ಇಸ್ರೋ ಯುವವಿಜ್ಞಾನಿಯ ಕಾರಿಗೆ ಕಲ್ಲೆಸೆತ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಸ್ರೋ ಯುವವಿಜ್ಞಾನಿಯ ಕಾರು ಹಿಂಬಾಲಿಸಿ ಕಲ್ಲೆಸೆದಿರುವ ಘಟನೆ ನಡೆದಿದೆ. ನಾಲ್ಕು ಮಂದಿ ಅಪರಿಚಿತರು ಯುವ ವಿಜ್ಞಾನಿ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಶುತೋಷ್ ಸಿಂಗ್ ಎಂಬ ಯುವ ವಿಜ್ಞಾನಿ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌತನಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ರೌತನಹಳ್ಳಿಯ ಮುಖ್ಯ ರಸ್ತೆಯಲ್ಲಿ ಆಗಸ್ಟ್ 24ರ ರಾತ್ರಿ 12:45ರ ವೇಳೆ ಮನೆಗೆ ತೆರಳುತ್ತಿದ್ದ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರನ್ನು ಅಪರಿಚತ ದುಷ್ಕರ್ಮಿಗಳು ಹಿಂಬಾಲಿಸಿದ್ದಾರೆ.
ಕ್ವಿಡ್ ಕಾರಿನಲ್ಲಿ ಬರುತ್ತಿದ್ದಾಗ ನಾಲ್ವರು ಅಪರಿಚಿತರು ತಡೆದು ನಿಲ್ಲಿಸಿ ಏಕಾಏಕಿ ದಾಳಿ ನಡೆಸಿದ್ದು, ಹಿಂಭಾಗದ ಗಾಜನ್ನು ಒಡೆದು ಹಾಕಿದ್ದಾರೆ. ದುಷ್ಕರ್ಮಿಗಳಿಂದ ಎಸ್ಕೇಪ್ ಆಗಿ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ಯುವ ವಿಜ್ಞಾನಿ ದೂರು ನೀಡಿದ್ದಾರೆ.
ಈ ಘಟನೆಯ ಬಗ್ಗೆ ದೂರು ನೀಡಲು ಮುಂದಾದಾಗ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್ ಮೂಲಕ ಘಟನೆಯ ಮಾಹಿತಿಯನ್ನು ಅಶುತೋಷ್ ಸಿಂಗ್ ಹಂಚಿಕೊಂಡಿದ್ದಾರೆ.
ಬಳಿಕ ಎಚ್ಚೆತ್ತ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.