ಕೇರಳದಲ್ಲಿ ಅರೆಸ್ಟ್ ಆಗಿರುವ ಬೆಂಗಳೂರು ನಾಲ್ವರು ಪೊಲೀಸರು ಸಸ್ಪೆಂಡ್!
ಬೆಂಗಳೂರು: ವಂಚನೆ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟು ಕೇರಳ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಬೆಂಗಳೂರಿನ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಕೇರಳದಲ್ಲಿ ಕರ್ನಾಟಕದ ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ನಾಲ್ವರು ಪೊಲೀಸರನ್ನು ಬಂಧಿಸಲಾಗಿತ್ತು. ಆರೋಪಿಯನ್ನು ಬಂಧನ ಮಾಡದೇ ಇರಲು 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಕರ್ನಾಟಕದ ಪೊಲೀಸರನ್ನು ಕೇರಳದ ಕೊಚ್ಚಿಯಲ್ಲಿ ಅರೆಸ್ಟ್ ಮಾಡಲಾಗಿತ್ತು.
ಬಂಧಿತರು ಬೆಂಗಳೂರು ವೈಟ್ ಫೀಲ್ಡ್ ಸೆನ್ ಪೊಲೀಸರಾಗಿದ್ದಾರೆ. ಇವರನ್ನು ಕೊಚ್ಚಿಯ ಕಲಂಚೇರಿ ಪೊಲೀಸರು ಬಂಧಿಸಿದ್ದಾರೆ. ಆನ್ಲೈನ್ ವಂಚನೆ ಕೇಸ್ ರಿಕವರಿಗೆ ಹೋಗಿದ್ದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.
ಉದ್ಯೋಗ ಕೊಡಿಸುವುದಾಗಿ ಸಾಫ್ಟ್ವೇರ್ ಇಂಜಿನಿಯರ್ಗೆ ಮೋಸವಾಗಿತ್ತು. ಚಂದಕ್ ಶ್ರೀಕಾಂತ್ ಎಂಬಾತ ಈ ಸಂಬಂಧ ದೂರು ಕೊಟ್ಟಿದ್ದ. ಆನ್ಲೈನ್ ಮೂಲಕ 26 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದ. ಈ ಪ್ರಕರಣ ತನಿಖೆಯನ್ನು ವೈಟ್ ಫೀಲ್ಡ್ ಸಿಇಎನ್ ಪೊಲೀಸರು ನಡೆಸುತ್ತಿದ್ದರು. ಮೊದಲಿಗೆ ಮಡಿಕೇರಿಯ ಐಸಾಕ್ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್ನಲ್ಲಿ 2 ಕೋಟಿ ವರ್ಗಾವಣೆಯಾಗಿರುವುದು ಪತ್ತೆಯಾಯಿತು. ಇದರ ಜಾಡು ಹಿಡಿದು ವೈಟ್ ಫೀಲ್ಡ್ ಸಿಇಎನ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ತಂಡ ಕೇರಳಕ್ಕೆ ಹೊರಟಿತ್ತು.
ನೌಶಾದ್ ಎಂಬವನಿಂದ ಆನ್ಲೈನ್ ಫ್ರಾಡ್ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಅರೆಸ್ಟ್ ಮಾಡಲು ತೆರಳಿದ್ದ ವೈಟ್ ಫೀಲ್ಡ್ ಸಿಇಎನ್ ಪೊಲೀಸರು, ಬಂಧಿಸದೇ ಇರಲು 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದಲ್ಲಿ ತನಿಖೆಗೆ ಎಂದು ಬಂದಿರುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದರು. ಆದರೂ ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಲಾಗಿತ್ತು.
ನಿಗೂಢವಾಗಿ ನಾಪತೆಯಾಗಿದ್ದ ಕಾಶ್ಮೀರದ ಯೋಧ ವಾರದ ಬಳಿಕ ಪತ್ತೆ
ಶ್ರೀನಗರ: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಿಂದ (Jammu and Kashmir) ನಾಪತ್ತೆಯಾಗಿದ್ದ ಭಾರತೀಯ ಸೇನಾ ಯೋಧನನ್ನು (Indian Army) ಪೊಲೀಸರು ಪತ್ತೆಹಚ್ಚಿದ್ದಾರೆ. ನಿಗೂಢವಾಗಿ ನಾಪತ್ತೆಯಾಗಿ ಸುಮಾರು ಒಂದು ವಾರದ ಬಳಿಕ ಪ್ರಕರಣಕ್ಕೆ ಪೊಲೀಸರು (Police) ಅಂತ್ಯ ಹಾಡಿದ್ದಾರೆ.
ನಾಪತ್ತೆಯಾಗಿದ್ದ ಸೇನಾ ಯೋಧನನ್ನು ಕುಲ್ಗಾಮ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವೈದ್ಯಕೀಯ ತಪಾಸಣೆಯ ನಂತರ ಜಂಟಿ ವಿಚಾರಣೆ ಆರಂಭವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೋಧನ ನಾಪತ್ತೆ ಪ್ರಕರಣದ ಬಗ್ಗೆ ಪೊಲೀಸರು ಈ ಹಿಂದೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಆದರೂ ಅವರನ್ನು ಭಯೋತ್ಪಾದಕರು ಅಪಹರಿಸಿರಬಹುದು ಎಂಬ ಆತಂಕವಿತ್ತು. ಆದರೆ ಯಾವುದೇ ಉಗ್ರಗಾಮಿ ಸಂಘಟನೆಗಳು ಅವರ ಅಪಹರಣದ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ.
ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಜವಾನರನ್ನು ಅಪಹರಿಸಿದ ಪ್ರಕರಣಗಳು ಹಲವಾರು ಬಾರಿ ಸಂಭವಿಸಿವೆ. ಇದೇ ಕಾರಣಕ್ಕೆ ಅವರನ್ನು ಉಗ್ರರು ಅಪಹರಿಸಿದ್ದ ಶಂಕೆ ವ್ಯಕ್ತವಾಗಿತ್ತು. ಯೋಧನ ಹುಡುಕಾಟ ನಡೆಸುವಂತೆ ಈ ಹಿಂದೆ ಆತನ ಕುಟುಂಬ ಕೇಂದ್ರಕ್ಕೆ ಮನವಿ ಮಾಡಿತ್ತು.
ಲಡಾಖ್ನಲ್ಲಿ ನಿಯೋಜನೆಗೊಂಡಿದ್ದ ಜಾವೆದ್ ಅಹ್ಮದ್ ವಾನಿ (25) ಅವರು ರಜೆ ಮೇಲೆ ಮನೆಗೆ ತೆರಳಿದ್ದರು. ಈ ವೇಳೆ ಅವರು ಕಳೆದ ಜು.29ರ ಸಂಜೆ ಮನೆಯಿಂದ ಅಂಗಡಿಯೊಂದಕ್ಕೆ ತೆರಳಿದ್ದರು. ಬಳಿಕ ನಿಗೂಢವಾಗಿ ಕುಲ್ಗಾಮ್ನಿಂದ ಅವರು ನಾಪತ್ತೆಯಾಗಿದ್ದರು. ಅಲ್ಲದೇ ಕಾರಿನಲ್ಲಿ ಅವರ ಚಪ್ಪಲಿ ಹಾಗೂ ರಕ್ತದ ಕಲೆಗಳು ಪತ್ತೆಯಾಗಿತ್ತು ಇದರಿಂದ ಇನ್ನೂ ಆತಂಕ ಹೆಚ್ಚಾಗಿತ್ತು. ಅಲ್ಲದೇ ಅವರನ್ನು ಉಗ್ರಗಾಮಿಗಳು ಅಪಹರಿಸಿರಬಹುದು ಎಂದು ಶಂಕಿಸಲಾಗಿತ್ತು.