ನಾನೇ ನಿಮ್ಮ ಮನೆಗೆ ಬರ್ತೇನೆ - ನೀವೇ ಗುಂಡು ಹೊಡೆಯಿರಿ; ಈಶ್ವರಪ್ಪಗೆ ಡಿ ಕೆ ಸುರೇಶ್ ಟಾಂಗ್..!
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಹುಶಃ ಇತಿಹಾಸ ನಿಮಗೆಲ್ಲಾ ಗೊತ್ತಿದೆ. ಮಹಾತ್ಮ ಗಾಂಧಿಯವರನ್ನ ಕೊಂದ ಪಕ್ಷ ಅವರದ್ದು. ನಾನೊಬ್ಬ ಸಣ್ಣ ವ್ಯಕ್ತಿ. ಕನ್ನಡಿಗರ ಪರವಾಗಿ ಮಾತನಾಡಿದ್ದಕ್ಕೆ ಹೀಗೆ ಹೇಳಿರಬಹುದು. ಪಕ್ಷದಲ್ಲಿ ಅವರನ್ನ ಮೂಲೆ ಗುಂಪು ಮಾಡಿದ್ದಾರೆ. ಅದಕ್ಕೆ ಈಗ ಗಮನ ಸೆಳೆಯಲು ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ನಾನು ಡಿ.ಕೆ.ಸುರೇಶ್ ಗೆ ಗುಂಡು ಹೊಡೆಯಿರಿ ಅಂತ ಹೇಳಿಲ್ಲ ಎಂಬ ಈಶ್ವರಪ್ಪ (KS Eshwarappa) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕನ್ನಡ, ಕರ್ನಾಟಕದ ಪರ ಧ್ವನಿ ಎತ್ತಿದ್ದಕ್ಕೆ ಗುಂಡಿಕ್ಕಿ ಕೊಲ್ಲಿ ಅಂತ ಹೇಳಿದ್ದಾರೆ ಎಂಬ ವರದಿ ಬರುತ್ತಿದೆ. ಬಿಜೆಪಿಯವರು (BJP) ನಿಮ್ಮನ್ನು ಮೂಲೆಗುಂಪು ಮಾಡಿದ್ದಾರೆ ಅನಿಸತ್ತೆ. ಅದಕ್ಕೆ ಆಗಾಗ ಏನೇನೋ ಮಾತಾಡ್ತಿದ್ದೀರಿ. ಬೇರೆಯವರು ಯಾಕೆ ಗುಂಡಿಟ್ಟು ಕೊಲ್ಲಬೇಕು, ದಯವಿಟ್ಟು ನೀವೇ ಆ ಆಸೆಯನ್ನು ಈಡೇರಿಸಿಕೊಳ್ಳಿ ಎಂದರು.
ನಿಮ್ಮ ನಾಯಕರಿಂದ ನೀವೇ ಶಬ್ಬಾಷ್ ಗಿರಿ ತೆಗೆದುಕೊಳ್ಳಿ. ನಾನೇ ಸಮಯ ಕೊಡ್ತೀನಿ ಒಂದು ವಾರದಲ್ಲಿ ಯಾವಾಗ ಅಂತ ಹೇಳ್ತೀನಿ. ನಾನೇ ಅವರ ಮನೆಗೆ ಹೋಗ್ತೀನಿ. ಅವರೇ ಗುಂಡು ಹೊಡೆಯಲಿ. ಈಶ್ವರಪ್ಪ ಅವರ ಮನೆಗೆ ನಾನೇ ಹೋಗ್ತೀನಿ ಅವರೇ ಗುಂಡು ಹೊಡೆಯಲಿ. ಬಡವರ ಮಕ್ಕಳನ್ನ ಹೇಳಿಕೆ ಮೂಲಕ ರೊಚ್ಚಿಗೆಬ್ಬಿಸುವುದು ಬೇಡ. ಅವರೇ ಆ ಕೆಲಸ ಮಾಡಲಿ. ಅಲ್ಲಿ ಇಲ್ಲಿ ಯಾಕೆ ಹುಡುಕುತ್ತೀರಾ..?, ನಾನೇ ನಿಮ್ಮ ಮನೆಗೆ ಬರುತ್ತೇನೆ. ಒಂದು ವಾರದಲ್ಲಿ ಸಮಯ ನಿಗದಿ ಮಾಡ್ತೀನಿ, ನಿಮ್ಮ ಭೇಟಿ ಮಾಡ್ತೀನಿ. ಸಿದ್ಧರಾಗಿ ಗುಂಡುಕ್ತೀರಾ, ಕೊಲ್ತೀರಾ ನೋಡೋಣ ಎಂದು ಡಿಕೆ ಸುರೇಶ್ ಸವಾಲೆಸೆದಿದ್ದಾರೆ.