ಟ್ರೆಡ್ ಮಿಲ್ ಮೇಲೆ ವ್ಯಾಯಾಮ ಮಾಡುವಾಗ ವಿದ್ಯುತ್ ಶಾಕ್: ಯುವಕ ದುರಂತ ಸಾವು

ನವದೆಹಲಿ: ಟ್ರೆಡ್ ಮಿಲ್ ಮೇಲೆ ವ್ಯಾಯಾಮ ಮಾಡುವಾಗ ವಿದ್ಯುತ್ ಶಾಕ್ನಿಂದ ಯುವ ಇಂಜಿನಿಯರ್ ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಸಕ್ಷಮ್ ಪೃತಿ (24) ಎಂದು ಗುರುತಿಸಲಾಗಿದೆ. ಈತ ಗುರುಗ್ರಾಮದ ಕಂಪನಿ ಒಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸಲ್ಲಿಸುತ್ತಿದ್ದ. ದೆಹಲಿಯ ರೋಹಿಣಿ ಏರಿಯಾದ ಸೆಕ್ಟರ್ 15ರ ಜಿಂಪ್ಲೆಕ್ಸ್ ಫಿಟ್ನೆಸ್ ಕೇಂದ್ರದಲ್ಲಿ ಈ ದುರ್ಘಟನೆ ಸಂಭವಿಸಿದೆ.
ನಿನ್ನೆ ಬೆಳಗ್ಗೆ ಟ್ರೆಡ್ ಮಿಲ್ ಮೇಲೆ ವ್ಯಾಯಾಮ ಮಾಡುವಾಗ ಸಕ್ಷಮ್ ಕುಸಿದುಬಿದ್ದಿದ್ದ. ಬಳಿಕ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಕಾರಣ ಬಹಿರಂಗವಾಗಿದ್ದು, ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.
ಜಿಮ್ ಮ್ಯಾನೇಜರ್ ಅನುಭವ್ ದುಗ್ಗಲ್ನನ್ನು ಪೊಲೀಸರು ಈ ಪ್ರಕರಣ ಸಂಬಂಧ ಬಂಧಿಸಿದ್ದಾರೆ. ಆತನ ವಿರುದ್ಧ ತಿಳಿಯದೆ ಮಾಡಿದ ನರಹತ್ಯೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ವಿದ್ಯುತ್ ಸ್ಪರ್ಶ ಹೇಗೆ ಸಂಭವಿಸಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದ ರಾಯಗಢದಲ್ಲಿ ಭಾರೀ ಮಳೆಗೆ ಭೂಕುಸಿತ – 10 ಮಂದಿ ಸಾವು
ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಭಾರೀ ಮಳೆ (Rain) ಸುರಿಯುತ್ತಿರುವ ಪರಿಣಾಮ ರಾಯಗಢ (Raigad) ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಭೂಕುಸಿತ (Land Slide) ಉಂಟಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ.
ಬುಡಕಟ್ಟು ಜನಾಂಗದ ಹಲವಾರು ಮನೆಗಳಿರುವ ಖಲಾಪುರದಲ್ಲಿ (Khalapur) ಧಾರಾಕಾರ ಮಳೆ ಸುರಿದ ಪರಿಣಾಮ ಭೂಕುಸಿತವಾಗಿದ್ದು, 100ಕ್ಕೂ ಹೆಚ್ಚು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಇಲ್ಲಿಯವರೆಗೆ 75 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಗಳು ಹೇಳಿವೆ.
ಭೂಕುಸಿತದಿಂದಾಗಿ ಗುಡ್ಡದಿಂದ ಭಾರೀ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ಮನೆಗಳ ಮೇಲೆ ಬಿದ್ದಿದ್ದು, ಸುಮಾರು 30 ಮನೆಗಳು ಮಣ್ಣಿನ ಅಡಿಯಲ್ಲಿ ಹೂತುಹೋಗಿವೆ. ಘಟನೆ ನಡೆದ ಸ್ಥಳವಾದ ಇರ್ಸಾಲವಾಡಿ (Irsalwadi) ಬೆಟ್ಟದ ಮೇಲಿರುವ ಒಂದು ಹಳ್ಳಿಯಾಗಿದ್ದು, ಅಲ್ಲಿಗೆ ಸಂಚರಿಸಲು ಸರಿಯಾದ ಮಾರ್ಗವಿಲ್ಲ. ಆ ಹಳ್ಳಿಯನ್ನು ತಲುಪಬೇಕಾದರೆ ಸುಮಾರು 1 ಕಿಲೋ ಮೀಟರ್ನಷ್ಟು ದೂರ ಚಾರಣ ಮಾಡಬೇಕು.
ಘಟನೆಯ ಬಗ್ಗೆ ಅರಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಗುರುವಾರ ಬೆಳಗ್ಗೆ ಭೂಕುಸಿತ ಉಂಟಾದ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಲ್ಲದೇ ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸುವ ಬಗ್ಗೆ, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.
ಘಟನೆಯ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎರಡು ತಂಡಗಳು ಸ್ಥಳಕ್ಕೆ ಧಾವಿಸಿ ಶೋಧಕಾರ್ಯವನ್ನು ನಡೆಸಿ ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡುತ್ತಿದೆ. ಎನ್ಡಿಆರ್ಎಫ್, ಅಗ್ನಿ ಶಾಮಕದಳ ಮತ್ತು ಪೊಲೀಸರು ಕಾಲ್ನಡಿಗೆಯಲ್ಲಿ ಘಟನಾ ಸ್ಥಳಕ್ಕೆ ತಲುಪಿದ್ದು, ಹತ್ತಿಕೊಂಡು ಹೋಗುವ ಸಂದರ್ಭ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುವ ಸಲುವಾಗಿ ಮುಂಬೈನ ಸಾಂತಾಕ್ರೂಜ್ ವಿಮಾನ ನಿಲ್ದಾಣದಲ್ಲಿ ಎರಡು ಹೆಲಿಕಾಪ್ಟರ್ಗಳು ಸಿದ್ಧವಾಗಿದೆ. ಆದರೆ ಹವಾಮಾನ ಪರಿಸ್ಥಿತಿ ಸರಿಯಿಲ್ಲದ ಕಾರಣದಿಂದಾಗಿ ವಿಮಾನ ಹಾರಾಟ ಕಷ್ಟಕರವಾಗಿದ್ದು, ಅಪಾಯಕಾರಿಯಾಗಿದೆ. ಸದ್ಯ 150 ಎನ್ಡಿಆರ್ಎಫ್ (NDRF) ಸಿಬ್ಬಂದಿ ಮತ್ತು 500 ಸಿಐಡಿಸಿಒ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದ್ದು, ಘಟನೆ ನಡೆದ ಸ್ಥಳವನ್ನು ತಲುಪಲು ಸುಮಾರು 60-90 ನಿಮಿಷಗಳನ್ನು ತೆಗೆದುಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ರಾಯಗಢದ ಆರು ಪ್ರಮುಖ ನದಿಗಳ ಪೈಕಿ ಸಾವಿತ್ರಿ ಮತ್ತು ಪಾತಾಳಗಂಗಾ ಎಂಬ ಎರಡು ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಅಲ್ಲದೇ ಕುಂಡಲಿಕಾ ಮತ್ತು ಅಂಬಾ ನದಿಗಳು ಎಚ್ಚರಿಕಾ ಘಟ್ಟವನ್ನು ತಲುಪಿದ್ದು, ಗಧಿ ಮತ್ತು ಉಲ್ಲಾಸ್ ಎಂಬ ನದಿಗಳು ಅಲರ್ಟ್ ಮಾರ್ಕ್ನ ಸಮೀಪ ತಲುಪಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ನಿರಂತರ ಮಳೆಯ ಪರಿಣಾಮ ಮುಂಬೈ, ರಾಯಗಢ ಮತ್ತು ಪಾಲ್ಘರ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.