ಬೆಳ್ಳಂಬೆಳಗ್ಗೆ ಭೀಕರ ಅಪಘಾತ ; ನಿಂತಿದ್ದ ಟ್ಯಾಂಕರ್ ಗೆ ಟಾಟಾ ಸುಮೋ ಡಿಕ್ಕಿ- 12 ಮಂದಿ ಸಾವು!
ಚಿಕ್ಕಬಳ್ಳಾಪುರ: ರಸ್ತೆಯ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ಗೆ ಕಾರು ಡಿಕ್ಕಿಯಾಗಿ 12 ಮಂದಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದ (Chikkaballpura) ಚಿತ್ರಾವತಿ ಬಳಿ ನಡೆದಿದೆ.
ಆಂಧ್ರಪ್ರದೇಶ ನೋಂದಣಿಯ ಟಾಟಾ ಸುಮೋ (Tata Sumo) ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ. ಇಂದು ಬೆಳಗ್ಗೆ 6:30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.
ಈ ದುರ್ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇಂದು ಬೆಳಗ್ಗೆ ಅತಿಯಾದ ಮಂಜು ಇತ್ತು. ಈ ಕಾರಣಕ್ಕೆ ಚಾಲಕನಿಗೆ ರಸ್ತೆಯ ಗುರುತು ಸಿಗದೇ ನಿಂತಿದ್ದ ಟ್ಯಾಂಕರ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.
ಪಬ್ಲಿಕ್ ಟಿವಿಗೆ ಪ್ರತ್ಯಕ್ಷದರ್ಶಿ ಪ್ರತಿಕ್ರಿಯಿಸಿ, ಬೆಳಗ್ಗೆ 6:30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಕಾರು ಬಹಳ ವೇಗವಾಗಿ ಸಂಚರಿಸುತಿತ್ತು. ಹೈದರಾಬಾದ್ – ಬೆಂಗಳೂರು ಹೈವೇಯಲ್ಲಿ ರಸ್ತೆಯ ಗುರುತು ಸಿಗದೇ ಈ ಕಾರು ಗುದ್ದಿರಬಹುದು. ಕಾರಿನಲ್ಲಿದ್ದ 14 ಮಂದಿ ಪೈಕಿ 10 ಮಂದಿ ಸ್ಥಳದಲ್ಲೇ ಸಾವನಪ್ಪಿದ್ದರೆ ಇಬ್ಬರು, ಮೂವರು ಮಾತ್ರ ಉಸಿರಾಡುತ್ತಿದ್ದರು ಎಂದು ತಿಳಿಸಿದ್ದಾರೆ
ಮೃತರ ವಿವರ ಪತ್ತೆ:
ಮೃತರು ಆಂಧ್ರದ ಗೊರೆಂಟ್ಲ ಮೂಲದವರಾಗಿದ್ದು ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದರು. ದಸರಾ ಹಬ್ಬಕ್ಕೆ ಗೊರೆಂಟ್ಲ ಗ್ರಾಮಕ್ಕೆ ತೆರಳಿದ್ದ ಇವರು ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅರುಣಾ, ನವೀನ್ ಕುಮಾರ್, ನಂಜುಂಡಪ್ಪ, ಪದ್ಮಾವತಿ, ಋತ್ವಿಕ್ ಕುಮಾರ್ ಮೃತಪಟ್ಟಿದ್ದಾರೆ. ಉಳಿದ ಹೆಸರು ಲಭ್ಯವಾಗಿಲ್ಲ.
ಅಂಬಾರಿ ಹೊತ್ತಿದ್ದ ಆನೆ ಇದ್ದ ವಾಹನ ಅಪಘಾತ; ಚಾಲಕ ಸಾವು
ಬೆಂಗಳೂರು: ಅಂಬಾರಿ ಹೊತ್ತಿದ್ದ ಆನೆ ಇದ್ದ ವಾಹನ ಅಪಘಾತಕ್ಕೀಡಾಗಿದ್ದು, ವಾಹನ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆನೆ ಪ್ರಾಣಾಪಾಯದಿಂದ ಪಾರಾಗಿದೆ.
ರಾಜ್ಯದ ಗಡಿಭಾಗ ತಮಿಳುನಾಡಿನ ಸಾನ ಮಾವು ಬಳಿ ಈ ಘಟನೆ ನಡೆದಿದೆ. ಮೊನ್ನೆ ತಿರುಚಿಯಿಂದ ಬನ್ನೇರುಘಟ್ಟಗೆ ಆನೆಯನ್ನು ಕರೆತರಲಾಗಿತ್ತು. ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಾಲಯದಲ್ಲಿ ಅಂಬಾರಿಯನ್ನು ಹೊತ್ತಿದ್ದ ಆನೆ ಇದಾಗಿದ್ದು, ಮತ್ತೆ ತಿರುಚಿಗೆ ವಾಪಸ್ ಹೊರಡಲಾಗಿತ್ತು.
ಮಾರ್ಗ ಮಧ್ಯೆ ಸಾನ ಮಾವು ಸಮೀಪ ವಾಹನವನ್ನು ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಚಾಲಕ ಹೋಗಿದ್ದ. ಈ ವೇಳೆ ವಾಹನ ನಿಯಂತ್ರಣ ತಪ್ಪಿ ಅರಣ್ಯ ಪ್ರದೇಶದ ಒಳಗೆ ನುಗ್ಗಿದೆ. ಈ ಸಮಯದಲ್ಲಿ ವಾಹನವನ್ನು ಹತೋಟಿಗೆ ತರಲು ಚಾಲಕ ಪ್ರಯತ್ನಿಸಿದ್ದಾನೆ. ಆದರೆ ದುರದೃಷ್ಟವಶಾತ್ ವಾಹನಕ್ಕೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಚಾಲಕನ ಹೆಸರು ಆರೋಗ್ಯ ಸ್ವಾಮಿ ಎಂದು ತಿಳಿದುಬಂದಿದ್ದು, ಹೊಸೂರು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.