ಕರೆಂಟ್ ಹೊಡೆದು ಕಂಬದಲ್ಲೇ ಒದ್ದಾಡಿ ಪ್ರಾಣಬಿಟ್ಟ ಜೆಸ್ಕಾಂ ಲೈನ್ಮ್ಯಾನ್!
ರಾಯಚೂರು (ಜೂ.04): ವಿದ್ಯುತ್ ಕಂಬವನ್ನು ಹತ್ತಿ ದುರಸ್ತಿ ಕಾರ್ಯವನ್ನು ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಉಂಟಾಗಿ ಜೆಸ್ಕಾಂ ಲೈನ್ಮನ್ ಕಂಬದ ಮೇಲೆಯೇ ಸಾವನ್ನಪ್ಪಿದ ದುರ್ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಆಲದಮರ ತಾಂಡದಲ್ಲಿ ಭಾನುವಾರ ನಡೆದಿದೆ.
ಇನ್ನು ವಿದ್ಯುತ್ ಲೈನ್ ದುರಸ್ತಿಗಾಗಿ ಏಣಿಯನ್ನು ಇಟ್ಟುಕೊಂಡು ಕಂಬವನ್ನು ಹತ್ತಿ, ಲೈನ್ ಮ್ಯಾನ್ ಉರಸ್ತಿ ಕಾರ್ಯವನ್ನು ಮಾಡುತ್ತಿದ್ದರು. ಕಂಬವನ್ನು ಹತ್ತುವ ವೇಳೆ ವಿದ್ಯುತ್ ಸರಬರಾಜು ಸ್ಥಗಿತ ಮಾಡಲಾಗಿತ್ತು. ಆದರೆ, ದುರಸ್ತಿ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಸರಬರಾಜು ಮಾಡಲಾಗಿದ್ದು, ಕಂಬದ ಮೇಲೆಯೇ ಶಾಕ್ ಹೊಡೆದು ಲೈನ್ಮ್ಯಾನ್ ದುರಂತವಾಗಿ ಸಾವನ್ನಪ್ಪಿದ್ದಾರೆ. ಲೈನ್ ಮ್ಯಾನ್ ಸಾವು (Line Man death) ನೋಡಿದ ಸ್ಥಳೀಯರು ಜೆಸ್ಕಾಂ ಇಂಜಿನಿಯರ್ ಗೆ (GESCOM Engineer) ಫೋನ್ ಮಾಡಿದ್ದಾರೆ. ಸುಮಾರು ಗಂಟೆಗಳಾದರೂ ಜೆಸ್ಕಾಂ ಸಿಬ್ಬಂದಿ ಬಂದು ಲೈನ್ಮ್ಯಾನ್ ಮೃತದೇಹವನ್ನೂ ಕೆಳಗಿಳಸದೇ ನಿರ್ಲಕ್ಷ್ಯ ತೋರಿದ್ದಾರೆ.
ಇನ್ನು ಭಾನುವಾರ ಆದ್ದರಿಂದ ರಜೆಯ ಮೂಡ್ನಲ್ಲಿದ್ದ ಜೆಸ್ಕಾಂ ಇಂಜಿನಿಯರ್ ಘಟನಾ ಸ್ಥಳಕ್ಕೆ ಬರಲು ಗಂಟೆಗಟ್ಟಲೆ ವಿಳಂಬ ಮಾಡಿದ್ದಾರೆ. ಸ್ಥಳಕ್ಕೆ ಬಂದ ಇಂಜಿನಿಯರ್ ಲೈನ್ಮ್ಯಾನ್ ಸಾವನ್ನಪ್ಪಿದ್ದರೂ ಉಡಾಫೆ ಮಾತುಗಳು ಆಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಇಂಜಿನಿಯರ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಇನ್ನು ಘಟನೆಕೈ ಮೀರಿ ಹೋಗುವುದನ್ನು ಗಮನಿಸಿದ ದೇವದುರ್ಗ ಠಾಣೆ ಪೊಲೀಸರು (Devadurga Police station) ಕೂಡಲೇ ಮಧ್ಯೆ ಪ್ರವೇಶ ಮಾಡಿ ಜೆಸ್ಕಾಂ ಇಂಜಿನಿಯರ್ ನನ್ನ ಬಚಾವ್ ಮಾಡಿದ್ದಾರೆ.
ಇತ್ತ ಘಟನೆ ನಡೆದು ನಾಲ್ಕೈದು ಘಂಟೆಯಾದರೂ ಶವವನ್ನ ಕೆಳಗೆ ಇಳಿಸದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರೂಪಾಕ್ಷಿ (28 ) ಮೃತ ಲೈನ್ಮನ್ ಆಗಿದ್ದಾರೆ. ಕರೆಂಟ್ ಬಂದ್ ಮಾಡಿ ವಿದ್ಯುತ್ ಸಮಸ್ಯೆ ಸರಿಪಡಿಸಲು ಕಂಬ ಹತ್ತಿದ್ದರು. ಆದರೆ, ಈ ವೇಳೆ ಯಾವುದೇ ಮಾಹಿತಿ ಇಲ್ಲದೇ ಕರೆಂಟ್ ಹರಿಬಿಟ್ಟಿದ್ದಕ್ಕೆ ದುರ್ಘಟನೆ ನಡೆದಿದೆ. ಜೂಟಮರಡಿ ಜೆಸ್ಕಾಂ ಉಪ ಕೇಂದ್ರಯಲ್ಲಿ ಕೆಲಸ ಮಾಡುತ್ತಿದ್ದ ವಿರೂಪಾಕ್ಷಿ ಸಾವಿನಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಜೆಸ್ಕಾಂ ಕಿರಿಯ ಅಭಿಯಂತರ ಮೇಲೆ ಜನ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಸಿರವಾರ- ದೇವದುರ್ಗ ರಸ್ತೆ (Sirivara – Devadurga Road) ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಕೂಡಲೇ ಸ್ಥಳಕ್ಕೆ ದೇವದುರ್ಗ ಶಾಸಕ ಕರೆಮ್ಮ. ಜಿ. ನಾಯಕ (MLA Karemma G Nayaka) ಬರಬೇಕು ಎಂದು ಪಟ್ಟು ಹಿಡಿದು ರಸ್ತೆ ಮೇಲೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು