ಜನತಾ ಪಕ್ಷದ ಶಾಸಕ ಈಶ್ವರ್ ಸಿಂಗ್ ಅವರಿಗೆ ಮಹಿಳೆಯಿಂದ ಕಪಾಳಮೋಕ್ಷ
ಚಂಡೀಗಢ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಜನನಾಯಕ್ ಜನತಾ ಪಕ್ಷದ ಶಾಸಕ ಈಶ್ವರ್ ಸಿಂಗ್ ಅವರಿಗೆ ಮಹಿಳೆಯೊಬ್ಬಳು ಕಪಾಳಮೋಕ್ಷ ಮಾಡಿರುವ ಘಟನೆ ಹರಿಯಾಣದಲ್ಲಿ (Haryana) ನಡೆದಿದೆ.
ಮಳೆಯಿಂದ (Rain) ಪ್ರವಾಹ ಉಂಟಾಗಿದ್ದ ಕೈತಾಲ್ನ ಗುಹ್ಲಾ ಪ್ರದೇಶಕ್ಕೆ ಶಾಸಕರು ತೆರಳಿದ್ದರು. ಈ ವೇಳೆ ಕಳಪೆ ಒಳಚರಂಡಿ ವ್ಯವಸ್ಥೆಯಿಂದಾಗಿ ಈ ಪ್ರವಾಹ ಸೃಷ್ಟಿಯಾಗಿದೆ. ಅಲ್ಲದೇ ಶಾಸಕರ ಭೇಟಿ ತಡವಾಗಿದೆ ಎಂದು ಮಹಿಳೆ ಆರೋಪಿಸಿದ್ದಾಳೆ. ಅಲ್ಲದೇ ಭದ್ರತಾ ಸಿಬ್ಬಂದಿಯನ್ನು ಹಾಗೂ ಶಾಸಕರನ್ನು (MLA) ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಮಹಿಳೆ ಮತ್ತು ಸ್ಥಳೀಯರು ನೀವು ಈಗ ಏಕೆ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ, ಮಹಿಳೆಯನ್ನು ಕ್ಷಮಿಸಿದ್ದೇನೆ. ಮಹಿಳೆಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
#WATCH | Haryana: In a viral video, a flood victim can be seen slapping JJP (Jannayak Janta Party) MLA Ishwar Singh in Guhla as he visited the flood affected areas
— ANI (@ANI) July 12, 2023
"Why have you come now?", asks the flood victim pic.twitter.com/NVQmdjYFb0
ಹರಿಯಾಣದಲ್ಲಿ ನಿರಂತರ ಮಳೆಯಿಂದ ಉಂಟಾಗಿರುವ ಪ್ರವಾಹದಿಂದಾಗಿ 10 ಜನರು ಸಾವನ್ನಪ್ಪಿದ್ದಾರೆ. ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ. ಆದರೆ ಸಾವು ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆ ಪೀಡಿತ ಪ್ರದೇಶಗಳಲ್ಲಿ ಖಟ್ಟರ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ನಾಲ್ಕು ದಿನಗಳಿಂದ ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ನಲ್ಲಿ ನಿರಂತರ ಮಳೆಯ ಪರಿಣಾಮ ಹರಿಯಾಣದಲ್ಲಿನ ಪ್ರವಾಹಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಭಾರತದಲ್ಲಿ 20 ಲಕ್ಷಕ್ಕೆ ಕಾರು – ಕೇಂದ್ರದ ಜೊತೆ ಟೆಸ್ಲಾ ಮಾತುಕತೆ
ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಘಟಕ (Electric Car Manufacturing Plant) ನಿರ್ಮಾಣ ಸಂಬಂಧ ಎಲಾನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla) ಕಂಪನಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದೆ.
ವಾರ್ಷಿಕ 5 ಲಕ್ಷ ಎಲೆಕ್ಟ್ರಿಕ್ ವಾಹನ ತಯಾರಿಸುವ ಸಾಮರ್ಥ್ಯದ ಘಟಕ ಸ್ಥಾಪನೆ ಸಂಬಂಧ ಹೂಡಿಕೆಯ ಪ್ರಸ್ತಾಪಕ್ಕಾಗಿ ಟೆಸ್ಲಾ ಭಾರತ ಸರ್ಕಾರದೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಭಾರತದಲ್ಲಿ ತಯಾರಾಗುವ ಎಲೆಕ್ಟ್ರಿಕ್ ಕಾರಿನ ಬೆಲೆ 20 ಲಕ್ಷ ರೂ. ನಿಂದ ಆರಂಭವಾಗುವ ಸಾಧ್ಯತೆಯಿದೆ. ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳಿಗೆ ಭಾರತದಿಂದ (India) ಕಾರುಗಳನ್ನು ರಫ್ತು ಮಾಡಲು ಟೆಸ್ಲಾ ಮುಂದಾಗಿದೆ ಎಂದು ವರದಿಯಾಗಿದೆ.
ಕಳೆದ ತಿಂಗಳು ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಮಸ್ಕ್ ಅವರು ಪ್ರಧಾನಿ ಮೋದಿ (PM Narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್, ಈ ಭೇಟಿ ನನಗೆ ರೋಮಾಂಚನಕಾರಿ ಅನುಭವ ನೀಡಿದೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಇದರಿಂದಾಗಿ ಅವರ ಬಗ್ಗೆ ನನಗೆ ತಿಳಿದಿದೆ. ಅವರು ನನಗೆ ಭಾರತಕ್ಕೆ ಆಮಂತ್ರಣ ನೀಡಿದ್ದಾರೆ. ಶೀಘ್ರದಲ್ಲೇ ನಾನು ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದ್ದರು.
ಮೋದಿಯವರು ನಿಜವಾಗಿಯೂ ಭಾರತದ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಾರೆ. ಅಲ್ಲದೇ ಅವರು ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ. ಈಗ ತಮ್ಮ ದೇಶದಲ್ಲಿ ಹೂಡಿಕೆ ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಇದು ಭಾರತದ ಅಭಿವೃದ್ಧಿಗೆ ಸಹಕಾರವಾಗಲಿದೆ. ಇದೇ ವರ್ಷದಲ್ಲಿ ಟೆಸ್ಲಾ ಕಾರ್ಖಾನೆಯನ್ನು ಭಾರತದಲ್ಲಿ ಸ್ಥಾಪಿಸಲು ಸ್ಥಳವನ್ನು ಗುರುತಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದರು.
2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮಸ್ಕ್ ಬಳಿ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. 2020ರ ಅಕ್ಟೋಬರ್ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿರುವ ಕಾರಣ ಭಾರತದಲ್ಲಿ ಇನ್ನೂ ಟೆಸ್ಲಾ ಕಾರು ಬಿಡುಗಡೆಯಾಗಿಲ್ಲ.
ಈಗಾಗಲೇ ಅಮೆರಿಕ, ಕೆನಡಾ, ಜರ್ಮನಿ, ಚೀನಾ, ಮೆಕ್ಸಿಕೋದಲ್ಲಿ ಟೆಸ್ಲಾ ಕಂಪನಿ ದೊಡ್ಡ ಫ್ಯಾಕ್ಟರಿ ತೆರೆದಿದೆ. ಏಷ್ಯಾ ಖಂಡದ ದೇಶಗಳಿಗೆ ಚೀನಾದಿಂದ ಕಾರುಗಳನ್ನು ರಫ್ತು ಮಾಡಲು ಮುಂದಾಗಿತ್ತು. ಟೆಸ್ಲಾದ ಈ ನೀತಿಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು.