ಕಾಂಗ್ರೆಸ್ ಸೇರಿದ ಆಯನೂರು ಮಂಜುನಾಥ್!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಆಪರೇಷನ್ ಹಸ್ತ (Operation Hasta) ಕಾರ್ಯಾಚರಣೆ ವೇಗ ಪಡೆದುಕೊಂಡಿದೆ. ವಿವಿಧ ಪಕ್ಷಗಳ ನಾಯಕರ ಕಾಂಗ್ರೆಸ್ ಸೇರ್ಪಡೆ ಕಾರ್ಯ ಭರದಿಂದ ಸಾಗುತ್ತಿದೆ. ಈಗ ಜೆಡಿಎಸ್ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ (Former MLC Ayanur Manjunath) ಹಾಗೂ ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸ್ ತೊರೆದು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಶಿಕಾರಿಪುರದ ನಾಗರಾಜ್ ಗೌಡ (Shikaripura Nagaraj Gowda) ಅವರು ಗುರುವಾರ (ಆಗಸ್ಟ್ 24) ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ (KPCC president and Deputy CM DK Shivakumar) ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಈ ವೇಳೆ, ಜಿಲ್ಲಾ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಡಿಕೆಶಿ ಕರೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ (KPCC Office) ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆಯನೂರು ಮಂಜುನಾಥ್ ಹಾಗೂ ನಾಗರಾಜ್ ಗೌಡ ಅವರಿಗೆ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Shimoga incharge minister Madhu Bangarappa), ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಚಂದ್ರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಿವಮೊಗ್ಗ ಜಿಲ್ಲಾಧ್ಯಕ್ಷ ಸುಂದರೇಶ್ ಉಪಸ್ಥಿತರಿದ್ದರು.
ಯಾರಿಗೂ ನಾನು ಟಿಕೆಟ್ ಭರವಸೆ ಕೊಟ್ಟಿಲ್ಲ: ಡಿ.ಕೆ. ಶಿವಕುಮಾರ್
ನಾನು ಯಾರಿಗೆ ಟಿಕೆಟ್ ಭರವಸೆ ಕೊಟ್ಟಿಲ್ಲ. ಅವರ ಶಕ್ತಿ ಸಾಮರ್ಥ್ಯದ ಆಧಾರದ ಮೇಲೆ ನಿರ್ಧಾರ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಮತ್ತು ಹೈಕಮಾಂಡ್ನವರು ತೀರ್ಮಾನ ಮಾಡುತ್ತಾರೆ. ನಾವು ಆಯನೂರು ಮಂಜುನಾಥ್ ಅವರಿಗೂ ಟಿಕೆಟ್ ಭರವಸೆ ನೀಡಿಲ್ಲ. ನಾಗರಾಜ್ ಗೌಡಗೆ ವಿಧಾನಸಭೆ ಟಿಕೆಟ್ ನೀಡಲಾಗಲಿಲ್ಲ. ಕೊನೇ ಕ್ಷಣದಲ್ಲಿ ನಾಲ್ಕೈದು ಟಿಕೆಟ್ ಬದಲಾವಣೆ ಮಾಡಲು ಹೊರಟಿದ್ದೆ. ಕಾರಣಾಂತರಗಳಿಂದ ಬದಲಾವಣೆ ಮಾಡಲಾಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಆಪರೇಷನ್ ಜಿಲ್ಲಾ ನಾಯಕರು: ಡಿ.ಕೆ. ಶಿವಕುಮಾರ್
ಪಕ್ಷದ ಸಿದ್ಧಾಂತ ಒಪ್ಪಿ ಯಾರು ಪಕ್ಷ ಸೇರಲು ಮುಂದೆ ಬರುತ್ತಾರೋ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ. ಜಿಲ್ಲಾ ಮಟ್ಟದಲ್ಲಿ ಸೇರ್ಪಡೆ ಮಾಡಿಕೊಳ್ಳಿ. ವಿವಾದಿತ ವ್ಯಕ್ತಿಗಳ ಬಗ್ಗೆ ನಮ್ಮ ಗಮನಕ್ಕೆ ತನ್ನಿ. ನಾವು ಯಾರನ್ನೂ ಖರೀದಿ ಮಾಡುವುದಿಲ್ಲ. ಸಿದ್ಧಾಂತ ಒಪ್ಪಿ ಬರುವವರನ್ನು ಸೇರಿಸಿಕೊಳ್ಳಿ. ಷರತ್ತು ಹಾಕುವವರು ಇದ್ದರೆ ನಮ್ಮ ಗಮನಕ್ಕೆ ತನ್ನಿ, ಯಾವುದೇ ವಿರೋಧಿಗಳು ಇದ್ದರೂ ಕರೆ ತನ್ನಿ. ಸ್ಥಳೀಯ ಮಟ್ಟದಲ್ಲಿ ಮತಗಳ ಪ್ರಮಾಣ ಹೆಚ್ಚಳ ಮಾಡಿಕೊಳ್ಳಬೇಕು ಎಂದು ಎಲ್ಲ ಜಿಲ್ಲಾಧ್ಯಕ್ಷರಿಗೆ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದರು.