ಜನವರಿ 22 ರಂದು ಕೇಂದ್ರ ಸರ್ಕಾರ ಕಛೇರಿಗಳಿಗೆ ಅರ್ಧ ದಿನ ರಜೆ ಘೋಷಣೆ!
ಬೆಂಗಳೂರು : ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರ ಸೋಮವಾರ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಿದ್ದತೆಗಳು ಭರದಿಂದ ನಡೆಯುತ್ತಿದೆ.
ಶ್ರೀ ರಾಮ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ದೇಶಾದ್ಯಂತ ಕೇಂದ್ರ ಸರ್ಕಾರಿ ಕಛೇರಿಗಳಿಗೆ ಮಧ್ಯಾಹ್ನ 2.30ರ ತನಕ ರಜೆ ಘೋಷಣೆ ಮಾಡಿದೆ. ಇದರಿಂದಾಗಿ ನೌಕರರು ಟಿವಿಯಲ್ಲಿ ರಾಮ ಮಂದಿರ ಉದ್ಘಾಟನೆ ಸಮಾರಂಭವನ್ನು ವೀಕ್ಷಣೆ ಮಾಡಬಹುದಾಗಿದೆ.
ನೇರ ಪ್ರಸಾರಕ್ಕೆ ವ್ಯವಸ್ಥೆ; ಶ್ರೀ ರಾಮ ಮಂದಿರದಲ್ಲಿ ಜನವರಿ 22ರ ಸೋಮವಾರ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿರುವ ಹಿನ್ನಲೆಯಲ್ಲಿ ಅಂದು ಅಯೋಧ್ಯೆಗೆ ಬರಬೇಡಿ ಎಂದು ಶ್ರೀ ರಾಮನ ಭಕ್ತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ. ದೇಶದ 9 ಸಾವಿರ ರೈಲು ನಿಲ್ದಾಣದಲ್ಲಿ ನೇರ ಪ್ರಸಾರ ಮಾಡಲು ಇಲಾಖೆ ಈಗಾಗಲೇ ಸೂಚನೆ ನೀಡಿದೆ.
ಜನವರಿ 23ರಿಂದ ಶ್ರೀ ರಾಮ ಮಂದಿರಕ್ಕೆ ಭೇಟಿ ನೀಡಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಅಯೋಧ್ಯೆಗೆ ಭೇಟಿ ನೀಡುವ ಜನರಿಗಾಗಿಯೇ ರೈಲ್ವೆ ಇಲಾಖೆ ದೇಶದ ವಿವಿಧ ನಗರಗಳಿಂದ ರೈಲುಗಳ ವ್ಯವಸ್ಥೆಯನ್ನು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಜನವರಿ 22ರಂದು ಮನೆಯಲ್ಲಿ ದೀಪವನ್ನು ಬೆಳಗುವ ಮೂಲಕ ಶ್ರೀರಾಮನನ್ನು ಪ್ರಾರ್ಥಿಸಿ ಎಂದು ಕರೆ ನೀಡಿದ್ದಾರೆ. ಆಹ್ವಾನಿತರು, ಗಣ್ಯರು ಮಾತ್ರ ಅಂದು ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನವರಿ 21ರ ಸಂಜೆಯೇ ಅಯೋಧ್ಯೆಗೆ ತಲುಪಲಿದ್ದಾರೆ.
“ಆ ದಿನ ಶ್ರೀ ರಾಮ ಅಯೋಧ್ಯೆಗೆ ಬರುತ್ತಾನೆ. ಶ್ರೀ ರಾಮನ ಭಕ್ತರಾದ ನಾವು ರಾಮನಿಗೆ ತೊಂದರೆ ಆಗುವಂತಹ ಯಾವುದೇ ಕೆಲವನ್ನು ಮಾಡಬಾರದು. ರಾಮ ಮಂದಿರ ನಿರ್ಮಾಣಕ್ಕೆ 550 ವರ್ಷ ಕಾದಿದ್ದೇವೆ. ಅವನ ದರ್ಶನಕ್ಕಾಗಿ ಇನ್ನೂ ಸ್ಪಲ್ಪ ಸಮಯ ಕಾಯಬೇಕಿದೆ” ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಗುರುವಾರ ವೇದಘೋಷಗಳ ನಡುವೆ ರಾಮಂದಿದರದ ಗರ್ಭಗುಡಿಯ ಪೀಠದ ಮೇಲೆ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ.
ಬುಧವಾರ ಸಂಜೆ ರಾಮಲಲ್ಲಾ ವಿಗ್ರಹ ಅಯೋಧ್ಯೆಯನ್ನು ತಲುಪಿತ್ತು. ಗುರುವಾರ ವಿವಿಧ ಧಾರ್ಮಿಕ ಕಾರ್ಯಗಳ ಮೂಲಕ ದೇಶದ ನದಿಗಳ ನೀರಿನಿಂದ ವಿಗ್ರಹಕ್ಕೆ ಪವಿತ್ರ ಸ್ನಾನ ಮಾಡಿಸಲಾಯಿತು. ಔಷಧೀಯ ಗುಣಗಳಿರುವ ಸಸ್ಯಗಳಿಂದ ನೆನೆಸಿರುವ ನೀರಿನಲ್ಲಿ ವಿಗ್ರಹ ಸ್ವಚ್ಛಗೊಳಿಸಲಾಯಿತು.
ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಮುಖ್ಯ ಯಜಮಾನರಾಗಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಸರಯೂ ನದಿಯಲ್ಲಿ ಮುಂಜಾನೆ ಸ್ನಾನ ಮಾಡಿ ಅವರು ನೀರನ್ನು ಹೊತ್ತು ರಾಮ ಮಂದಿರ ಪ್ರವೇಶ ಮಾಡಲಿದ್ದಾರೆ. ಇದಕ್ಕಾಗಿ 11 ದಿನಗಳ ಕಠಿಣ ವ್ರತವನ್ನು ಸಹ ಮೋದಿ ಆಚರಣೆ ಮಾಡುತ್ತಿದ್ದಾರೆ.
ರಾಮಲಲ್ಲಾ ವಿಗ್ರಹದ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಗರ್ಭಗುಡಿ ಪೀಠದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರಾಣ ಪ್ರತಿಷ್ಠೆಯ ದಿನ ಈ ಬಟ್ಟೆಯನ್ನು ತೆಗೆಯಲಾಗುತ್ತದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.