ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ

ಮೈಸೂರು: ಕಾರು ಪಲ್ಟಿಯಾಗಿ ಮೈಸೂರು ಬಿಜೆಪಿ(BJP) ಮುಖಂಡ ಸ್ವಾಮಿಗೌಡ ಎನ್ನುವವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಊಟಿ (Ooty) ಬಳಿ ನಡೆದಿದೆ. ಮೈಸೂರಿನ ಎನ್.ಆರ್ ಕ್ಷೇತ್ರದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಸ್ವಾಮಿಗೌಡ ಅವರು ಸ್ನೇಹಿತರ ಕುಟುಂಬದವರ ಜೊತೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ದುರಂತ ನಡೆದಿದ್ದು, ಸ್ವಾಮಿಗೌಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ದಾಬಸ್ಪೇಟೆ: ಅಪ್ರಾಪ್ತೆ ಮೇಲೆ ಅತ್ಯಾಚಾರ, ಆರೋಪಿ ಬಂಧನ:
ದಾಬಸ್ಪೇಟೆ(ಜೂ.09): ತಂದೆಗೆ ಪರಿಚಿತನಾಗಿ ಆಗಿಂದಾಗ್ಗೆ ಮನೆಗೆ ಬರುತ್ತಿದ್ದ ಅಂಗಡಿಗಳಿಗೆ ತರಕಾರಿ ಸರಬರಾಜು ಮಾಡುತ್ತಿದ್ದ ತ್ಯಾಮಗೊಂಡ್ಲು ಹೋಬಳಿ ಅಲೇನಾಯಕನಹಳ್ಳಿ ಗ್ರಾಮದ ಶಿವಕುಮಾರ್ ಪಟ್ಟಣದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿಯ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಶಿವಕುಮಾರ್ಗೆ ಈಗಾಗಲೇ ಮದುವೆಯಾಗಿದ್ದರೂ ಅಪ್ರಾಪ್ತಗೆ ಮದುವೆಯ ಆಮಿಷವೊಡ್ಡಿ ಅಪ್ರಾಪ್ತೆ ಮನೆಗೆ ಆಗಿಂದಾಗ್ಗೆ ಹೋಗಿ ಬರುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೋಗಿ ಅವಳೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಅಪ್ರಾಪ್ತೆ ಪ್ರತಿರೋಧ ತೋರಿದರೂ ಬಲವಂತವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನ್ನ ತಂದೆ ತಾಯಿಯ ಕೊಲೆ ಮಾಡುತ್ತೇನೆಂದು ಬೆದರಿಸಿದ್ದರಿಂದ ಆಕೆ ಹೆದರಿಕೆಯಿಂದ ಯಾರಿಗೂ ತಿಳಿಸಿರಲಿಲ್ಲ. ಹಾಗೆಯೇ ಬೆದರಿಸಿ ಹಲವು ಬಾರಿ ಅತ್ಯಾಚಾರವೆಸಗುತ್ತಿದ್ದ.
ಮತ್ತೊಮ್ಮೆ ಮಗಳನ್ನು ಶಾಲೆಯ ಬಳಿ ಕರೆದೊಯ್ಯಲು ಹೊಂಚು ಹಾಕುತ್ತಿದ್ದ ವೇಳೆ, ಅಪ್ರಾಪ್ತೆ ತಂದೆಗೆ ವಿಚಾರ ತಿಳಿದು ವಿಚಾರಿಸಿದಾಗ ಎಲ್ಲಾ ವಿಷಯ ತಿಳಿಸಿದ್ದಾಳೆ. ಬಾಲಕಿ ತಂದೆ ದಾಬಸ್ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದಾಬಸ್ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಜ್ಜಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಮೊಮ್ಮಗನ ಬಂಧನ:
ಮೈಸೂರು (ಜೂ.09): ಅಜ್ಜಿಯ ಬೈಗುಳ ಸಹಿಸಿಕೊಳ್ಳಲಾಗದೆ ಮೊಮ್ಮಗನೇ ಅಜ್ಜಿಯನ್ನು ಕೊಲೆಗೈದು ಶವಕ್ಕೆ ಬೆಂಕಿ ಹಚ್ಚಿದ್ದ ಮೊಮ್ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯತ್ರಿಪುರಂ ನಿವಾಸಿ ಸುಪ್ರೀತ್ (23) ಕೊಲೆ ಮಾಡಿದ ಯುವಕ. ಈತ ತನ್ನ ಅಜ್ಜಿ ಸುಲೋಚನಾ (75) ಎಂಬವರನ್ನು ಕೊಲೆಗೈದು, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ರಟ್ಟಿನ ಡಬ್ಬಕ್ಕೆ ಹಾಕಿ ಕಾರಿನಲ್ಲಿ ಕೆಆರ್ಎಸ್ ಹಿನ್ನೀರಿಗೆ ತಂದು ಒಂದು ಗುಂಡಿಯಲ್ಲಿ ಹಾಕಿ ಸುಟ್ಟಿದ್ದಾನೆ. ಇತ್ತೀಚೆಗೆ ಅರೆಬೆಂದ ಸ್ಥಿತಿಯಲ್ಲಿ ವೃದ್ಧೆಯೊಬ್ಬರು ಶವ ಪತ್ತೆಯಾದ ಬಗ್ಗೆ ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಬೆನ್ನತ್ತಿದ ಇಲವಾಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಿ.ಎಸ್. ಸ್ವರ್ಣ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಾಗ್ಗೆ ಬೈಯುತ್ತಿದ್ದ ಅಜ್ಜಿಯನ್ನು ಆರೋಪಿ ಸುಪ್ರೀತ್ ತಳ್ಳಿದ್ದಾನೆ. ತಳ್ಳಿದ ರಭಸಕ್ಕೆ ಅಜ್ಜಿ ಬಿದ್ದು ಗಾಯಗೊಂಡಿದ್ದಾರೆ. ಈ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಮೃತಹೇದವನ್ನು ಕೆಆರ್ಎಸ್ ಹಿನ್ನೀರಿನಲ್ಲಿ ತಂದು ಸುಟ್ಟು ಹಾಕಿದ್ದಾನೆ. ತನಿಖಾ ತಂಡದಲ್ಲಿ ಇನ್ಸ್ಪೆಕ್ಟರ್ ಜಿ.ಎಸ್. ಸ್ವರ್ಣ, ಎಸ್ಐ ಸುರೇಶ್ ಬೋಪಣ್ಣ, ಸಿಬ್ಬಂದಿ ರವಿಕುಮಾರ್, ಧರ್ಮ, ಸಿದ್ದವೀರಪ್ಪ, ಪ್ರಕಾಶ್, ಜಗದೀಶ್ ಶೆಟ್ಟಿ, ಆನಂದ್, ಮನೋಹರ್, ಅರುಣೇಶ್, ಮಂಜುನಾಥ್ ಹಾಗೂ ನಿಂಗರಾಜಗೌಡ ಇದ್ದರು. ಪೊಲೀಸರ ಈ ಕಾರ್ಯವನ್ನು ಎಸ್ಪಿ ಸೀಮಾ ಲಾಟ್ಕರ್ ಅಭಿನಂದಿಸಿದ್ದಾರೆ.