ಕುವೈತ್ ವಿರುದ್ಧ 5-4 ರಿಂದ ಪೆನಾಲ್ಟಿ ಶೂಟೌಟ್ ಗೆದ್ದು 9ನೇ ಬಾರಿ ಸ್ಯಾಫ್ ಚಾಂಪಿಯನ್ಶಿಪ್ ಗೆದ್ದ ಭಾರತ!
ಬೆಂಗಳೂರು: ಬಲಿಷ್ಠ ಕುವೈತ್ ವಿರುದ್ಧ ಜುಲೈ 4 ( ಮಂಗಳವಾರ) ರಂದು ಶ್ರೀ ಕಂಠೀರವಾ ಕ್ರೀಡಾಂಗಣದಲ್ಲಿ ನಡೆದ 2023ನೇ ಸಾಲಿನ ಸ್ಯಾಫ್ ಫುಟ್ಬಾಲ್ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ 5-4 ರಿಂದ ಪೆನಾಲ್ಟಿ ಶೂಟೌಟ್ ಜಯಿಸಿದ ಭಾರತ ತಂಡ ಚಾಂಪಿಯನ್ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಂಡು ಸಂಭ್ರಮಿಸಿದ್ದಲ್ಲದೆ ಇತಿಹಾಸದಲ್ಲಿ 9ನೇ ಬಾರಿ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದೆ.
ಪಂದ್ಯ ಮೊದಲ ಕ್ಷಣದಿಂದಲೂ ರೋಚಕತೆಯಿಂದ ಕೂಡಿದ ಪರಿಣಾಮವಾಗಿ ಪೂರ್ಣ ಅವಧಿ ಅಂತ್ಯಕ್ಕೆ 1-1 ರಿಂದ ಸಮಬಲಗೊಂಡಿತು. ಪೆನಾಲ್ಟಿ ಶೂಟೌಟ್ ನಲ್ಲಿ ಫಲಿತಾಂಶ ನಿರ್ಧಾರಗೊಂಡ ಪಂದ್ಯದಲ್ಲಿ ಗೋಲ್ ಕೀಪರ್ ಗುರುಪ್ರೀತ್ ಸಂಧು ಅವರ ಚಮತ್ಕಾರದ ಪ್ರದರ್ಶನದಿಂದ ಸುನೀಲ್ ಛೇಟ್ರಿ ಬಳಗ 5-4 ರಿಂದ ಜಯಿಸಿ ಟ್ರೋಫಿ ಗೆದ್ದು ಸಂಭ್ರಮಿಸಿದರೆ, ಚೊಚ್ಚಲ ಚಾಂಪಿಯನ್ ಮುಕುಟ ಗೆಲ್ಲಬೇಕೆಂಬ ಕುವೈತ್ ಕನಸು ಕನಸಾಗಿಯೇ ಉಳಿಯಿತು.
ಪಂದ್ಯ ಆರಂಭಗೊಂಡ 14 ನಿಮಿಷಗಳಲ್ಲೇ ಕುವೈತ್ ನ ಫಾರ್ವರ್ಡ್ ಆಟಗಾರ ಅಬಿಬ್ ಅಲ್ ಖಲೈದಿ ತಮ್ಮ ಕಾಲ್ಚಳಕದಿಂದ ಭಾರತದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಕಣ್ತಪ್ಪಿಸಿ ಚೆಂಡನ್ನು ಗೋಲು ಪೆಟ್ಟಿ ಒಳಗೆ ಹಾಕಲು ಯಶಸ್ಸು ಕಂಡರು. ಆ ಮೂಲಕ ಕುವೈತ್ ಗೆ 1-0 ಮುನ್ನಡೆ ತಂದುಕೊಟ್ಟರು. ನಂತರ ಸುನೀಲ್ ಛೇಟ್ರಿ ಬಳಗ ಮತ್ತಷ್ಟು ಆಕ್ರಮಣಕಾರಿ ಆಟ ಆಡಿದ ಪರಿಣಾಮ 16ನೇ ನಿಮಿಷದಲ್ಲಿ ಗೋಲು ಸಮಬಲಗೊಳಿಸುವ ಅವಕಾಶ ಭಾರತಕ್ಕೆ ಒಲಿದು ಬಂದಿತ್ತಾದರೂ ಚಾಂಗ್ಟೆ ಪ್ರಯತ್ನವನ್ನು ಕುವೈತ್ ಗೋಲ್ ಕೀಪರ್ ಅಬ್ದುಲ್ ರೆಹಮಾನ್ ಮರ್ಜೋಕ್ ತಡೆದರು. ಇದಾದ 3 ನಿಮಿಷಗಳಲ್ಲಿ ಫ್ರೀ ಕಿಕ್ ಮೂಲಕ ಕುವೈತ್ ಗೋಲು ಗಳಿಸುವ ಅವಕಾಶ ಪಡೆದರೂ ಗುರುಪ್ರೀತ್ ಅಡ್ಡಗೋಡೆಯಾಗಿ ತಡೆದರು.
ಆದರೆ ಪಂದ್ಯದ 38 ನೇ ನಿಮಿಷದಲ್ಲಿ ಕುವೈತ್ ನ ಅಲ್ ಧ್ ಪಿರಿ ಅವರ ಪಾಸ್ ಕೊಡುವ ಪ್ರಯತ್ನವನ್ನು ವಿಫಲಗೊಳಿಸಿದ ಕುನಿಯನ್ ಅವರು ಸಹಾಲ್ ಗೆ ಪಾಸ್ ನೀಡಿದರು. ನಂತರ ಸಹಾಲ್ ಅವರಿಂದ ಪಾಸ್ ಪಡೆದ ಚೆಂಡನ್ನು ನಾಯಕ ಸುನೀಲ್ ಛೇಟ್ರಿಯವರು ಲಾಲಿಂಜುವಾಲಾ ಚಾಂಗ್ಟೆಗೆ ತಲುಪಿಸಿದರು. ಚಾಂಗ್ಟೆ ಚೆಂಡನ್ನು ಸುರಕ್ಷಿತವಾಗಿ ಎದುರಾಳಿ ತಂಡದ ಗೋಲು ಪೆಟ್ಟಿಗೆ ಹಾಕುವ ಮೂಲಕ ಅಂಕಗಳನ್ನು ಸಮಬಲಗೊಳಿಸಿದ್ದಾಗ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಹರ್ಷೋದ್ಗಾರ ಮೊಳಗಿಸಿದರು. ಮೊದಲ ಅವಧಿ 1-1 ರಿಂದ ಪಂದ್ಯ ಸಮಬಲಗೊಂಡಿತ್ತು. ಎರಡನೇ ಅವಧಿಯಲ್ಲಿ ಎರಡು ತಂಡಗಳು ಮತ್ತಷ್ಟು ಅಕ್ರಮಣ ಹಾಗೂ ರಕ್ಷಣಾತ್ಮಕ ಆಟ ಆಡಿದ್ದರಿಂದ ಒಂದೇ ಒಂದು ಗೋಲು ಬಾರಿಸಲು ವಿಫಲರಾಗಿ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು.
Hero Tri-Nation Cup ✅
— Indian Football Team (@IndianFootball) July 4, 2023
Hero Intercontinental Cup ✅
Bangabandhu SAFF Championship ✅
Hat-trick of championships for ?? ?#KUWIND ⚔️ #IndianFootball ⚽️ pic.twitter.com/AaXq26vXik
ಗುರುಪ್ರೀತ್ ಸಿಂಗ್ ಸಂಧು ಚಮತ್ಕಾರ
ಪೆನಾಲ್ಟಿ ಶೂಟೌಟ್ ನಲ್ಲಿ ಭಾರತದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಕ್ಷೇತ್ರರಕ್ಷಣೆಯಲ್ಲಿ ಚಮತ್ಕಾರ ತೋರಿದರು. ಪೆನಾಲ್ಟಿ ಶೂಟೌಟ್ ನಲ್ಲೂ ರೋಚಕತೆ ಮೂಡಿಸಿ 4-4 ರಿಂದ ಸಮಬಲಗೊಂಡ ನಂತರ ನಡೆದ ಸಡನ್ ಡೆತ್ ನಲ್ಲಿ ಕುವೈತ್ ನ ಖಲೀದ್ಎಲ್ ಅಬ್ರಾಹಂ ಅವರ ಹೊಡೆತವನ್ನು ಗುರುಪ್ರೀತ್ ತಡೆಯುವಲ್ಲಿ ಯಶಸ್ಸು ಕಂಡರು. ನಂತರ ಮಹೇಶ್ ಸಿಂಗ್ ಗೋಲು ಬಾರಿಸಿದ ಪರಿಣಾಮ ಭಾರತವು ಪೆನಾಲ್ಟಿ ಶೂಟೌಟ್ ನಲ್ಲಿ 5-4 ರಿಂದ ಗೆಲುವು ಸಾಧಿಸಿ ಸ್ಯಾಫ್ ಚಾಂಪಿಯನ್ ಷಿಪ್ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಸುನೀಲ್ ಛೇಟ್ರಿ ಪಡೆ ಯಶಸ್ಸು ಕಂಡಿತು. ಇದು ಭಾರತ ಗೆದ್ದ 9ನೇ ಸ್ಯಾಫ್ ಕಿರೀಟವಾಗಿದೆ.
ಮೊಳಗಿದ ವಂದೇ ಮಾತರಂ ಘೋಷ
ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ ಚಾಂಪಿಯನ್ ಷಿಪ್ (ಸ್ಯಾಫ್) 2023ರಲ್ಲಿ ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆ ಕಂಠೀರವಾ ಕ್ರೀಡಾಂಗಣದಲ್ಲಿ ನೆರೆದಿದ್ದ ಭಾರತೀಯ ಫುಟ್ಬಾಲ್ ಪ್ರೇಮಿಗಳು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮ ಆಚರಿಸಿದ್ದಲ್ಲದೆ ವಂದೇ ಮಾತರಂ ಗೀತೆ ಹಾಡುವ ಮೂಲಕ ದೇಶ ಪ್ರೇಮ ವ್ಯಕ್ತಪಡಿಸಿದರು.ಭಾರತ ಉತ್ತಮ ಸಾಧನೆ
ಕೋಚ್ ಇಗೊರ್ ಸ್ಟಿಮ್ಯಾಕ್ ಗರಡಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಭಾರತ ಫುಟ್ಬಾಲ್ ತಂಡವು ಇತ್ತೀಚೆಗೆ ಮುಕ್ತಾಯಗೊಂಡ ಇಂಟರ್ ಕಾಂಟಿನೆಂಟಲ್ ಕಪ್ ತನ್ನದಾಗಿಸಿಕೊಂಡಿತು. ಈಗ ಸ್ಯಾಫ್ ಚಾಂಪಿಯನ್ ಶಿಪ್ ಗೆದ್ದಿದ್ದು ಸುನೀಲ್ ಛೇಟ್ರಿ ಬಳಗ ಮುಂದಿನ ಚಾಂಪಿಯನ್ ಷಿಪ್ ಗಳನ್ನು ಗೆಲ್ಲಲು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ