ ರೂ., ಲೋಕೋಪಯೋಗಿ ಇಲಾಖೆ- 12,585 ಕೋಟಿ ರೂ. ಸಣ್ಣ ನೀರಾವರಿ- 7503 ಕೋಟಿ ಕೋಟಿ ರೂ. ಸೇರಿ ಒಟ್ಟು ಒಟ್ಟು- 23,023.74 ಕೋಟಿ ರೂ. ಪಾವತಿಗೆ ಬಾಕಿ ಇದೆ.