ಹಿಂದೂಗಳೇ ಕೆನಡಾ ಬಿಟ್ಟು ನಿಮ್ಮ ದೇಶಕ್ಕೆ ವಾಪಸ್ ಹೋಗಿ; ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯಿಂದ ಬೆದರಿಕೆ ಕರೆ!

ಮಾಂಟ್ರಿಯಲ್, ಸೆಪ್ಟೆಂಬರ್ 20: ಖಲಿಸ್ತಾನೀ ಪ್ರತ್ಯೇಕತಾವಾದಿ ಮುಖಂಡ ಹರದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ಹಿಂದೆ ಭಾರತ ಸರ್ಕಾರದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Canada PM Justin Trudeau) ನೀಡಿದ ಹೇಳಿಕೆ ಈಗ ಖಲಿಸ್ತಾನೀ ಸಂಘಟನೆಗಳ ಮನೋಸ್ಥೈರ್ಯ ಹೆಚ್ಚಿಸಿದಂತಿದೆ. ಸಿಖ್ಸ್ ಫಾರ್ ಜಸ್ಟಿಸ್ (SFJ- sikhs for justice) ಎಂಬ ಖಲಿಸ್ತಾನೀ ಸಂಘಟನೆ ಇದೀಗ ಬಹಿರಂಗವಾಗಿಯೇ ಕೆನಡಿಯನ್ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದೆ. ಖಲಿಸ್ತಾನೀ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯನ್ನು ಸಂಭ್ರಮಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಹಾಗೂ ಭಾರತಕ್ಕೆ ಬೆಂಬಲ ನೀಡುತ್ತಿರುವ ಹಿಂದೂಗಳೇ ನಿಮ್ಮ ದೇಶಕ್ಕೆ ವಾಪಸ್ ಹೋಗಿ ಎಂದು ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಕಾನೂನು ಸಲಹೆಗಾರ ಗುರಪಟ್ವಂತ್ ಪನ್ನುನ್ ವಿಡಿಯೋ ಸಂದೇಶವೊಂದರಲ್ಲಿ ಕರೆ ನೀಡಿದ್ದಾರೆ.
ಪ್ರತ್ಯೇಕ ಖಲಿಸ್ತಾನೀ ದೇಶಕ್ಕಾಗಿ ಹೋರಾಡುತ್ತಿರುವ ಸಿಖ್ಸ್ ಫಾರ್ ಜಸ್ಟೀಸ್ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವ ಆರೋಪ ಇದೆ. ಭಾರತದಲ್ಲಿ ಇದನ್ನು 2019ರಲ್ಲಿ ನಿಷೇಧಿಸಲಾಗಿದೆ. ಈ ಉಗ್ರ ಸಂಘಟನೆಯ ಲೀಗಲ್ ಕೌನ್ಸಲ್ ಆಗಿರುವ ಗುರಪಟ್ವಂತ್ ಪನ್ನುನ್ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ.
‘ಭಾರತೀಯ ಹಿಂದೂಗಳೇ ಕೆನಡಾ ಬಿಟ್ಟು ತೊಲಗಿ, ಭಾರತಕ್ಕೆ ಹೋಗಿ. ನೀವು ಭಾರತವನ್ನು ಬೆಂಬಲಿಸುತ್ತಿರುವುದು ಮಾತ್ರವಲ್ಲ, ಖಲಿಸ್ತಾನೀ ಪರ ಸಿಖ್ಖರ ಅಭಿಪ್ರಾಯ ಮತ್ತು ವಾಕ್ಸ್ವಾತಂತ್ರ್ಯ ಹತ್ತಿಕ್ಕುವ ಕಾರ್ಯಕ್ಕೆ ಬೆಂಬಲವನ್ನೂ ನೀಡುತ್ತಿದ್ದೀರಿ,’ ಎಂದು ಪನ್ನುಮ್ ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಭಾರತ ಸರ್ಕಾರದ ವಿರುದ್ಧ ಸೋಮವಾರ ಆರೋಪ ಮಾಡಿದ ಸಂದರ್ಭದಲ್ಲೇ ಗುರಪಟ್ವಂತ್ ಪನ್ನುಂ ಅವರ ಈ ವಿಡಿಯೋ ವೈರಲ್ ಆಗಿ ಹಬ್ಬುತ್ತಿದೆ.
ಕೆನಡಿಯನ್ ಹಿಂದೂಸ್ ಫಾರ್ ಹಾರ್ಮನಿ ಸಂಘಟನೆಯ ವಕ್ತಾರ ವಿಜಯ್ ಜೈನ್ ಅವರು ಈ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈಗ ಪೂರ್ಣಪ್ರಮಾಣದಲ್ಲಿ ಹಿಂದೂಫೋಬಿಯಾವನ್ನು ಕಾಣುತ್ತಿದ್ದೇವೆ ಎಂದಿದ್ದಾರೆ.
ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರ ಇದೆ ಎಂದು ಪ್ರಧಾನಿ ಟ್ರುಡೋ ಮಾಡಿರುವ ಆರೋಪವು ಹಿಂದೂಫೋಬಿಯಾವನ್ನು ಹೆಚ್ಚಿಸುತ್ತಿದೆ. 1985ರಲ್ಲಿ ಕೆನಡಿಯನ್ ಹಿಂದೂಗಳ ಜೀವಹರಣವಾಗಿದ್ದು ಮರುಕಳಿಸಬಹುದು ಎಂದೂ ವಿಜಯ್ ಜೈನ್ ಆತಂಕ ತೋರ್ಪಡಿಸಿದ್ದಾರೆ.
ಏರ್ ಇಂಡಿಯಾದ ಮಾಂಟ್ರಿಯಲ್ ಬಾಂಬೆ ವಿಮಾನದ ಮೇಲೆ 1985ರ ಜೂನ್ 24ರಂದು ಖಲಿಸ್ತಾನೀ ಉಗ್ರರು ಬಾಂಬ್ ಹಾಕಿದ್ದರು. ಆ ದುರಂತದಲ್ಲಿ 329 ಮಂದಿ ಬಲಿಯಾಗಿದ್ದರು. ಆಗ ಖಲಿಸ್ತಾನೀ ಭಯೋತ್ಪಾದನೆ ಉಗ್ರವಾಗಿದ್ದ ದಿನಗಳು. ಕೆನಡಾದ ಇತಿಹಾದಲ್ಲೇ ಅತ್ಯಂತ ಭೀಕರ ಭಯೋತ್ಪಾದನಾ ದಾಳಿ ಅದಾಗಿತ್ತು. ಪ್ರತೀ ವರ್ಷ ಜೂನ್ 23ರಂದು ಆ ಘೋರ ದಿನವನ್ನು ನೆನಪಿಸಿಕೊಳ್ಳಲಾಗುತ್ತದೆ.
ಈಗ್ಗೆ ಕೆಲವಾರು ವರ್ಷಗಳಿಂದ ಖಲಿಸ್ತಾನೀ ಚಟುವಟಿಕೆ ಮತ್ತೆ ಗರಿಗೆದರಿದೆ. ಕೆಲ ತಿಂಗಳ ಹಿಂದೆ ಕೊಲೆಯಾದ ಹರ್ದೀಪ್ ಸಿಂಗ್ ನಿಜ್ಜರ್ ಕೂಡ ಉಗ್ರ ಕೃತ್ಯಗಳಲ್ಲಿ ತೊಡಗಿದ್ದವನೇ. ಬಹಳ ಮಂದಿ ಖಲಿಸ್ತಾನೀ ಉಗ್ರರು ಕೆನಡಾದಲ್ಲಿ ಆಶ್ರಯ ಪಡೆದಿದ್ದಾರೆ. ಭಾರತ ವಿರೋಧಿ ಗೋಡೆಬರಹಗಳು, ಘೋಷಣೆಗಳು, ಹಿಂದೂ ಮಂದಿರಗಳ ಮೇಲೆ ದಾಳಿ ಇತ್ಯಾದಿ ಹಲವು ಘಟನೆಗಳು ಇತ್ತೀಚೆಗೆ ಸಂಭವಿಸಿವೆ. ಕೆನಡಾದಲ್ಲಿ ಹಿಂದೂಫೋಬಿಯಾ ಇರುವುದನ್ನು ಅಧಿಕೃತವಾಗಿ ಪರಿಗಣಿಸಲು ಅಲ್ಲಿನ ಕೆಲ ವರ್ಗದ ಜನರು ಪ್ರಯತ್ನಿಸುತ್ತಿದ್ದಾರೆ.
ಭಾರತವನ್ನು ವಿಶ್ವವೇ ನೋಡುತ್ತಿದೆ, ನಾವು ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ: ಪಾಕ್ ಮಾಜಿ ಪ್ರಧಾನಿ
ಇಸ್ಲಾಮಾಬಾದ್, ಸೆ.20: ಭಾರತ ಎಲ್ಲದರಲ್ಲೂ ಮುಂದೆ ಸಾಗುತ್ತಿದೆ. ಭಾರತ ಚಂದ್ರಯಾನ -3ಯನ್ನು (chandrayaan 3) ಯಶ್ವಸಿ ಮಾಡಿದೆ. ವಿಶ್ವವೇ ಭಾರತದತ್ತ ನೋಡುವಂತೆ ಜಿ-20 ಶೃಂಗಸಭೆ ನಡೆಸಿದೆ. ಆದರೆ ಪಾಕಿಸ್ತಾನ ಏನು? ಮಾಡುತ್ತಿದೆ ಎಂದು ಅಚ್ಚರಿಯ ಹೇಳಿಕೆಯನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ನೀಡಿದ್ದಾರೆ. ತಮ್ಮ ಪಕ್ಷದ ಪಿಎಂಎಲ್ (ಎನ್) ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತವು ಚಂದ್ರನನ್ನು ತಲುಪಿದೆ ಮತ್ತು ಜಿ 20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಆದರೆ ಪಾಕಿಸ್ತಾನ ಹಣಕ್ಕಾಗಿ ಇತರ ರಾಷ್ಟ್ರಗಳಲ್ಲಿ ಬೇಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಲಾಹೋರ್ನಲ್ಲಿ ನಡೆದ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಷರೀಫ್, ಇಂದು, ಭಾರತವು ಚಂದ್ರನ ಮೇಲೆ ಕಾಲಿಡುತ್ತಿರುವಾಗ, ಜತೆಗೆ ಜಿ 20ನಲ್ಲಿ ವಿಶ್ವ ನಾಯಕರಿಗೆ ಆತಿಥ್ಯ ನೀಡುತ್ತಿರುವಾಗ ಪಾಕಿಸ್ತಾನದ ಪ್ರಧಾನಿ ನಿಧಿಗಾಗಿ ಭಿಕ್ಷೆ ಬೇಡಲು ವಿದೇಶಗಳಿಗೆ ಹೋಗುತ್ತಿದ್ದಾರೆ. ಪಾಕಿಸ್ತಾನಕ್ಕೆ ಏಕೆ ಅಂತಹ ಸಾಧನೆ ಮಾಡಲು ಸಾಧ್ಯವಾಗಲಿಲ್ಲ? ನಮ್ಮ ದೇಶದ ಈ ಸ್ಥಿತಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದಲ್ಲಿರುವ ಬಡವರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ನಾವು ನಮ್ಮ ದೇಶಕ್ಕೆ ಏನು ಮಾಡಿದ್ದೇವೆ? ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಪಾಕಿಸ್ತಾನದ ಪ್ರಸ್ತುತ ಆರ್ಥಿಕತೆಯ ಸ್ಥಿತಿಯ ಬಗ್ಗೆ ಟೀಕಿಸಿದ ಷರೀಫ್, ನಮ್ಮ ದೇಶಕ್ಕೆ ಇಂತಹ ಸ್ಥಿತಿ ತಂದವರು ದೊಡ್ಡ ಅಪರಾಧಿಗಳು ಎಂದು ಹೇಳಿದ್ದಾರೆ.
1990ರಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ ನೇತೃತ್ವದ ಸರ್ಕಾರ ಮಾಡಿದ ಆರ್ಥಿಕ ಸುಧಾರಣೆಗಳನ್ನು ಈಗಿನ ಸರ್ಕಾರ ಅನುಸರಿಸಬೇಕು ಎಂದು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಿಯಾದಾಗ ಅವರ ಖಜಾನೆಯಲ್ಲಿ ಕೇವಲ ಒಂದು ಬಿಲಿಯನ್ ಡಾಲರ್ ಇತ್ತು. ಈಗ, ಅವರ ವಿದೇಶಿ ವಿನಿಮಯ ಸಂಗ್ರಹವು 600 ಶತಕೋಟಿಗೆ ಏರಿದೆ ಎಂದು ಷರೀಫ್ ಹೇಳಿದರು.
ಆದರೆ ಪಾಕಿಸ್ತಾನ ಇನ್ನೂ ಒಂದು ಶತಕೋಟಿ ಡಾಲರ್ಗೆ ಇತರ ದೇಶಗಳ ಮುಂದೆ ಭಿಕ್ಷೆ ಬೇಡಬೇಕಾಗಿದೆ. ನಮ್ಮ ಸ್ಥಿತಿ ಎಲ್ಲಿಗೆ ಬಂದಿದೆ? ಭಾರತದ ಮುಂದೆ ಯಾವ ಹಂತಕ್ಕೆ ಬಂದು ನಿಲ್ಲಲಿದ್ದೇವೆ? ನಾವು ಇಂದಿಗೂ ಚೀನಾ ಮತ್ತು ಗಲ್ಫ್ನಿಂದ ಹಣವನ್ನು ಕೇಳುತ್ತಿದ್ದೇವೆ ಎಂದು ಖಡಕ್ ಆಗಿ ಸರ್ಕಾರವನ್ನು ಟೀಕಿಸಿದರು.