ಜನವರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನ; ಅದಕ್ಕೆ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಿಲ್ಲ : ಯತ್ನಾಳ್

ಹುಬ್ಬಳ್ಳಿ, : ಜನವರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನ ಖಚಿತವಾಗಿದೆ ಎಂದು ಭವಿಷ್ಯ ನುಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯೇ ಅಧಿಕಾರಕ್ಕೆ ಬರುವ ಸಾಧ್ಯತೆಗಳಿರುವುದರಿಂದ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು (ಸೆಪ್ಟೆಂಬರ್ 17) ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಜನವರಿಯಲ್ಲಿ ರಾಜ್ಯ ಸರ್ಕಾರ ಪತನವಾಗುತ್ತೆ. ಅವರ ಪಕ್ಷದವರೇ ಅವರ ಸರ್ಕಾರವನ್ನ ಬೀಳಿಸಲಿದ್ದಾರೆ. ನಾವೇ ನೇರವಾಗಿ ಸಿಎಂ ಆಗಬಹುದು ಎಂದು ವಿರೋಧ ಪಕ್ಷದ ನಾಯಕನನ್ನ ಇದುವರೆಗೂ ಆಯ್ಕೆ ಮಾಡಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ವಿರೋಧ ಪಕ್ಷದ ಬದಲು ಸಿಎಂ ಆಗಬಹುದು ಅಂತಾ ವಿಪಕ್ಷ ನಾಯಕರ ಆಯ್ಕೆ ಮಾಡಿಲ್ಲ. ನೇರವಾಗಿ ನಮ್ಮ ಪಕ್ಷದವರೇ ಸಿಎಂ ಯಾಕಾಗಬಾರದು? ಎಂದು ಪ್ರಶ್ನಿಸಿದ ಯತ್ನಾಳ್ , ಬಿ.ಕೆ.ಹರಿಪ್ರಸಾದ್ ಯಾರ ಕುಮ್ಮಕ್ಕಿನಿಂದ ಮಾತನಾಡುತ್ತಿದ್ದಾರೆ. ಸಿದ್ಧರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ಈ ತಂತ್ರ ನಡೆಸಿದ್ದಾರೆ ಎಂದರು.
ವೇಟಿಂಗ್ ಸಿಎಂ ಕುಮ್ಮಕ್ಕಿನಿಂದ ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ. ಹರಿಪ್ರಸಾದ್ ಅವರನ್ನ ಕೇವಲ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಇದೆಲ್ಲವನ್ನ ಗಮನಿಸಿದ್ರೆ ಜನವರಿ ನಂತರ ಕಾಂಗ್ರೆಸ್ ಸರ್ಕಾರ ಪತನವಾಗುವುದು ಖಚಿತ. ಇಷ್ಟೆಲ್ಲ ಗೊತ್ತಿದ್ದು ಅವರು ಆಪರೇಶನ್ ಹಸ್ತ ಮಾಡುತ್ತಿದ್ದಾರೆ. ನಮ್ಮ ಸಂಪರ್ಕದಲ್ಲಿಯೂ 45 ಜನ ಶಾಸಕರಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ ಅವರನ್ನು ಕುಟುಕಿದರು.
ಇನ್ನು ಇದೇ ವೇಳೆ ಲೋಕಸಭೆ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿ, ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾವು ರಾಜ್ಯ ರಾಜಕಾರಣದ ಬಗ್ಗೆ ಅಷ್ಟೇ ತಲೆಕೆಡಿಸಿಕೊಳ್ಳುತ್ತೇವೆ. ಮೈತ್ರಿ ಬಗ್ಗೆ ಯಡಿಯೂರಪ್ಪ ಅವರಿಗೆ ಮಾಹಿತಿ ಇರಬಹುದು . ಆದಷ್ಟು ಶೀಘ್ರ ಮೈತ್ರಿ ಕುರಿತು ಅಂತಿಮ ತೀರ್ಮಾನವಾಗುತ್ತೆ. ಪ್ರತಿಯೊಂದು ಲೋಕಸಭಾ ಸ್ಥಾನವೂ ಅತ್ಯಂತ ಮಹತ್ವದ್ದು. ಒಂದೇ ಮತದಿಂದ ವಾಜಿಪೇಯಿ ಸರ್ಕಾರ ಪತನವಾಗಿತ್ತು. ಹೀಗಾಗಿ ಯಾವುದನ್ನೂ ನಾವು ಸುಲಭವಾಗಿ ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ 25 ಸ್ಥಾನದಲ್ಲಿ ಗೆದ್ದಿದ್ದೇವೆ. ಈ ಬಾರಿ 28 ಸ್ಥಾನಗಳಲ್ಲಿ ಗೆದ್ದು ಈ ಸರ್ಕಾರ ಹೊಡೆಯತ್ತೇವೆ. ನಾವೇನೂ ಸರ್ಕಾರ ಬೀಳಿಸುವ ಪ್ರಯತ್ನ ನಡೆಸಿಲ್ಲ. ತಾನಾಗಿಯೇ ಸರ್ಕಾರ ಪತನವಾಗಲಿದೆ ಕಾದುನೋಡಿ. ಬಸವರಾಜ್ ರಾಯರೆಡ್ಡಿಯಂತಹ ಹಿರಿಯರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ನೀವು ಕೂಡಿ ಎಂಪಿ ಆಗೋಣ ಎಂಬ ಮಾತನ್ನೂ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿನ ಅಸಮಾಧಾನ ಹೆಚ್ಚಿದೆ. ಅದು ಯಾವಾಗ ಸ್ಪೋಟವಾಗುತ್ತೋ ಗೊತ್ತಿಲ್ಲ. ಹೀಗಿರುವಾಗ ನಮ್ಮವರನ್ನ ಸೆಳೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಬಿಜೆಪಿ ಗಿರಾಕಿಗಳನ್ನ ತೆಗೆದುಕೊಂಡು ಇವರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಯಾರಾದರೂ ಬಿಜೆಪಿ ಬಿಟ್ಟು ಹೋದ್ರೆ ತಾವಾಗೇ ಮರಣ ಶಾಸನ ಬರೆದುಕೊಂಡಂತೆ. ನಾನು ಕೇಂದ್ರ ಸಚಿವನಿದ್ದಾಗ ಹಾಗೂ ಈಗಿನ ರಾಜಕೀಯ ಸ್ಥಿತಿಗೂ ವ್ಯತ್ಯಾಸವಿದೆ. ಈಗ ನಮ್ಮನ್ನು ದೆಹಲಿಯಲ್ಲಿ ಯಾರೂ ಗುರುತು ಹಿಡಿಯಲಾರದ ಸ್ಥಿತಿ ಇದೆ. ನಾನು ಕೇಂದ್ರ ಮಂತ್ರಿ ಇದ್ದಾಗ ಮೋದಿ ಗುಜರಾತ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅಮಿತ್ ಶಾ ರಾಜ್ಯ ಮಂತ್ರಿಯಾಗಿದ್ದರು. ಈಗ ನಾವು ಕೆಳಗೆ ಬಂದಿದ್ದು, ಅವರು ಮೇಲೆ ಹೋಗಿದ್ದಾರೆ ಎಂದು ತಿಳಿಸಿದರು.