ಚಿತ್ರದುರ್ಗ : ನಿಯಂತ್ರಣ ತಪ್ಪಿ ಸೇತುವೆಗೆ ಕಾರು ಡಿಕ್ಕಿ – ಪುಟಾಣಿ ಮಕ್ಕಳು ಸೇರಿ ನಾಲ್ವರು ಸಾವು
ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು (Car) ಸೇತುವೆಗೆ ಡಿಕ್ಕಿಯಾದ ಪರಿಣಾಮ ಮೂವರು ಪುಟಾಣಿ ಮಕ್ಕಳು (Children) ಸಹಿತ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ಸಾಣಿಕೆರೆ ಬಳಿ ನಡೆದಿದೆ.
ಮೃತರನ್ನು ಲಿಂಗಪ್ಪ (26), ಸಿಂಧುಶ್ರೀ (2), ಹಯ್ಯಾಳಪ್ಪ (5 ತಿಂಗಳು), ರಕ್ಷಾ (3 ತಿಂಗಳು) ಎಂದು ಗುರುತಿಸಲಾಗಿದೆ. ಅಪಘಾತಕ್ಕೀಡಾದವರೆಲ್ಲರೂ ರಾಯಚೂರು (Raichur) ಜಿಲ್ಲೆ ದೇವದುರ್ಗ ತಾಲೂಕಿನ ದಂಡಮ್ಮನಹಳ್ಳಿ ಗ್ರಾಮದ ಕೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕಾಗಿ ಬೆಂಗಳೂರಿನತ್ತ (Bengaluru) ಪಯಣ ಬೆಳೆಸಿದ್ದರು. ಒಂದೇ ಕುಟುಂಬದ ಕಾರ್ಮಿಕರಾಗಿದ್ದು, ತಮ್ಮ ಮಕ್ಕಳ ಸಹಿತ ಕಾರಲ್ಲಿ ಹೊರಟಿದ್ದರು. ಬೆಳಗ್ಗಿನ ಜಾವ ನಿದ್ರೆ ಮಂಪರಿನಲ್ಲಿದ್ದ ಕಾರಿನ ಚಾಲಕ ರಸ್ತೆ ಬದಿಯಲ್ಲಿದ್ದ ಸೇತುವೆಗೆ (Bridge) ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಇನ್ನೂ ಮೂವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳನ್ನು ಯಲ್ಲಮ್ಮ (30), ಮಲ್ಲಮ್ಮ (20) ಹಾಗೂ ನಾಗಪ್ಪ (35) ಎಂದು ಗುರುತಿಸಲಾಗಿದೆ. ಅವರಲ್ಲಿ ಮಲ್ಲಮ್ಮನ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬಿಟ್ ಕಾಯಿನ್ ಅಕ್ರಮ ಪ್ರಕರಣದಲ್ಲಿ ಮೊದಲ ಅರೆಸ್ಟ್- ಇಬ್ಬರ ಬಂಧನ
ಬೆಂಗಳೂರು: ಬಿಟ್ ಕಾಯಿನ್ (Bit Coin) ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಅರೆಸ್ಟ್ ಮಾಡಲಾಗಿದ್ದು, ಎಸ್ಐಟಿ (SIT) ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.
ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಮತ್ತು ಸಂತೋಷ್ನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದು, ಸಾಕ್ಷ್ಯ ನಾಶ ಮಾಡಿದ ಹಿನ್ನೆಲೆ ಈ ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಐವರನ್ನು ವಶಕ್ಕೆ ಪಡೆದಿದ್ದರು. ಬಂಧಿತರಲ್ಲಿ ಪ್ರಶಾಂತ್ ಬಾಬು ಸೈಬರ್ ಇನ್ಸ್ಪೆಕ್ಟರ್ ಆಗಿದ್ದು, ಸಂತೋಷ್ ಸೈಬರ್ ಸೆಂಟರ್ ವ್ಯಕ್ತಿ ಆಗಿದ್ದ
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು (CCB Police) ಶ್ರೀಕಿಯನ್ನು 90 ದಿನ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರು. ಸಿಸಿಬಿ ಬಂಧನದಲ್ಲಿದ್ದಾಗ ಬಿಟ್ ಕಾಯಿನ್ ಅಕ್ರಮ ಆಗಿರೋದು ಸಾಬೀತಾಗಿದೆ. ಅಕ್ರಮ ಸಾಬೀತಾದ ಹಿನ್ನೆಲೆ ಬಂಧಿಸಲಾಗಿದೆ.
90 ದಿನ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗ ಹೊಸ ಲ್ಯಾಪ್ಟ್ಯಾಪ್ ಖರೀದಿ ಮಾಡಿದ್ದರು. ಲ್ಯಾಪ್ಟಾಪ್ ಅನ್ನು ತಂತ್ರಜ್ಞಾನ ಬಳಸಿ ಸಾಕ್ಷ್ಯ ನಾಶ ಮಾಡಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಬಿಟ್ ಕಾಯಿನ್ಗಳ ವರ್ಗಾವಣೆ ಆಗಿದೆ. ಹೀಗಾಗಿ ಮಾಹಿತಿ ಆಧರಿಸಿ ಇಬ್ಬರನ್ನು ಸುದೀರ್ಘ ವಿಚಾರಣೆ ಮಾಡಿದ್ದಾರೆ. ಇನ್ನುಳಿದ ಮೂವರಿಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ದಾರೆ.
ಇಂದು ಮೂವರು ಡಿವೈಎಸ್ಪಿಗಳನ್ನು ಎಸ್ಐಟಿ ವಿಚಾರಣೆಗೆ ಕರೆದಿದೆ. ಸಿಸಿಬಿಯಲ್ಲಿ ಅಧಿಕಾರಿಗಳು ಶ್ರೀಕಿಯನ್ನು ತನಿಖೆ ನಡೆಸಿದ್ದು, ಇಂದು ವಿಚಾರಣೆಗೆ ಹಾಜರಾಗಲಿದ್ದಾನೆ. ಪ್ರಕರಣದ ಕುರಿತು ಅರೆಸ್ಟ್ ಪರ್ವ ಇಂದೂ ಸಹ ಮುಂದುವರಿಯಲಿದ್ದು, ಅಕ್ರಮ ಸಾಬೀತಾದ ಹಿನ್ನೆಲೆ ತನಿಖೆಯನ್ನು ಚುರುಕುಗೊಳಿಸಲಾಗಿದೆ. ತನಿಖೆ ದೊಡ್ಡ ದೊಡ್ಡವರ ಬುಡಕ್ಕೂ ಬರುವ ಸಾಧ್ಯತೆಯಿದೆ.
ಬಂಧಿತರನ್ನು ಪೊಲೀಸರು ಇಂದು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಮಧ್ಯಾಹ್ನದ ಬಳಿಕ ಬಂಧಿತರನ್ನು ಕೋರ್ಟ್ಗೆ ಹಾಜರುಪಡಿಸಲಿದ್ದು, 14 ದಿನ ಪೊಲೀಸ್ ಕಸ್ಟಡಿಗೆ ಪಡೆಯಲು ತಯಾರಿ ನಡೆದಿದೆ.